ADVERTISEMENT

ಡಾ.ರಾಜ್‌ ಮತ್ತು ರಂಗಗೀತೆಗಳು

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2021, 19:31 IST
Last Updated 24 ಏಪ್ರಿಲ್ 2021, 19:31 IST
ಡಾ.ರಾಜ್‌ಕುಮಾರ್‌
ಡಾ.ರಾಜ್‌ಕುಮಾರ್‌   

1929ರಲ್ಲಿ ಮುತ್ತುರಾಜ್, ಮುಂದೆ ರಾಜ್‌ಕುಮಾರ್ ಎಂದು ನಾಮಕರಣಗೊಂಡರು. 1954ರಲ್ಲಿ ‘ಬೇಡರಕಣ್ಣಪ್ಪ’ ಚಿತ್ರದಿಂದ ಪ್ರಸಿದ್ಧಿಗೆ ಬಂದ ರಾಜ್‌ಕುಮಾರ್, 1961ರಲ್ಲಿ ನೆರೆಸಂತ್ರಸ್ತರ ಬದುಕಿಗಾಗಿ ಇಡೀ ಚಿತ್ರರಂಗದ ಬಳಗದೊಂದಿಗೆ ‘ರಸಮಂಜರಿ’ ಕಾರ್ಯಕ್ರಮಗಳನ್ನು ಮಾಡಿ, ಹಣ ಸಂಗ್ರಹಿಸಿ, ಅವರ ನೆರವಿಗೆ ಧಾವಿಸಿದರು. ಅವರು, 1982ರ ಗೋಕಾಕ್ ಚಳುವಳಿಯಲ್ಲಿ ಭಾಗವಹಿಸಿ, ಶಿಕ್ಷಣದಲ್ಲಿ ಪ್ರೌಢಶಾಲಾ ಶಿಕ್ಷಣದವರೆಗೆ ಕನ್ನಡವೇ ಪ್ರಥಮ ಭಾಷೆಯಾಗಿರಬೇಕೆಂದು, ಪ್ರೊ. ಗೋಕಾಕ್ ವರದಿಯನ್ನು ಜಾರಿಗೊಳಿಸಬೇಕೆಂದು ಹೋರಾಡಿದರು. ಬಡತನದಿಂದ ಬಂದವರಾಗಿ ಕೇವಲ 4ನೇ ತರಗತಿಯವರೆಗೆ ಮಾತ್ರ ಓದಿದವರು. ಕನ್ನಡ ಭಾಷೆಯ ಸ್ಪಷ್ಟ ಉಚ್ಚಾರ, ಹೃದಯಪೂರ್ವಕ ಧ್ವನಿ, ಪರಕಾಯ ಪ್ರವೇಶದ ನಟನಾ ಕೌಶಲಗಳಿಂದ, ಸಿನಿಮಾ ವೈಭವದ ಉತ್ತುಂಗ ಶಿಖರವನ್ನು ಏರಿದವರು. ಕನ್ನಡ ಭಾಷೆಯನ್ನು ಪ್ರತಿನಿಧಿಸುವ ಸಾಂಸ್ಕೃತಿಕ ಸಂಕೇತವಾದವರು ಹಾಗೂ ಇಡೀ ಭಾರತೀಯ ಚಿತ್ರರಂಗದ ಏಕಮೇವಾದ್ವಿತೀಯ ನಟರೆನಿಸಿಕೊಂಡವರು. ಸಾಮಾಜಿಕ, ಪೌರಾಣಿಕ, ಐತಿಹಾಸಿಕ ಹಾಗೂ ಜೇಮ್ಸ್ ಬಾಂಡ್ ಶೈಲಿಯ ಸಿನಿಮಾಗಳಲ್ಲಿ ಗಾಯಕ-ನಟರಾಗಿ ಅಭಿನಯಿಸಿ, ಭಾರತದಲ್ಲೇ ಏಕೆ ಇಡೀ ಪ್ರಪಂಚದಲ್ಲೇ ಅದ್ವಿತೀಯ ನಟರೆನಿಸಿಕೊಂಡವರು.

