ADVERTISEMENT

ಮೈಸೂರು ಮೃಗಾಲಯದಿಂದ ಜಾಗ್ವಾರ್‌ ದತ್ತು ಪಡೆದ ನಟಿ ಅಮೂಲ್ಯ

​ಪ್ರಜಾವಾಣಿ ವಾರ್ತೆ
Published 16 ಜೂನ್ 2021, 10:36 IST
Last Updated 16 ಜೂನ್ 2021, 10:36 IST
ಅಮೂಲ್ಯ
ಅಮೂಲ್ಯ   

ಬೆಂಗಳೂರು: ಮೃಗಾಲಯದಲ್ಲಿರುವ ಪ್ರಾಣಿ, ಪಕ್ಷಿಗಳನ್ನು ದತ್ತು ಪಡೆಯಲು ನಟ ದರ್ಶನ್‌ ಅವರು ಕರೆಗೆ ಕೈಜೋಡಿಸಿರುವ ನಟಿ ಅಮೂಲ್ಯ ಜಗದೀಶ್‌, ಮೈಸೂರಿನ ಮೃಗಾಲಯದಲ್ಲಿನ ಜಾಗ್ವಾರ್‌ ಒಂದನ್ನು ದತ್ತು ಪಡೆದಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅಮೂಲ್ಯ, ‘ನಮ್ಮ ಕಡೆಯಿಂದ ಅಳಿಲು ಸೇವೆ ಸಲ್ಲಿಸಿರುವ ಖುಷಿ ನೀಡಿದೆ. ಇಂತಹ ಒಂದು ಉತ್ತಮ ಕಾರ್ಯಕ್ಕೆ ಬೆಂಬಲ ನೀಡಿ, ಪ್ರೋತ್ಸಾಹ ನೀಡುತ್ತಿರುವ ದರ್ಶನ್‌ ಅವರಿಗೆ ಧನ್ಯವಾದಗಳು’ ಎಂದು ತಿಳಿಸಿದ್ದಾರೆ. ಟ್ವೀಟ್‌ ಜೊತೆಗೆ ಕರ್ನಾಟಕದ ಮೃಗಾಲಯ ಪ್ರಾಧಿಕಾರ ನೀಡಿರುವ ಪ್ರಮಾಣ ಪತ್ರವನ್ನು ಅಮೂಲ್ಯ ಪೋಸ್ಟ್‌ ಮಾಡಿದ್ದಾರೆ. ಮುಂದಿನ ಒಂದು ವರ್ಷದವರೆಗೆ ಆ ಪ್ರಾಣಿಯ ನಿರ್ವಹಣಾ ವೆಚ್ಚವನ್ನು ನಟಿ ಅಮೂಲ್ಯ ಭರಿಸಿದ್ದಾರೆ.

ಪ್ರಾಣಿ, ಪಕ್ಷಿಗಳನ್ನು ದತ್ತು ಪಡೆಯಲು ದರ್ಶನ್‌ ಅವರು ಕರೆ ನೀಡಿದ ಬೆನ್ನಲ್ಲೇ ಇತ್ತೀಚೆಗಷ್ಟೇ ನಟ ಉಪೇಂದ್ರ ಇದೇ ಮೃಗಾಲಯದಿಂದ ಆಫ್ರಿಕನ್‌ ಆನೆಯೊಂದನ್ನು ಹಾಗೂ ಚಾಮುಂಡಿ ಹೆಸರಿನ ಆನೆ ಮರಿಯನ್ನು ನಿರ್ಮಾಪಕರಾದ ಉಮಾಪತಿ ಶ್ರೀನಿವಾಸ ಗೌಡ ಅವರು ದತ್ತು ಪಡೆದಿದ್ದರು.

ADVERTISEMENT

‘ಕೋವಿಡ್‌ ಮಹಾಮಾರಿಯಿಂದ ಮಾನವಕುಲಕ್ಕೆ ಎಷ್ಟು ತೊಂದರೆ ಆಗಿದೆಯೋ ಅಷ್ಟೇ ತೊಂದರೆ ಪ್ರಾಣಿಸಂಕುಲಕ್ಕೂ ಆಗಿದೆ. ಕೋವಿಡ್‌ನಿಂದಾಗಿ ಕಳೆದ ಒಂದೂವರೆ ವರ್ಷದಿಂದ ಈ ಮೃಗಾಲಯಗಳು ಸಂಕಷ್ಟದಲ್ಲಿವೆ. ಜನರು ಈ ಪ್ರಾಣಿಗಳನ್ನು ದತ್ತು ಪಡೆಯಬಹುದು. ಒಂದು ಲವ್‌ಬರ್ಡ್‌ಗೆ ವರ್ಷಕ್ಕೆ ₹1 ಸಾವಿರ, ಹುಲಿಗೆ ₹1 ಲಕ್ಷ ಹಾಗೂ ಆನೆಗೆ ₹1.17 ಲಕ್ಷ ನೀಡಿ ದತ್ತುಪಡೆದು ಪ್ರಾಣಿಸಂಕುಲ ಉಳಿಸಲು, ಮೃಗಾಲಯ ಬೆಳೆಸಲು ಎಲ್ಲರೂ ಕೈಜೋಡಿಸಿ’ ಎಂದು ದರ್ಶನ್‌ ವಿಡಿಯೊ ಸಂದೇಶದಲ್ಲಿ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.