ADVERTISEMENT

ಸ್ವಯಂ ಪ್ರೇರಣೆ: ವಿದ್ಯಾರ್ಥಿಗಳ ಸಿದ್ಧಿಗೆ ಸಂಜೀವಿನಿ

ಪ್ರದೀಪ್ ಎಸ್ ವೆಂಕಟರಾಮ್
Published 9 ಮೇ 2021, 19:30 IST
Last Updated 9 ಮೇ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಳೆದ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯು ಕೋವಿಡ್ ಮೊದಲನೇ ಅಲೆಯ ನಡುವೆಯೇ ನಡೆಯಿತು. ತನ್ನ ಭವಿಷ್ಯದ ಬಗ್ಗೆ ಅನೇಕ ಕನಸುಗಳನ್ನು ಕಟ್ಟಿಕೊಂಡಿದ್ದ ಆರತಿಗೆ ನಿರೀಕ್ಷಿತ ಫಲಿತಾಂಶ ಬರಲಿಲ್ಲ. ಆದರೆ ಅವಳು ಎದೆಗುಂದಲಿಲ್ಲ; ಅವಳೇ ತಂದೆ– ತಾಯಿಗೆ ಸಾಂತ್ವನ ಹೇಳಿ ಮುಂಬರುವ ಸಪ್ಲಿಮೆಂಟರಿ ಪರೀಕ್ಷೆಗೆ ಇನ್ನೂ ಹೆಚ್ಚಿನ ತಯಾರಿ ನಡೆಸುವುದಾಗಿಯೂ ಮತ್ತು ತನ್ನ ಭವಿಷ್ಯದ ಕನಸುಗಳನ್ನು ಸಾಕಾರಗೊಳಿಸುವ ಯೋಜನೆಗಳಲ್ಲಿ ಯಾವ ಬದಲಾವಣೆಯೂ ಇಲ್ಲವೆಂದು ತಿಳಿಸಿದಳು. ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಒಳ್ಳೆಯ ಫಲಿತಾಂಶ ಗಳಿಸಿ ಕಂಪ್ಯೂಟರ್ ಸೈನ್ಸ್ ಕೋರ್ಸ್‌ಗೆ ಮೆರಿಟ್ ಸೀಟ್ ಗಿಟ್ಟಿಸಿಕೊಂಡ ಆರತಿಯಂತಹ ಯುವತಿಯರು ಎಲ್ಲರಿಗೂ ಮಾದರಿಯಾಗಬಲ್ಲರು. ಇಂತಹ ಯುವಕ– ಯುವತಿಯರ ಬಗ್ಗೆ ಹೆಮ್ಮೆಯಾಗುತ್ತದೆ, ಅಲ್ಲವೇ?

ಈ ಕಾಲಘಟ್ಟದಲ್ಲಿ ಹಿಂದೆಂದೂ ಕಂಡರಿಯದ ಸವಾಲುಗಳನ್ನೂ ಅನಿಶ್ಚಿತ ಪರಿಸ್ಥಿತಿಯನ್ನೂ ನಾವೆಲ್ಲರೂ ನೋಡುತ್ತಿದ್ದೇವೆ. ಕೈಯಲ್ಲಿರುವ ಉದ್ಯೋಗವನ್ನು ಕಾಪಾಡಿಕೊಳ್ಳುವ ಸವಾಲು ಉದ್ಯೋಗಸ್ಥರಿಗಾದರೆ, ಭವಿಷ್ಯದ ಉದ್ಯೋಗವನ್ನರಸಿ ನೂರಾರು ಕನಸುಗಳ ಬೆನ್ನೇರಿರುವ ವಿದ್ಯಾರ್ಥಿಗಳ ಆತಂಕ, ಅನುಮಾನ ಇನ್ನೊಂದೆಡೆ. ಅನಿಶ್ಚಿತತೆಯ ಈ ದಿನಗಳಲ್ಲಿ, ನಿಮ್ಮ ಕನಸುಗಳನ್ನು ಸಾಕಾರಗೊಳಿಸಬೇಕಾದರೆ, ಸ್ವಯಂಪ್ರೇರಣೆಯೇ ಸಾಧನೆಗೆ ಸಂಜೀವಿನಿಯಾಗಬೇಕು.