ಇವರ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರು, ದೈತ್ಯ, ಬೀಭತ್ಸ ಪಾತ್ರಗಳಿಗೆ ಹೆಸರಾದ ‘ರಂಗಸಿಂಹ’. ಎಂ.ಎನ್. ಗಂಗಾಧರರಾಯರು, ಜಿ.ವಿ.ಕೃಷ್ಣಮೂರ್ತಿಗಳು, ಹಂದಿಗನೂರು ಸಿದ್ಧರಾಮಪ್ಪ ಮೊದಲಾದವರ ಪಾತ್ರಗಳ ಬಗೆಗೆ ಮಾತು ಬಂದಾಗ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರು ನೆನಪಿಗೆ ಬರುತ್ತಾರೆ. ಭೀಮ, ಹಿರಣ್ಯಕಶಿಪು, ರಾವಣ, ಕಂಸ ಮೊದಲಾದ ಪಾತ್ರಗಳಲ್ಲಿ ಇವರು ತೋರಿಸುತ್ತಿದ್ದ ಹಾಡುಗಾರಿಕೆ, ಕಲಾವೈಖರಿ, ಕಲಾಮೈಸಿರಿಗೆ ಅಸಂಖ್ಯಾತ ಪ್ರೇಕ್ಷಕರು ದಂಗುಬಡಿದು ಹೋಗುತ್ತಿದ್ದರು. ಸ್ವತಃ ನಾಟಕ ಕಲಿಸುವ ಮಾಸ್ತರರೂ ಆಗಿದ್ದರಿಂದ ಇವರಿಗೆ ಸಂಗೀತ ಮತ್ತು ಅಭಿನಯ ಕರತಲಾಮಲಕವಾಗಿತ್ತು. ಇವರು ‘ಶೇಷಕಮಲ ನಾಟಕ ಮಂಡಳಿ’, ಗುಬ್ಬಿವೀರಣ್ಣ ಅವರ ‘ಗುಬ್ಬಿ ಕಂಪನಿ’ ಹಾಗೂ ಎಂ.ವಿ. ಸುಬ್ಬಯ್ಯನಾಯ್ಡು ಅವರ ‘ಶ್ರೀ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿ’ಯಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಇವರು ತಮ್ಮ ಮಕ್ಕಳಾದ ಮುತ್ತುರಾಜ್, ವರದರಾಜ್ ಹಾಗೂ ಶಾರದಮ್ಮ ಇವರ ಜೊತೆ ನಾಟಕ ಮಂಡಳಿಗೆ ಸೇರುತ್ತಾರೆ.

ಡಾ. ರಾಜ್‌ಕುಮಾರ್‌ರವರು 1941ರಲ್ಲಿ ಅವರ ತಂದೆ ಜೊತೆ ಗುಬ್ಬಿ ಕಂಪನಿ ಸೇರುತ್ತಾರೆ. ಗುಬ್ಬಿ ಕಂಪನಿಯಲ್ಲಿದ್ದಾಗ ಅವರು ‘ಕೃಷ್ಣಲೀಲೆ’ ಮೊದಲಾದ ನಾಟಕಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು (ಗೋಪಾಲಕ ಮತ್ತು ಸಖಿ ಪಾತ್ರ) ಮಾಡುತ್ತಿದ್ದರು. ಆಗ ಅವರಿಗೆ 12-13 ವಯಸ್ಸು. ಮುತ್ತುರಾಜ್, ‘ಭಕ್ತಪ್ರಹ್ಲಾದ’ ಸಿನಿಮಾದಲ್ಲಿಯೂ ಚಿಕ್ಕ ಪಾತ್ರವನ್ನು ಮಾಡಿದ್ದಾರೆ (1942). ಗುಬ್ಬಿ ಕಂಪನಿಯಲ್ಲಿ ಮೊದಲು 4-5 ವರ್ಷ ಸೇವೆ ಸಲ್ಲಿಸಿದರು. ಈ ಸಮಯದಲ್ಲಿ ಈ ಕಂಪನಿಯಲ್ಲಿ ಶಿಕ್ಷಣ ಪಡೆದರು. ಶ್ರೀ ಎಂ.ವಿ. ಸುಬ್ಬಯ್ಯನಾಯ್ಡು ಅವರ ‘ಶ್ರೀ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿ’ಯಲ್ಲಿ ಸುಮಾರು 11-12 ವರ್ಷ ಸೇವೆ ಮಾಡಿದ್ದಾರೆ. ಇವರ ರಂಗಭೂಮಿಯ ಸೇವೆಯು ‘ಬೇಡರಕಣ್ಣಪ್ಪ’ ಸಿನಿಮಾ ಮಾಡುವವರೆಗೂ, ಅಂದರೆ ಸುಮಾರು 10-15 ವರ್ಷಗಳ ಅವಧಿ ಎಂದು ತಿಳಿಯಬಹುದು. ಪ್ರಾಯದಲ್ಲಿ ಗುಬ್ಬಿ ಕಂಪನಿಯ ‘ಸಾಹುಕಾರ’ ನಾಟಕದಲ್ಲಿ ಸಾಹುಕಾರನ ಮಗನ ಪಾತ್ರವನ್ನು ಚೆನ್ನಾಗಿ ನಿರ್ವಹಿಸುತ್ತಿದ್ದರು.

