ಮುಂಬೈ: ಕೋವಿಡ್ನಿಂದ ಗುಣಮುಖರಾಗಿ ಮುಂಬೈನ ನಾನಾವತಿ ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ನಟಿ ಐಶ್ವರ್ಯಾ ರೈ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೃದಯಸ್ಪರ್ಶಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಆ ಮೂಲಕ ತಮ್ಮ ಅಭಿಮಾನಿಗಳು ಮತ್ತು ಹಿತೈಷಿಗಳಿಗೆ ಧನ್ಯವಾದ ತಿಳಿಸಿರುವ ಅವರು 'ಕೊನೆಯವರೆಗೂ ನಿಮ್ಮ ಋಣದಲ್ಲಿರುತ್ತೇನೆ' ಎಂದು ಹೇಳಿದ್ದಾರೆ.
'ನನ್ನ ಮಗಳು, ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್ ಮತ್ತು ನನ್ನ ಬಗ್ಗೆ ನೀವೆಲ್ಲರೂ ತೋರಿಸಿದ ಕಾಳಜಿ, ಹಾರೈಕೆ ಮತ್ತು ಪ್ರೀತಿಗೆ ಅನಂತ ಧನ್ಯವಾದಗಳು. ಈ ಕಾರಣಕ್ಕೆ ನಾನು ಸಂತಸಳಾಗಿದ್ದೇನೆ ಮತ್ತು ಕೊನೆಯವರೆಗೂ ನಿಮ್ಮ ಋಣದಲ್ಲಿರುತ್ತೇನೆ. ದೇವರು ನಿಮಗೆ ಆಶೀರ್ವದಿಸಲಿ. ನಿಮ್ಮೆಲ್ಲರ ಯೋಗಕ್ಷೇಮಕ್ಕಾಗಿ ನಾನು ಪ್ರೀತಿಯಿಂದ ಪ್ರಾರ್ಥಿಸುತ್ತೇನೆ. ನೀವು ಚೆನ್ನಾಗಿರಿ ಮತ್ತು ಸುರಕ್ಷಿತವಾಗಿರಿ. ದೇವರು ಒಳ್ಳೆಯದು ಮಾಡಲಿ' ಎಂದು ತಮ್ಮ ಅಭಿಮಾನಿಗಳಿಗೆ ಐಶ್ವರ್ಯಾ ತಿಳಿಸಿದ್ದಾರೆ.
ಐಶ್ವರ್ಯಾ ರೈ ಮತ್ತು ಅವರ 8 ವರ್ಷದ ಮಗಳು ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಐಶ್ವರ್ಯಾ ಅವರ ಮಾವ ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಇನ್ನೂ ಆಸ್ಪತ್ರೆಯಲ್ಲಿದ್ದಾರೆ.
ಎರಡು ವಾರಗಳ ಹಿಂದೆ ನಟರಾದ ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್, ನಟಿ ಐಶ್ವರ್ಯಾ ರೈ ಮತ್ತು ಅವರ ಪುತ್ರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.