ಪ್ರೇರಣೆಯೆಂದರೆ, ನಮ್ಮ ಗುರಿಗಳತ್ತ ನಮ್ಮನ್ನು ಕ್ರಿಯಾತ್ಮಕವಾಗಿ ಸಾಗಿಸುವ ಚಾಲನಾ ಶಕ್ತಿ. ಏಕೆಂದರೆ, ಅತ್ಯಂತ ಶಕ್ತಿಶಾಲಿಯಾದ ಆಂತರಿಕ ಪ್ರೇರಣೆಯೇ ನಮ್ಮ ಸ್ಫೂರ್ತಿಗೂ, ಚೈತನ್ಯಕ್ಕೂ, ಕಾರ್ಯತತ್ಪರತೆಗೂ ಮೂಲ. ಪ್ರೇರಣೆ, ಬದುಕಿನ ಕನಸುಗಳನ್ನು ಕಾಣುವುದರ ಜೊತೆಗೆ ನಮ್ಮಲ್ಲಿ ಅವುಗಳನ್ನು ಸಾಧಿಸುವ ಛಲ, ಆತ್ಮವಿಶ್ವಾಸವನ್ನು ಹುಟ್ಟುಹಾಕುತ್ತದೆ.

ADVERTISEMENT

ಹಾಗಾದರೆ ಸ್ವಯಂಪ್ರೇರಣೆಯನ್ನು ಬೆಳೆಸಿಕೊಂಡು, ಅಲ್ಪಾವಧಿ ಮತ್ತು ದೀರ್ಘಾವಧಿ ಗುರಿಗಳನ್ನು ಸಾಧಿಸುವುದು ಹೇಗೆ?

1 ಬದುಕಿನ ಗುರಿಗಳು: ಸ್ಪಷ್ಟವಾದ, ಸಾಧಿಸಬಹುದಾದ ವೃತ್ತಿ ಮತ್ತು ವೈಯಕ್ತಿಕ ಬದುಕಿನ ಗುರಿಗಳು ದೃಢವಾಗಿದ್ದರೆ, ಸ್ವಯಂ ಪ್ರೇರಣೆ ತಾನೇ ತಾನಾಗಿ ಮೂಡುತ್ತದೆ. ನಿಮ್ಮ ಆಸಕ್ತಿ, ಅಭಿರುಚಿಯ ಆಧಾರದ ಮೇಲೆ ಮಾರ್ಗದರ್ಶಕರೊಡನೆ ಸಮಾಲೋಚಿಸಿ, ವೃತ್ತಿಯ ಗುರಿಗಳನ್ನು ನಿರ್ಧರಿಸಿ.

2 ಸವಾಲುಗಳನ್ನು ನಿರೀಕ್ಷಿಸಿ: ಸಾಧನೆಯ ಹಾದಿಯಲ್ಲಿ ಅನೇಕ ಅಡಚಣೆಗಳು, ವೈಫಲ್ಯಗಳು, ವಿಳಂಬಗಳು ಸರ್ವೇಸಾಮಾನ್ಯ. ಆರತಿಯಂತಹ ಅನೇಕರು ಎದುರಿಸಿದಂತಹ ಸವಾಲುಗಳು, ತೆಗೆದುಕೊಂಡ ನಿರ್ಧಾರಗಳು ಮತ್ತು ಅವರು ಕಂಡುಕೊಂಡ ಪರಿಹಾರದ ಮಾರ್ಗಗಳು ನಿಮಗೆ ಪ‍್ರೇರಣೆಯಾಗಿರಲಿ. ಹಾಗಾಗಿ ಅಡಚಣೆಗಳನ್ನು ನಿರೀಕ್ಷಿಸಿ. ಮನಸ್ಸು ಸ್ಥಿತಪ್ರಜ್ಞೆಯಿಂದಿದ್ದರೆ ಸೃಜನಶೀಲ ಚಿಂತನೆ ಸಾಧ್ಯವಾಗಿ, ಸಾಧನೆಯ ಹಾದಿ ಸುಗಮವಾಗುತ್ತದೆ.

3 ಸಕಾರಾತ್ಮಕ ಪರಿಸರ: ಸುತ್ತಮುತ್ತಲಿನ ಪರಿಸರ ಸಕಾರಾತ್ಮಕವಾಗಿರಲಿ. ನಿಷ್ಠೆಯಿಂದಿರುವ ಉತ್ತಮವಾದ ಸ್ನೇಹಿತರು ನಿಮ್ಮಲ್ಲಿನ ಪ್ರತಿಭೆಗೆ ಸಕಾರಾತ್ಮಕ ಪ್ರೇರಣೆ ನೀಡಬಲ್ಲರು; ಆದ್ದರಿಂದ, ಸ್ನೇಹಿತರ ಆಯ್ಕೆಯಲ್ಲಿ ಜಾಣ್ಮೆಯಿರಲಿ. ಏನೇ ಸಮಸ್ಯೆಗಳಿದ್ದರೂ ಮಾರ್ಗದರ್ಶಕರು, ಪೋಷಕರು, ಶಿಕ್ಷಕರು ಮತ್ತು ಸ್ನೇಹಿತರೊಡನೆ ಹಂಚಿಕೊಳ್ಳಿ. ಕ್ರೀಡೆಗಳು, ಮನರಂಜನೆಯ ಜೊತೆಗೆ ಉತ್ತಮವಾದ ಸಂದೇಶವಿರುವ ಚಲನಚಿತ್ರಗಳು, ಟಿ.ವಿ. ಕಾರ್ಯಕ್ರಮಗಳು, ಪುಸ್ತಕಗಳು, ವಿಡಿಯೊಗಳಲ್ಲಿ ನಿಯಮಿತವಾದ ಆಸಕ್ತಿಯನ್ನು ಬೆಳೆಸಿಕೊಳ್ಳಿ.

