ADVERTISEMENT

ಜನ್ಮ ದಿನದಂದು ಬೆಂಗಳೂರಿನಲ್ಲಿ ಇರುವುದಿಲ್ಲ ಎಂದ ಉಪೇಂದ್ರ: ಅಭಿಮಾನಿಗಳಿಗೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 8:36 IST
Last Updated 17 ಸೆಪ್ಟೆಂಬರ್ 2021, 8:36 IST
ಉಪೇಂದ್ರ
ಉಪೇಂದ್ರ   

ನಟ ಉಪೇಂದ್ರ ಅವರು ಸಿನಿಮಾದ ಜೊತೆಗೆ ರಾಜಕೀಯ ಪಕ್ಷ ‘ಪ್ರಜಾಕೀಯ’ದಲ್ಲೂ ಇತ್ತೀಚೆಗೆ ಸಕ್ರಿಯವಾಗಿದ್ದಾರೆ. ನಾಳೆ(ಸೆ.18)ಅವರ ಜನ್ಮದಿನ. ಪ್ರತಿ ವರ್ಷದಂತೆ ನೆಚ್ಚಿನ ನಟನ ಮನೆಯ ಬಳಿ ತೆರಳಿ ಅದ್ಧೂರಿಯಾಗಿ ಜನ್ಮದಿನವನ್ನು ಆಚರಿಸಬೇಕು ಎಂದು ಆಸೆ ಹೊತ್ತಿದ್ದ ನೂರಾರು ಅಭಿಮಾನಿಗಳಿಗೆ ಇದೀಗ ನಿರಾಸೆಯಾಗಿದೆ.

ಸೆ.18ರಂದು ತಾನು ಬೆಂಗಳೂರಿನಲ್ಲಿ ಇರುವುದಿಲ್ಲ ಎಂದು ಟ್ವೀಟ್‌ ಮೂಲಕ ಮಾಹಿತಿ ನೀಡಿರುವ ಉಪೇಂದ್ರ, ‘ಅಭಿಮಾನಿಗಳು ತಾವು ಇರುವಲ್ಲಿಯೇ ಜನ್ಮದಿನವನ್ನು ಸರಳವಾಗಿ ಆಚರಿಸಿ’ ಎಂದು ಕರೆ ನೀಡಿದ್ದಾರೆ. ‘ಅಭಿಮಾನಿಗಳ ದಿನ, 18.09.2021. ಪ್ರತೀ ವರ್ಷ ಅಭಿಮಾನಿಗಳೊಂದಿಗೆ ಆಚರಿಸುತ್ತಿದ್ದ ಅಭಿಮಾನಿಗಳ ದಿನದ ಸಂಭ್ರಮ ಈ ವರ್ಷವೂ ಆಚರಿಸಲು ಆಗದಿರುವುದಕ್ಕೆ ವಿಷಾದಿಸುತ್ತೇನೆ. ನಾನು ಬೆಂಗಳೂರಿನಲ್ಲಿ ಇಲ್ಲದಿರುವ ಕಾರಣ ಎಲ್ಲಾ ಅಭಿಮಾನಿಗಳು ಅವರವರು ಇರುವ ಕಡೆಯೇ ಸರಳವಾಗಿ ಈ ದಿನವನ್ನು ಆಚರಿಸಿ ಹಾರೈಸಬೇಕಾಗಿ ಬಯಸುತ್ತೇನೆ’ ಎಂದು ಟ್ವೀಟ್‌ನಲ್ಲಿ ಉಪೇಂದ್ರ ಉಲ್ಲೇಖಿಸಿದ್ದಾರೆ.

ಚಂದನವನಕ್ಕೆ ನಟರಾಗಿ ಪ್ರವೇಶಿಸುವುದಕ್ಕೂ ಮುನ್ನ ನಿರ್ದೇಶಕರಾಗಿ ಗುರುತಿಸಿಕೊಂಡವರು ಉಪೇಂದ್ರ. ‘ಓಂ’, ‘ಶ್‌’ ನಂತಹ ಹಿಟ್‌ ಚಿತ್ರಗಳನ್ನು ನಿರ್ದೇಶಿಸಿದ್ದ ಉಪೇಂದ್ರ ಅವರು ಇದೀಗ ಮತ್ತೆ ನಿರ್ದೇಶನದತ್ತ ಮುಖ ಮಾಡಿದ್ದಾರೆ. ಸೆ.18ರಂದು ಅವರ ನಿರ್ದೇಶನದ ಹೊಸ ಚಿತ್ರದ ಶೀರ್ಷಿಕೆ ಅಧಿಕೃತವಾಗಿ ಘೋಷಣೆಯಾಗುವ ನಿರೀಕ್ಷೆ ಇದೆ. ‘ಹೀಗಿರಬಹುದು ಉಪೇಂದ್ರ ನಿರ್ದೇಶನದ ಮುಂದಿನ ಚಿತ್ರದ ಪೋಸ್ಟರ್‌’ ಎಂದು ಹಲವು ಪೋಸ್ಟರ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದಕ್ಕೆ ‘ಜನ–ಅಸಾಮಾನ್ಯ’ ಎನ್ನುವ ಟ್ವೀಟ್‌ ಮಾಡುವ ಮೂಲಕ ಉಪೇಂದ್ರ ಉತ್ತರಿಸಿದ್ದಾರೆ.

ಇತ್ತೀಚೆಗೆ ಫೇಸ್‌ಬುಕ್‌ ಲೈವ್‌ನಲ್ಲಿ ಹೊಸ ಚಿತ್ರ ನಿರ್ದೇಶಿಸುವ ಕುರಿತು ಮಾತನಾಡಿದ್ದ ಉಪೇಂದ್ರ, ‘ಲಾಕ್‌ಡೌನ್‌ ಸಂದರ್ಭದಲ್ಲಿ ಹಲವು ಕಥೆಗಳನ್ನು ಸಿದ್ಧಪಡಿಸಿದ್ದೇನೆ. ನನಗೇ ಥ್ರಿಲ್‌ ಆದ ಒಂದು ವಿಷಯ ದೊರಕಿದೆ. ಶೀಘ್ರದಲ್ಲೇ ನನ್ನ ನಿರ್ದೇಶನದ ಹೊಸ ಚಿತ್ರ ಘೋಷಿಸುತ್ತೇನೆ’ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.