ADVERTISEMENT

ಯಾದಗಿರಿ: ಜಿಲ್ಲೆಯಲ್ಲಿ ರಫ್ತು ಉತ್ಪನ್ನಗಳು ಸೃಷ್ಟಿಸಿ–ಜಿಲ್ಲಾಧಿಕಾರಿ ಸಲಹೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 16:18 IST
Last Updated 21 ಸೆಪ್ಟೆಂಬರ್ 2021, 16:18 IST
ಯಾದಗಿರಿಯಲ್ಲಿ ಮಂಗಳವಾರ ಆಯೋಜಿಸಿದ ವಾಣಿಜ್ಯ ಸಪ್ತಾಹದಡಿ ರಫ್ತು ಸಮಾವೇಶವನ್ನು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಉದ್ಘಾಟಿಸಿದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮಾಣಿಕ್ ರಘೋಜಿ, ರೈಸ್‍ಮಿಲ್ ಅಸೋಸಿಯೇಷನ್ ಅಧ್ಯಕ್ಷ ಲಾಯಕ ಹುಸೇನ್ ಬಾದಲ್ ಇದ್ದರು
ಯಾದಗಿರಿಯಲ್ಲಿ ಮಂಗಳವಾರ ಆಯೋಜಿಸಿದ ವಾಣಿಜ್ಯ ಸಪ್ತಾಹದಡಿ ರಫ್ತು ಸಮಾವೇಶವನ್ನು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಉದ್ಘಾಟಿಸಿದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮಾಣಿಕ್ ರಘೋಜಿ, ರೈಸ್‍ಮಿಲ್ ಅಸೋಸಿಯೇಷನ್ ಅಧ್ಯಕ್ಷ ಲಾಯಕ ಹುಸೇನ್ ಬಾದಲ್ ಇದ್ದರು   

ಯಾದಗಿರಿ: ವಿದೇಶಕ್ಕೆ ರಫ್ತು ಮಾಡ ಬಹುದಾಂತಹ ಉತ್ಪನ್ನಗಳನ್ನುಜಿಲ್ಲೆಯಲ್ಲಿ ಸೃಷ್ಟಿಯಾಗ ಬೇಕು. ಇದಕ್ಕಾಗಿ ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಜಂಟಿ ಕೃಷಿ ನಿರ್ದೇಶಕರ ಇಲಾಖೆಗಳು ಸಮನ್ವಯ ಸಾಧಿಸಿ ಅವಕಾಶಗಳನ್ನು ಸೃಜಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್ ಅವರು ತಿಳಿಸಿದರು.

ನಗರದ ಖಾಸಗಿ ಹೋಟೆಲ್‍ನಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ವತಿಯಿಂದ 75ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಆಜಾದಿ ಕಾ ಅಮೃತ ಮಹೋತ್ಸವದ ಭಾಗವಾಗಿ ಮಂಗಳವಾರ ಆಯೋಜಿಸಿದ ವಾಣಿಜ್ಯ ಸಪ್ತಾಹದಡಿ ರಫ್ತು ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ರಫ್ತು ಉತ್ಪನ್ನಗಳ ಪ್ರಮಾಣ ಕಡಿಮೆ ಇದೆ. ಅದರಲ್ಲಿ ಜಿಲ್ಲೆಯಲ್ಲಿ ರಫ್ತು ಮಾಡುವಂತಹ ಉತ್ಪನ್ನಗಳನ್ನು ಉತ್ಪಾದಿಸುತ್ತಿಲ್ಲ. ಹೀಗಾಗಿ ಜಿಲ್ಲೆಯ ಕೈಗಾರಿಕೋದ್ಯಮದಾರರಿಗೆ ಇದರ ಕುರಿತು ತಿಳಿವಳಿಕೆ ನೀಡಿ, ಆ ಬಗ್ಗೆ ಉತ್ತೇಜಿಸುವುದು ಬಹುಮುಖ್ಯವಾಗಿದೆ ಎಂದರು.

ADVERTISEMENT

ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿ ರಫ್ತುವಿನ ಭಾಗವಾಗಿ ಕೆಲವು ಕೈಗಾರಿಕೆಗಳು ಸ್ಥಾಪನೆಯಾಗುತ್ತಿವೆ. ಇದರ ಲಾಭ ಪಡೆದು ಅಂತರರಾಷ್ಟ್ರೀಯ ಸಂಬಂಧಗಳನ್ನು ಬೆಸೆದು ನಮಗೆ ಅವಶ್ಯವಿರುವ ವಿದೇಶ ವಸ್ತುಗಳನ್ನು ಆಮದು ಮಾಡಿಕೊಳ್ಳಬಹುದಾಗಿದೆ ಎಂದು ಸಲಹೆ ನೀಡಿದರು.

