ತೆಲುಗಿನ ’ರಿಪಬ್ಲಿಕ್’ ಸಿನಿಮಾ ತಂಡ ಚಿತ್ರದ ಪ್ರಚಾರಕ್ಕಾಗಿ ಹೊಸ ತಂತ್ರವನ್ನು ಮಾಡಿದೆ. ಅದು ಜನರ ಸೇವೆಗಾಗಿ ದುಡಿದು ಮೃತರಾದ ನಿಷ್ಠಾವಂತ ಐಎಎಸ್ ಅಧಿಕಾರಿಗಳ ಕತೆಯನ್ನು ಹೇಳಲು ಮುಂದಾಗಿದೆ.
ರಿಪಬ್ಲಿಕ್ ಸಿನಿಮಾದಲ್ಲಿ ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಕುಟುಂಬದ ಕುಡಿ ಸಾಯಿ ಧರಂ ತೇಜ್ ನಟಿಸಿದ್ದಾರೆ. ಖಡಕ್ ಐಎಎಸ್ ಅಧಿಕಾರಿ ಪಾತ್ರದಲ್ಲಿ ಸಾಯಿ ತೇಜ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಒಬ್ಬ ಪ್ರಾಮಾಣಿಕ ಐಎಎಸ್ ಅಧಿಕಾರಿ ಕತೆಯನ್ನು ಹೇಳುತ್ತದೆ.
ಸಿನಿಮಾ ಪ್ರಚಾರದ ಭಾಗವಾಗಿ ಮೊದಲಿಗೆ ಕರ್ನಾಟಕದಲ್ಲಿಭ್ರಷ್ಟರಿಗೆ ಚಳಿ ಬಿಡಿಸಿದ್ದ ಧೈರ್ಯವಂತ ಐಎಎಸ್ ಅಧಿಕಾರಿ ಡಿ.ಕೆ. ರವಿ ಅವರ ಕತೆಯನ್ನು ಹೇಳಲಾಗಿದೆ. ಇದೇ ಮಾದರಿಯಲ್ಲಿ ಇನ್ನು ಕೆಲ ಅಧಿಕಾರಿಗಳ ಕತೆಯ ವಿಡಿಯೊಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಚಿತ್ರತಂಡ ಹೇಳಿದೆ.
ಡಿಕೆ ರವಿ ವೃತ್ತಿಜೀವನ, ಅವರ ಕೆಲಸದ ಆರಂಭ, ಅವರು ಸೇವೆ ಸಲ್ಲಿಸಿದ ಸ್ಥಳಗಳು, ಜನರಿಗೆ ಯಾವ ರೀತಿ ಕೆಲಸ ಅಥವಾ ಸಹಾಯ ಮಾಡಿಕೊಟ್ಟರು ಎಂಬಿತ್ಯಾದಿ ಮಾಹಿತಿಗಳನ್ನು ಸಂಗ್ರಹಿಸಿ 2.22 ನಿಮಿಷಗಳ ವಿಡಿಯೊವನ್ನು ಸಿದ್ಧಪಡಿಸಲಾಗಿದೆ. ಈ ವಿಡಿಯೊವನ್ನು ಸಾಯಿ ತೇಜ್ ಹಂಚಿಕೊಂಡಿದ್ದು #ThankYouCollectorDKRAVI ಎಂಬ ಹ್ಯಾಶ್ಟ್ಯಾಗ್ ಕೂಡ ಬಳಸಿದ್ದಾರೆ.
ಬರುವ ಅಕ್ಟೋಬರ್ನಲ್ಲಿರಿಪಬ್ಲಿಕ್ ಸಿನಿಮಾ ತೆರೆಗೆ ಬರಲಿದೆ. ಸಾಯಿ ತೇಜ್ಗೆ ನಾಯಕಿಯಾಗಿ ಐಶ್ವರ್ಯಾ ರಾಜೇಶ್ ಕಾಣಿಸಿಕೊಂಡಿದ್ದಾರೆ. ದೇವ ಕಟ್ಟ ನಿರ್ದೇಶನದ ಈ ಚಿತ್ರದಲ್ಲಿ ಜಗಪತಿ ಬಾಬು, ರಮ್ಯಾ ಕೃಷ್ಣ, ರಾಹುಲ್ ರಾಮಕೃಷ್ಣ ಮುಂತಾದವರು ನಟಿಸಿದ್ದಾರೆ. ಮಣಿ ಶರ್ಮಾ ಚಿತ್ರಕ್ಕೆ ಸಂಗೀತ ನೀಡಿದ್ಧಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.