ADVERTISEMENT

‘ಒಂಚೂರು ಮೈಕೈ ತುಂಬಿಕೊಂಡ ಮೇಲೆ ಆತನಿಗೆ ಬಲರಾಮನ ಪಾತ್ರ ನಿರ್ವಹಿಸಲು ಕೊಟ್ಟೆವು, ಆ ಪಾತ್ರವನ್ನು ಬೇರೆ ಇನ್ನಾರೂ ಮಾಡಲು ಸಾಧ್ಯವಿಲ್ಲ ಅನ್ನುವಷ್ಟರ ಮಟ್ಟಿಗೆ ರಾಜ್‌ಕುಮಾರ್ ಪಾತ್ರ ಮಾಡುತ್ತಿದ್ದರು’, ಎಂದು ರಂಗ ದಿಗ್ಗಜೆ ಗುಬ್ಬಿ ವೀರಣ್ಣನವರ ಮಗಳು ಮಾಲತಮ್ಮ ಹೇಳಿದ್ದಾರೆ. ಚಿಕ್ಕಂದಿನಲ್ಲೇ ಅಪ್ಪಾಜಿಗೌಡರಲ್ಲಿ, ಆನಂತರ ಕೃಷ್ಣಶಾಸ್ತ್ರಿಗಳಲ್ಲಿ ಸಂಗೀತ ಪಾಠವಾಗಿದ್ದರಿಂದ, ಅವರಿಗೆ ಸಂಗೀತದ ಜ್ಞಾನವಿತ್ತು. ಹಾರ‍್ಮೋನಿಯಂ, ವೀಣೆ ಮುಂತಾದ ವಾದ್ಯಗಳನ್ನು ನುಡಿಸಬಲ್ಲವರಾಗಿದ್ದರು. ‘ಸಾಹುಕಾರ’ ನಾಟಕದಲ್ಲಿ ‘ರಾಜ್‌ಕುಮಾರ್ ಸಾಹುಕಾರನ ಮಗನ ಪಾತ್ರದ ‘ನಿನ್ನೊಲು ದಯಾನ್ವಿತೆ ಯಾರಮ್ಮ’ ಹಾಡನ್ನು ಸೊಗಸಾಗಿ ಹಾಡುತ್ತಿದ್ದರು’ ಎಂದು ರಂಗಗೀತೆಗಳ ಸರದಾರ ಮತ್ತು ರಂಗ ಸಂಗೀತ ತಜ್ಞ ದಿವಂಗತ ಶ್ರೀ ಆರ್. ಪರಮಶಿವನ್ ಹೇಳಿರುತ್ತಾರೆ.