4 ಸಾಧನೆಯ ಮೈಲಿಗಲ್ಲುಗಳು: ಹತ್ತನೇ ತರಗತಿಯ ನಂತರ ಸ್ನಾತಕೋತ್ತರ ಕೋರ್ಸ್‌ವರೆಗೆ 7–8 ವರ್ಷಗಳ ಪಯಣ. ಈ ದೀರ್ಘಾವಧಿಯಲ್ಲಿನ ಸಾಧನೆಗಳನ್ನು ಸಂಭ್ರಮಿಸಿ; ಆ ಸಾಧನೆಗಳ ಹಿಂದಿರುವ ಪರಿಶ್ರಮ, ಕಾರಣಗಳನ್ನು ಅವಲೋಕಿಸಿ, ಮುಂದಿನ ಮೈಲಿಗಲ್ಲಿನ ಯೋಜನೆಗಳಲ್ಲಿ ಸೂಕ್ತವಾದ ರೀತಿಯಲ್ಲಿ ಅಳವಡಿಸಿ.

5 ಸಾಧಕರ ಕಥೆಗಳು: ಮಹಾತ್ಮ ಗಾಂಧಿಯವರಂತಹ ರಾಷ್ಟ್ರ ನಾಯಕರು, ಸಿ.ವಿ. ರಾಮನ್‌ರಂತಹ ವಿಜ್ಞಾನಿಗಳು ಮತ್ತು ಜೆ.ಆರ್.ಡಿ. ಟಾಟಾರವರಂತಹ ಹಿರಿಯ ಕೈಗಾರಿಕೋದ್ಯಮಿಗಳ ಯಶಸ್ಸಿನ ಹಿಂದಿರುವ ಪರಿಶ್ರಮದ ಕಥೆಗಳನ್ನು ಓದಿ, ನಿಮ್ಮ ಉತ್ಸಾಹವನ್ನೂ, ಸ್ವಯಂಪ್ರೇರಣೆಯನ್ನೂ ವೃದ್ಧಿಸಿಕೊಳ್ಳಿ.

ನೀವು ಕನಸುಗಳನ್ನು ಕಾಣಬಲ್ಲವರಾದಲ್ಲಿ ನಿಶ್ಚಯವಾಗಿಯೂ ನೀವು ಅವುಗಳನ್ನು ಸಾಕಾರಗೊಳಿಸಬಲ್ಲಿರಿ; ಏಕೆಂದರೆ, ನಿಮ್ಮಲ್ಲಿದೆ ಅಪಾರವಾದ ಶಕ್ತಿ. ಕೋವಿಡ್ ವೈರಾಣುವಿಂದ ಉದ್ಭವಿಸಿರುವ ಅನಿಶ್ಚಿತ ಪರಿಸ್ಥಿತಿ, ಗೊಂದಲ, ಆತಂಕದ ಇಂದಿನ ಪರಿಸ್ಥಿತಿ ತಾತ್ಕಾಲಿಕ; ಹಾಗಾಗಿ ಎದೆಗುಂದದಿರಿ ಮತ್ತು ನಿಮ್ಮ ದೀರ್ಘಾವಧಿ ಕನಸುಗಳಿಂದ ದೂರ ಸರಿಯದಿರಿ. ಪ್ರಮುಖವಾಗಿ, ನಿಮ್ಮ ಇಷ್ಟ, ಅಭಿರುಚಿಗೆ ಸ್ಪಂದಿಸುವಂತಹ ವೃತ್ತಿ ಮತ್ತು ಅದಕ್ಕೆ ಅಗತ್ಯವಿರುವ ವಿದ್ಯೆಯನ್ನು ಅರಸಿ. ನಿಮಗೆ ಒಲವಿರುವ ವೃತ್ತಿಜೀವನದಲ್ಲಿ ನಿಮ್ಮ ಸ್ವಾಭಾವಿಕ ಪ್ರತಿಭೆ ಅರಳಿ, ವೃತ್ತಿಯಲ್ಲೂ ವೈಯಕ್ತಿಕ ಬದುಕಿನಲ್ಲೂ ಯಶಸ್ಸು ನಿಮ್ಮದಾಗಬಲ್ಲದು.

(ಲೇಖಕ: ಮ್ಯಾನೇಜ್‌ಮೆಂಟ್ ಮತ್ತು ಶಿಕ್ಷಣ ತಜ್ಞರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.