ವಿದೇಶಗಳಲ್ಲಿ ಬೇಡಿಕೆ ಇರುವ ಪದಾರ್ಥಗಳ ಬಗ್ಗೆ ಅರಿಯಬೇಕು. ಜಿಲ್ಲೆಯಲ್ಲಿ ಅವುಗಳನ್ನು ಹೆಚ್ಚುಹೆಚ್ಚು ಉತ್ಪಾದಿಸಿ ಆ ಮೂಲಕ ರಫ್ತಿಗೆ ಉತ್ತೇಜನ ನೀಡಬೇಕು. ಮಸಾಲೆ ಪದಾರ್ಥ, ಶೇಂಗಾ ಬೀಜ, ಹತ್ತಿ ಬೆಳೆದು ವಿದೇಶಕ್ಕೆ ರಫ್ತು ಮಾಡಬಹುದಾಗಿದೆ ಎಂದರು.

ಜಿಲ್ಲೆಯ ಉದ್ಯಮದಾರರಿಗೆ ಮಾಹಿತಿ ನೀಡಿ ರಫ್ತು ಕೈಗೊಳ್ಳಲು ಮುಂದೆ ಬರಲಿ. ಜಿಲ್ಲೆಯು ರಫ್ತು ಜಿಲ್ಲೆಗಳಲ್ಲಿ ಗುರುತಿಸುವಂತಾಗಲಿ ಎಂಬ ಆಶಯವನ್ನು ಜಿಲ್ಲಾಧಿಕಾರಿಗಳು ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮಾಣಿಕ್ ರಘೋಜಿ, ಸರ್ಕಾರದಿಂದ ಪ್ರತಿಯೊಂದಕ್ಕೂ ಸಹಕಾರ ಮತ್ತು ಯೋಜನೆಗಳಿದ್ದು, ಇದರ ಲಾಭ ಪಡೆಯಬೇಕು. ಕೈಗಾರಿಕಾ ಕ್ಷೇತ್ರದಲ್ಲಿನ ಸಮಸ್ಯೆಗಳನ್ನರಿಯಲು ಮತ್ತು ರಫ್ತುವಿನ ಕುರಿತು ಮಾಹಿತಿ ನೀಡಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕಿ ರೇಖಾ ಎನ್ ಮ್ಯಾಗೇರಿ ಪ್ರಾಸ್ತವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಕೃಷಿ ಬೆಳೆಗಳಲ್ಲಿ ಹತ್ತಿ 1,52,798 ಹೆಕ್ಟರ್‌ನಲ್ಲಿ 2.56 ಲಕ್ಷ ಮೆ.ಟನ್ ಬೆಳೆಯಲಾಗುತ್ತಿದ್ದು, ಅದು ಉತ್ತಮ ಗುಣಮಟ್ಟದಿಂದ ಕೂಡಿದೆ. ಆ ಹತ್ತಿಯನ್ನು ಸ್ವಲ್ಪ ಪ್ರಮಾಣದಲ್ಲಿ ಸಂಸ್ಕರಿಸಿದರೆ ನಾವು ರಫ್ತು ಮಾಡಬಹುದಾಗಿದೆ ಎಂದವರು ತಿಳಿಸಿದರು.

ಈ ಸಂದರ್ಭದಲ್ಲಿ ಯಾದಗಿರಿ ಚೇಂಬರ್ ಆಫ್ ಕಾಮರ್ಸ್‌ ಅಧ್ಯಕ್ಷ ಹನುಮಾನ್ ದಾಸ್ ಮುಂದಡ, ರೈಸ್‍ಮಿಲ್ ಅಸೋಸಿಯೇಷನ್ ಅಧ್ಯಕ್ಷ ಲಾಯಕ ಹುಸೇನ್ ಬಾದಲ್, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಕೆ.ಎನ್.ಸಿದೇಶ್ವರ ಇದ್ದರು. ಸಹಾಯಕ ನಿರ್ದೇಶಕ ಎಂ.ಎ ಸಲೀಂ ಸ್ವಾಗತಿಸಿದರು. ಅಧೀಕ್ಷಕ ಷಣ್ಮುಖ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.