1950ರ ಸಮಯದಲ್ಲಿ ಮುತ್ತುರಾಜು, ಎಂ.ವಿ. ಸುಬ್ಬಯ್ಯನಾಯ್ಡು ಅವರ ಕಂಪನಿ ಸೇರುತ್ತಾರೆ. 1951ರಲ್ಲಿ ತಮ್ಮ ತಂದೆ ಸಾವನ್ನಪ್ಪಿದರೂ, ಇವರು ತಮ್ಮ ರಂಗ ಸೇವೆಯನ್ನು ಇಲ್ಲಿಯೇ ಮುಂದುವರೆಸಿ, ತಮ್ಮ ಪ್ರತಿಭೆಯನ್ನು ತೋರಿಸಲು ಶ್ರಮಿಸುತ್ತಾರೆ. ಈ ಸಮಯದಲ್ಲೇ ಇವರು ಈ ನಾಟಕ ಕಂಪನಿಯಲ್ಲಿ ಪ್ರಮುಖ ಪಾತ್ರಗಳನ್ನು ವಹಿಸುತ್ತಾರೆ. ‘ಭಕ್ತ ಅಂಬರೀಷ’ ನಾಟಕದಲ್ಲಿ ಎಂ.ವಿ.ಸುಬ್ಬಯ್ಯನಾಯ್ಡು ಅಂಬರೀಷನ ಪಾತ್ರ ಮಾಡಿದರೆ, ಮುತ್ತುರಾಜು ಅಂಬರೀಷನ ತಮ್ಮ ರಮಾಕಾಂತನ ಪಾತ್ರ ನಿರ್ವಹಿಸುತ್ತಿದ್ದರು. ಕೆಲವು ವರ್ಷಗಳ ಕಾಲ ಹರಿಕಥಾ ವಿದ್ವಾನ್ ಗುರುರಾಜಲು ನಾಯ್ಡು (ಅರುಣ್‌ಕುಮಾರ್) ಅವರೂ ಸಹ ರಮಾಕಾಂತನ ಪಾತ್ರವನ್ನು ಮಾಡುತ್ತಾ ಸೊಗಸಾಗಿ ಹಾಡುತ್ತಿದ್ದುದುಂಟು. ಈ ಅಂಬರೀಷ ನಾಟಕದಲ್ಲಿ ರಮಾಕಾಂತ ನಾಸ್ತಿಕನಾಗಿದ್ದು, ಆಸ್ತಿಕನಾಗಿ ಪರಿವರ್ತನೆಗೊಂಡಾಗ ಅವನು ಹಾಡುವ ಹಾಡುಗಳು ಈಗಲೂ ಪ್ರಸಿದ್ಧವಾಗಿವೆ. ಅವುಗಳನ್ನು ಮುತ್ತುರಾಜ್ ತಮ್ಮ ಮಧುರ ಕಂಠದಿಂದ ಹಾಡಿ ಸಭಿಕರನ್ನು ಮಂತ್ರಮುಗ್ಧರನ್ನಾಗಿಸುತ್ತಿದ್ದರು. ಈ ನಾಟಕದ ‘ಲೋಕಸುಖ ವ್ಯಾಕುಲಮಯ ಜೀವ...’ ಮತ್ತು ‘ವ್ಯಾಮೋಹವೇ ಈ ಸುಖದ ನೆಲೆ ಕಾಣದ ಬಾಳಿಗೆ...’ ಎಂಬ ರಂಗಗೀತೆಗಳು ನೆನಪಿಸಿಕೊಳ್ಳಲು ಈಗಲೂ ಖುಷಿಯಾಗುತ್ತದೆ.

