ADVERTISEMENT

ಸಂತ್ರಸ್ತರ ನೆರವಿಗೆ ನಿಂತ ರಾಗಿಣಿ

​ಪ್ರಜಾವಾಣಿ ವಾರ್ತೆ
Published 17 ಮೇ 2020, 19:30 IST
Last Updated 17 ಮೇ 2020, 19:30 IST
   

ನಟನೆ, ಸಿನಿಮಾ, ಪ್ರವಾಸ ಹೀಗೆ ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ಬ್ಯುಸಿಯಾಗಿರುತ್ತಿದ್ದವರು ನಟಿ ರಾಗಿಣಿ ದ್ವಿವೇದಿ. ಕೊರೊನಾ ಲಾಕ್‌ಡೌನ್‌ ವೇಳೆ ಚಿತ್ರೋದ್ಯಮದ ಚಟುವಟಿಕಗಳು ಸ್ಥಗಿತಗೊಂಡಿರುವುದರಿಂದ ಅವರು ಮನೆಯಲ್ಲಿ ಕೆಲಸವಿಲ್ಲವೆಂದು ಕೈಕಟ್ಟಿ ಕುಳಿತಿಲ್ಲ. ಲಾಕ್‌ಡೌನ್‌ ವೇಳೆ ಸಂಕಷ್ಟದಲ್ಲಿರುವ ಜನರಿಗೆ, ವಲಸೆ ಕಾರ್ಮಿಕರಿಗೆ ನೆರವಾಗಲು ಅವರ ಸಂಪೂರ್ಣ ಸಮಯ ಮೀಸಲಿಟ್ಟಿದ್ದಾರೆ.

ಎಲ್ಲೆಲ್ಲಿ ವಲಸೆ ಕಾರ್ಮಿಕರು, ಕೊಳೆಗೇರಿ ನಿವಾಸಿಗಳು ಸಂಕಷ್ಟದಲ್ಲಿದ್ದಾರೆ ಎನ್ನುವ ಮಾಹಿತಿ ಸಿಗುತ್ತದೆಯೋ ಅಲ್ಲಿಗೆ ತಮ್ಮ ತಂಡದೊಂದಿಗೆ ತೆರಳಿ ಅವರಿಗೆ ಸಿದ್ಧ ಆಹಾರ ಪೊಟ್ಟಣ ಮತ್ತು ಅಗತ್ಯ ದಿನಸಿ ಪದಾರ್ಥಗಳ ಕಿಟ್‌ ಪೂರೈಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕಾಗಿ ಆರ್‌ಡಿ ವೆಲ್‌ಫೇರ್‌ ಟ್ರಸ್ಟ್‌ (ರಾಗಿಣಿ ದ್ವಿವೇದಿ) ಸ್ಥಾಪಿಸಿಕೊಂಡು, ಜನರ ಸೇವೆಗೆ ತಮ್ಮನ್ನುಸಂಪೂರ್ಣ ತೊಡಗಿಸಿಕೊಂಡಿದ್ದಾರಂತೆ. ಟ್ರಸ್ಟ್‌ ಸದಸ್ಯರೊಂದಿಗೆ ಅವರು ಒಂದೂವರೆ ತಿಂಗಳಿನಿಂದಲೂ ಸಂಕಷ್ಟದಲ್ಲಿರುವ ಜನರ ಕಷ್ಟಗಳಿಗೆ ನೆರವಾಗುವ ಕೆಲಸವನ್ನುಸತತವಾಗಿ ಮಾಡುತ್ತಿದ್ದಾರಂತೆ.

ಕೊರೊನಾ ವಾರಿಯರ್ಸ್‌ಗಳಿಗೂ ಸುರಕ್ಷತಾ ಕಿಟ್‌ (ಸ್ಯಾನಿಟೈಸರ್‌, ಮಾಸ್ಕ್), ರುಚಿಕರ ಆಹಾರವನ್ನು ಅವರು ಉಚಿತವಾಗಿ ಪೂರೈಸುವ ಕೆಲಸವನ್ನು ಸದ್ದಿಲ್ಲದೆ ಮಾಡುತ್ತಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳನ್ನು ನೋಡಿಕೊಳ್ಳುತ್ತಿರುವ ಕೊರೊನಾ ವಾರಿಯರ್ಸ್‌ಗಳಿಗೆ ಅವರು ಇತ್ತೀಚೆಗೆ ಸಮತೋಲಿತ ಆಹಾರ ಪೂರೈಸಿ ಎಲ್ಲರ ಪ್ರಸಂಸೆಗೆ ಪಾತ್ರರಾಗಿದ್ದಾರಂತೆ. ‘ನಮ್ಮ ಮನೆಯಲ್ಲೇ ಅನ್ನಸಾಂಬಾರ್‌, ಚಪಾತಿ, ಪಲ್ಯ, ತರಕಾರಿ ಸಲಾಡ್‌ ಮಾಡಿಸಿ ಆಸ್ಪತ್ರೆಯ ಕೊರೊನಾ ವಾರಿಯರ್ಸ್‌ಗಳಿಗೆ ಊಟ ಪೂರೈಸಿದ್ದೆವು. ಆಹಾರ ಸೇವಿಸಿದವರೂ ಮುಕ್ತಕಂಠದಿಂದ ಮೆಚ್ಚುಗೆಯ ಮಾತು ಹೇಳಿದರು. ಇದು ತುಂಬಾ ಖುಷಿ ನೀಡಿತು’ ಎನ್ನುವ ಮಾತು ಸೇರಿಸಿದರು ರಾಗಿಣಿ.

ADVERTISEMENT

‘ಕೋವಿಡ್‌ ಸಮಯದಲ್ಲಿ ನೊಂದವರಿಗೆ ನೆರವು ನೀಡಲು ಈ ಟ್ರಸ್ಟ್‌ ಸ್ಥಾಪಿಸಲಾಗಿದೆ. ಜನರಿಂದ, ಜನರಿಗಾಗಿ ಮಾಡಿರುವ ಟ್ರಸ್ಟ್‌. ಸಾಮಾಜಿಕ ಜಾಲತಾಣವನ್ನೂ ಈ ಟ್ರಸ್ಟ್‌ಗೆ ಪರಿಣಾಮಕಾರಿಯಾಗಿ ಬಳಸಿಕೊಂಡು, ಸಂಕಷ್ಟದಲ್ಲಿರುವವರನ್ನು ತಲುಪುತ್ತಿದ್ದೇವೆ. ನಾನು ಸಹ ಕೈಲಾದ ನೆರವು ನೀಡಿದ್ದೇನೆ. ದಾನಿಗಳಿಂದಲೂ ನಮಗೆ ಔಷಧ, ದಿನಸಿ ಇತ್ಯಾದಿ ಧಾರಾಳವಾಗಿ ಹರಿದುಬರುತ್ತಿದೆ. ಅದನ್ನು ಅಗತ್ಯವಿರುವವರಿಗೆ ಪ್ರಾಮಾಣಿಕವಾಗಿ ತಲುಪಿಸುತ್ತಿದ್ದೇವೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.