ADVERTISEMENT

ಮಹಿಳೆ ಮೇಲೆ ಹಲ್ಲೆ; ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2020, 16:36 IST
Last Updated 4 ಜುಲೈ 2020, 16:36 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಸುರಪುರ: ಆಸ್ತಿ ವಿಷಯವಾಗಿ ಮಹಿಳೆ ಮೇಲೆ ಹಲ್ಲೆ ಮಾಡಿದ್ದ ವ್ಯಕ್ತಿಗೆ ಒಂದು ವರ್ಷ ಆರು ತಿಂಗಳು ಜೈಲು ಶಿಕ್ಷೆ ಹಾಗೂ ₹21 ಸಾವಿರ ದಂಡವನ್ನು ಜೆಎಂಎಫ್ ನ್ಯಾಯಾಲಯದ ನ್ಯಾಯಾಧೀಶ ಚಿದಾನಂದ ಬಡಿಗೇರ ವಿಧಿಸಿದ್ದಾರೆ.

ಈಪ್ರಕರಣದಲ್ಲಿ ಒಂದನೇ ಆರೋಪಿ ಬಸಲಿಂಗಪ್ಪ ಅವರ ವಿರುದ್ಧ ಆರೋಪ ಸಾಬೀತಾಗಿದ್ದರಿಂದ ಶಿಕ್ಷೆ ವಿಧಿಸಿದ್ದಾರೆ. ಆದರೆ, ಎರಡನೇ ಆರೋಪಿ ನಿಂಗಪ್ಪ ಅವರ ವಿರುದ್ಧ ಆರೋಪ ಸಾಬೀತಾಗದ ಕಾರಣ ಬಿಡುಗಡೆಗೊಳಿಸಲಾಗಿದೆ. ನ್ಯಾಯಾಲಯವು ವಿಧಿಸಿದ ದಂಡದಲ್ಲಿ ₹15 ಸಾವಿರ ನೊಂದ ಮಹಿಳೆಗೆ ಹಾಗೂ ₹6 ಸಾವಿರ ನ್ಯಾಯಾಲಯಕ್ಕೆ ಜಮಾ ಮಾಡಲು ಆದೇಶದಲ್ಲಿ ತಿಳಿಸಿದ್ದಾರೆ.

ಘಟನೆ ವಿವರ:

ADVERTISEMENT

2012 ಮಾರ್ಚ್ 31 ರಂದು ದೇವರಗೋನಾಲದ ನಿವಾಸಿ ಹಣಮಂತಿ ಅವರು ‘ನಮ್ಮ ತಂದೆಯ ಪಾಲಿಗೆ ಬರಬೇಕಾದ ಆಸ್ತಿಯನ್ನು ನೀಡುವಂತೆ ಕೇಳಿದ್ದಕ್ಕೆ ಆರೋಪಿಗಳಾದ ಬಸಲಿಂಗಪ್ಪ ಹಾಗೂ ನಿಂಗಪ್ಪ ಕೂಡಿಕೊಂಡು ನನ್ನ ಮೇಲೆ ಹಲ್ಲೆ ನಡೆಸಿದ್ದರು’ ಎಂದು ಸುರಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಂದಿನ ತನಿಖಾಧಿಕಾರಿ ಎಚ್.ಎಸ್.ಪಟೇದ ಅವರು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ದೂರುದಾರರ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಮಹಾಂತೇಶ ಮಸಳಿ ವಾದ ಮಂಡಿಸಿದ್ದರು.

ಎಮ್ಮೆ ಮೇಲೆ ಮೊಸಳೆ ದಾಳಿ:

ತಾಲ್ಲೂಕಿನ ಕೊಡಾಲ ಗ್ರಾಮದಲ್ಲಿ ಕೃಷ್ಣಾ ನದಿಯ ದಡದಲ್ಲಿ ಮೇಯಲು ಹೋಗಿದ್ದ ಎಮ್ಮೆ ಮೇಲೆ ಮೊಸಳೆ ದಾಳಿ ನಡೆಸಿದ್ದು, ಎಮ್ಮೆಯ ಕಾಲು ತುಂಡರಿಸಿದೆ.

ಮೊಸಳೆ ದಾಳಿಯಿಂದ ನದಿ ಪಕ್ಕದಲ್ಲಿ ಎರಡು ದಿನಗಳಿಂದ ನರಳಾಡಿದೆ. ಶನಿವಾರ ಬೆಳಿಗ್ಗೆ ವಿಷಯ ತಿಳಿದ ಗ್ರಾಮಸ್ಥರು ಸ್ಥಳೀಯ ಪಶು ಚಿಕಿತ್ಸಾಲಯಕ್ಕೆ ತಿಳಿಸಿದ್ದರೂ ಎಮ್ಮೆಗೆ ಚಿಕಿತ್ಸೆ ನೀಡಲು ಮುಂದಾಗಿಲ್ಲ ಎಂದು ಗ್ರಾಮಸ್ಥರು
ಆರೋಪಿಸಿದರು.

ನದಿಯಲ್ಲಿ ಮೊಸಳೆ ಇರುವುದರಿಂದ ಎಮ್ಮೆ ಕಾಪಾಡಲು ಸ್ಥಳೀಯರು ಹಿಂದೇಟು ಹಾಕುತ್ತಿದ್ದಾರೆ. ಎಮ್ಮೆ ಮಾಲೀಕರೂ ಪತ್ತೆಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.