‘ಭೂಕೈಲಾಸ’ ನಾಟಕದಲ್ಲಿ ನಾರದನ ಪಾತ್ರ, ‘ಜಗಜ್ಯೋತಿ ಬಸವೇಶ್ವರ’ದಲ್ಲಿ ಬಿಜ್ಜಳ-ಬಸವೇಶ್ವರ, ‘ರಾಮಾಯಣದಲ್ಲಿ’ ಆಂಜನೇಯ, ‘ಕುರುಕ್ಷೇತ್ರ’ದಲ್ಲಿ ಅರ್ಜುನನ ಪಾತ್ರ ಹೀಗೆ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ‘ಎಚ್ಚಮನಾಯಕ’ ನಾಟಕದಲ್ಲಿ ಚಾಂದ್‌ಖಾನ್ ಪಾತ್ರವನ್ನು ಮುತ್ತುರಾಜ್ ಅಭಿನಯಿಸಿದರೆ, ಇವರ ತಂದೆ ಪುಟ್ಟಸ್ವಾಮಯ್ಯನವರು ಬಾದಷಹನ ಪಾತ್ರದಲ್ಲಿ ರಂಜಿಸುತ್ತಿದ್ದರು. ‘ಎಚ್ಚಮನಾಯಕ’ ನಾಟಕದ ‘ಅನುರಾಗವ ಭೋಗ’ ಹಾಡು ಬಹಳ ಪ್ರಸಿದ್ಧ. ಪುಟ್ಟಸ್ವಾಮಯ್ಯನವರು ಈ ಹಾಡನ್ನು ಅದ್ಭುತವಾಗಿ ಹಾಡುತ್ತಿದ್ದರು. ಇದರ ಸಾಹಿತ್ಯ ಈ ಕೆಳಗಿನಂತಿದೆ :
ಬಾದಷಹ : ಹಾಡು ರಾಗ : ದುರ್ಗಾ - ಆದಿತಾಳ
ಅನುರಾಗವ ಭೋಗ ಸುಖವ |
ಅನುಭವವ ಮುದವ ಪಡೆವ ನಲಿವ ||ಪ||
ಮನಮೋಹನಾಂಗಿ ಮುಖ ತೋರಲೇ ನೀರೆ |
ಧ್ಯಾನ ನಿನ್ನೊಳಾಗೆ ಎನ್ನ ಸಾಮ್ರಾಜ್ಯವನೀವೇ ||ಅ.ಪ.||
ಈ ಹಾಡನ್ನು ರಾಜ್‌ಕುಮಾರ್‌ರವರು ತಮ್ಮ ‘ಆಕಸ್ಮಿಕ’ ಚಿತ್ರದಲ್ಲಿ ಅಳವಡಿಸಿಕೊಂಡು ಚೆನ್ನಾಗಿ ಹಾಡಿದ್ದಾರೆ. ಹಾಗೆಯೇ ‘ಬಸವೇಶ್ವರ’ ನಾಟಕದಲ್ಲಿ ಬಸವೇಶ್ವರ ಮತ್ತು ಬಿಜ್ಜಳ ಈ ಎರಡೂ ಪಾತ್ರಗಳನ್ನೂ ನಿರ್ವಹಿಸುತ್ತಿದ್ದು, ವಚನಗಳನ್ನು ಸೊಗಸಾಗಿ ಹಾಡುತ್ತಿದ್ದರು.

