‘ಪಾಪ ಪಾಂಡು’ ಧಾರಾವಾಹಿ ಮುಖಾಂತರ ಕನ್ನಡಿಗರ ಮನೆಮಾತಾಗಿದ್ದ ಸೌರಭ್ ಕುಲಕರ್ಣಿ ಇದೀಗ ನಿರ್ದೇಶಕರಾಗಿ ಚಂದನವನಕ್ಕೆ ಹೆಜ್ಜೆ ಇಡುತ್ತಿದ್ದಾರೆ. ಇವರ ನಿರ್ದೇಶನದ ‘ಎಸ್ಎಲ್ವಿ ಸಿರಿ ಲಂಬೋದರ ವಿವಾಹ’ ಚಿತ್ರದಲ್ಲಿ ನಟ ಮಂಡ್ಯ ರಮೇಶ್ ಪುತ್ರಿ ದಿಶಾ ರಮೇಶ್ ನಾಯಕಿಯಾಗಿದ್ದಾರೆ.
ರಂಗಭೂಮಿಯಲ್ಲಿ ಸಕ್ರಿಯರಾಗಿರುವ ದಿಶಾ, 2016ರಲ್ಲಿ ತೆರೆಕಂಡ ಬಿ.ಸುರೇಶ್ ಅವರ ನಿರ್ದೇಶನದ ‘ದೇವರ ನಾಡಲ್ಲಿ’ ಚಿತ್ರದ ಮುಖಾಂತರ ಬೆಳ್ಳಿತೆರೆಗೆ ಹೆಜ್ಜೆ ಇಟ್ಟಿದ್ದರು. ಹೊಸ ಚಿತ್ರದ ಮುಹೂರ್ತ ಇತ್ತೀಚೆಗೆ ಬೆಂಗಳೂರಿನ ಧರ್ಮಗಿರಿ ಮಂಜುನಾಥ ದೇವಸ್ಥಾನದಲ್ಲಿ ನೆರವೇರಿತು. ನಟ ಸಿಹಿಕಹಿ ಚಂದ್ರು ಕ್ಲ್ಯಾಪ್ ಮಾಡುವ ಮುಖಾಂತರ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಕ್ಯಾಮೆರಾಗೆ ಚಾಲನೆ ನೀಡಿದರು. ಮಂಡ್ಯ ರಮೇಶ್, ಮಾಸ್ಟರ್ ಆನಂದ್ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.ಮುಹೂರ್ತದ ದಿನದಿಂದಲೇ ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಆರಂಭವಾಗಿದೆ.
ಇದುಕಮರ್ಷಿಯಲ್ ಎಂಟರ್ಟೈನರ್ ಚಿತ್ರವಾಗಿದ್ದು,ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಸೌರಭ ಕುಲಕರ್ಣಿ ಹಾಗೂ ನಮ್ಮನೆ ಪ್ರೊಡಕ್ಷನ್ಸ್ ತಂಡ ರಚಿಸಿದೆ.ಈಗಾಗಲೇ ಅನೇಕ ಚಿತ್ರಗಳಲ್ಲಿ ನಟಿಸಿರುವ ಅಂಜನ್ ಎ ಬಾರಧ್ವಾಜ್ ಈ ಚಿತ್ರದ ನಾಯಕ. ರಾಜೇಶ್ ನಟರಂಗ, ಸುಂದರ್ ವೀಣಾ, ಬಾಲ ರಾಜವಾಡಿ, ರೋಹಿತ್ ನಾಗೇಶ್, ಶಬರಿ ಮಂಜು, ಹರೀಶ್ ಪ್ರಭಾತ್, ಶಿವಕುಮಾರ್, ಪಿ.ಡಿ.ಸತೀಶ್ ಚಂದ್ರ, ಗಿರೀಶ್ ಜತ್ತಿ, ಸಂತೋಷ್ ಕರ್ಕಿ, ಅಶೋಕ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.ಸಂಘರ್ಷ ಕುಮಾರ್ ಸಂಗೀತ ನಿರ್ದೇಶನ, ಕಿಟ್ಟಿ ಕೌಶಿಕ್ ಛಾಯಾಗ್ರಹಣ, ವಿನೋದ್ ಸಾಹಸ ನಿರ್ದೇಶನ, ದೇವಿಪ್ರಕಾಶ್ ಕಲಾ ನಿರ್ದೇಶನ ಹಾಗೂ ಕಂಬಿ ರಾಜು ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.