‘ಶಾಲಾ ಮಕ್ಕಳಿಗೆ ಟೀಚಿಂಗ್ ಮಾಡುವುದೆಂದರೆ ನನಗಿಷ್ಟ’ –ಹೀಗೆಂದು ಕೆಲವು ತಿಂಗಳ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು ‘ಬಾಹುಬಲಿ‘ ಚಿತ್ರದ ಖ್ಯಾತಿಯ ನಟಿ ಅನುಷ್ಕಾ ಶೆಟ್ಟಿ.
ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿರುವ ಆಕೆ, ನಟನಾ ಕ್ಷೇತ್ರಕ್ಕೂ ಬರುವ ಮೊದಲು ಕೆಲವು ವರ್ಷಗಳ ಕಾಲ ಬೋಧನೆಯಲ್ಲಿ ತೊಡಗಿದ್ದು ಉಂಟು.
‘ವೇದಂ’, ‘ಭಾಗಮತಿ’, ‘ಅರುಂಧತಿ’, ‘ರುದ್ರಮದೇವಿ’, ಮತ್ತು ‘ಸೈಜ್ ಜೀರೊ’ದಂತಹ ಮಹಿಳಾ ಪ್ರಧಾನ ಸಿನಿಮಾಗಳ ಮೂಲಕ ಸಿನಿಪ್ರಿಯರ ಮನ ಗೆದ್ದಿರುವ ಅನುಷ್ಕಾ, ‘ನಿಶ್ಯಬ್ದಂ’ ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಆದರೆ, ಈ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತದೆಯೋ ಅಥವಾ ಒಟಿಟಿಯಲ್ಲಿ ಬಿಡುಗಡೆಯಾಗುತ್ತದೆಯೊ ಎಂಬ ಗೊಂದಲದಲ್ಲಿದ್ದು, ಇನ್ನೂ ಬಗೆಹರಿದಿಲ್ಲ. ಪ್ರಸ್ತುತ ಆಕೆಯ ಕೈಯಲ್ಲಿ ಈ ಚಿತ್ರದ ಹೊರತಾಗಿ ಬೇರೆ ಚಿತ್ರಗಳಿಲ್ಲ. ಈ ನಡುವೆಯೇ ಅನುಷ್ಕಾ ಚಿತ್ರರಂಗ ತೊರೆಯಲಿದ್ದಾರೆ ಎಂಬ ಸುದ್ದಿಯೂ ಟಾಲಿವುಡ್ ಅಂಗಳದಿಂದ ಕೇಳಿಬರುತ್ತಿದೆ.
ಇತ್ತೀಚೆಗೆ ಆಕೆ ಗೌತಮ್ ಮೆನನ್ ನಿರ್ದೇಶಿಸಲಿರುವ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸಲು ಸಹಿ ಹಾಕಿದ್ದರು. ಲಾಕ್ಡೌನ್ ಮುಂದುವರಿದಿರುವ ಪರಿಣಾಮ ಈ ಚಿತ್ರದ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಒಂದು ಮೂಲದ ಪ್ರಕಾರ ಈ ಚಿತ್ರದ ನಿರ್ಮಾಪಕರು ಆರ್ಥಿಕ ನಷ್ಟದಲ್ಲಿದ್ದಾರೆ ಎಂಬ ಸುದ್ದಿಯಿದೆ. ಹಾಗಾಗಿ, ಈ ಸಿನಿಮಾ ಸೆಟ್ಟೇರಲಿದೆಯೇ ಎಂಬ ಅನುಮಾನ ಆಕೆಯ ಅಭಿಮಾನಿಗಳಿಗೆ ಕಾಡುತ್ತಿದೆ.
ಮತ್ತೊಂದೆಡೆ ಆಕೆ ತಮಗೆ ಆಪ್ತರಾಗಿರುವ ನಿರ್ದೇಶಕರು ಮತ್ತು ನಿರ್ಮಾಪಕರ ಸಿನಿಮಾಗಳಲ್ಲಿ ನಟಿಸಲು ಮಾತ್ರವೇ ಒಪ್ಪಿಗೆ ನೀಡುತ್ತಿದ್ದಾರೆ. ಇದು ಆಕೆ ಚಿತ್ರರಂಗ ತೊರೆಯುವ ಮುನ್ಸೂಚನೆ ಇರಬಹುದು ಎಂಬುದು ಟಾಲಿವುಡ್ ಸಿನಿಪ್ರಿಯರ ಲೆಕ್ಕಾಚಾರ. ಆದರೆ, ಈ ಬಗ್ಗೆ ಆಕೆ ಎಲ್ಲಿಯೂ ಅಧಿಕೃತವಾಗಿ ಬಹಿರಂಗಪಡಿಸಿಲ್ಲ.
ಕೆಲವು ತಿಂಗಳುಗಳ ಹಿಂದೆ ಆಕೆ ತೆಲುಗು ನಿರ್ಮಾಪಕರೊಬ್ಬರ ಪುತ್ರನ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿಯೂ ಹಬ್ಬಿತ್ತು. ಕೊನೆಗೆ, ಇದನ್ನು ಆಕೆ ತಿರಸ್ಕರಿಸಿದ್ದು ಉಂಟು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.