ಎಂ.ವಿ. ಸುಬ್ಬಯ್ಯನಾಯ್ಡು ಅವರ ಕಂಪನಿಯಲ್ಲಿದ್ದಾಗ ‘ಬೇಡರಕಣ್ಣಪ್ಪ’ ಚಿತ್ರದಲ್ಲಿ ನಟಿಸಲು ಮುತ್ತುರಾಜ್‌ಗೆ ಕರೆ ಬರುತ್ತದೆ. 1954ರಲ್ಲಿ ‘ಬೇಡರಕಣ್ಣಪ್ಪ’ ಸಿನಿಮಾ ಬಿಡುಗಡೆಯಾದ ಮೇಲೆ ಮುತ್ತುರಾಜ್‌ಗೆ ಹೆಚ್ಚಿನ ಸಿನಿಮಾಗಳು ಇರಲಿಲ್ಲ, ಹಾಗೆಯೇ 1958-59ರಲ್ಲಿ ಕಚ್ಚಾ ಫಿಲಂನ ಸಮಸ್ಯೆಯಿಂದ ಸಿನಿಮಾ ತಯಾರಿಕೆಯೂ ಸ್ಥಗಿತಗೊಂಡಿತ್ತು. ಈ ಸಮಯದಲ್ಲಿ ರಾಜ್‌ಕುಮಾರ್, ಜಿ.ವಿ.ಅಯ್ಯರ್, ಬಾಲಕೃಷ್ಣ ಹಾಗೂ ನರಸಿಂಹರಾಜ್‌ರವರು 1960ರಲ್ಲಿ ‘ಕನ್ನಡ ಚಲನಚಿತ್ರ ಕಲಾವಿದರ ಸಂಘ’ ಒಂದನ್ನು ಹುಟ್ಟು ಹಾಕಿ ‘ರಣಧೀರ ಕಂಠೀರವ’ ಎಂಬ ಐತಿಹಾಸಿಕ ಸಿನಿಮಾ ನಿರ್ಮಿಸಿ ಜಯವನ್ನು ಪಡೆದರು. ಕನ್ನಡ ಚಿತ್ರರಂಗದಲ್ಲಿ ಇದೊಂದು ಶ್ರೇಷ್ಠ ಐತಿಹಾಸಿಕ ನಾಟಕ. ಇದೇ ಅವಧಿಯಲ್ಲಿ ಇವರು ‘ರಾಮಾಯಣ’, ‘ಸದಾರಮೆ’, ‘ಸಾಹುಕಾರ’, ‘ಎಚ್ಚಮನಾಯಕ’, ‘ಬೇಡರಕಣ್ಣಪ್ಪ’ ಮೊದಲಾದ ನಾಟಕಗಳನ್ನು ರಾಜ್ಯಾದ್ಯಂತ ಪ್ರದರ್ಶನ ಮಾಡಿ ಹೆಸರು ಗಳಿಸಿದರು.

‘ರಾಮಾಯಣ’ ನಾಟಕ ಸಕಲೇಶಪುರದಲ್ಲಿ ಪ್ರಾರಂಭವಾದಾಗ ರಾಜ್‌ಕುಮಾರ್ ಅವರು ಆಂಜನೇಯನ ಪಾತ್ರವನ್ನು ನಿರ್ವಹಿಸುತ್ತಿದ್ದರು. ‘ರಾಮಾಯಣ’ ನಾಟಕದಲ್ಲಿ 200 ಹಾಡು ಮತ್ತು ಕಂದಗಳಿದ್ದು, ಆಂಜನೇಯ ಪಾತ್ರ ಒಂದಕ್ಕೆ ಸುಮಾರು 60 ಹಾಡುಗಳು ಇರುತ್ತಿದ್ದವು.

‘ರಾಮಾಯಣ’ ನಾಟಕದ ಆಂಜನೇಯ ಪಾತ್ರದ ಹಾಡುಗಳನ್ನು ಭಕ್ತಿಪೂರ್ವಕವಾಗಿ ಹಾಡುತ್ತಿದ್ದರು. ಈ ನಾಟಕದಲ್ಲಿನ ಹಾಡುಗಳನ್ನು ದಿ. ಶ್ರೀ ಆರ್. ಪರಮಶಿವನ್ ಅವರು ರಾಜ್‌ರವರಿಗೆ ಕಲಿಸಿಕೊಟ್ಟರು. ಇಂತಹವುಗಳಲ್ಲಿ ‘ಇಂತಿವರ ನುಡಿಯ ದೂರದಲಿ ಕೇಳಿ’, ‘ರವಿಶಶಿಗಳಂತಿರ್ಪ ರಮ್ಯ ಮೂರ್ತಿಗಳಾರು’ ಎಂಬ ರಾಗಮಾಲಿಕೆಯ ಕಂದಪದ್ಯಗಳು, ‘ಸುರ ಕುಲವಮಂ ಹಿಂಸಿಸಿ’ ಎಂಬ ಕಂದ, ‘ಕಂಡೆನಾ ಲಂಕಾಪುರವ’ ಎಂಬ ಹಾಡು ಮತ್ತು ‘ದಶರಥ ನೃಪಾಲಂಗೆ ಹಿರಿತನುಜ ತಾನಾಗಿ’ ಎಂಬ ರಾಗಮಾಲಿಕೆಯ ಪದ್ಯಗಳು ಪ್ರಮುಖವಾದವುಗಳು.

ಕನ್ನಡ ಚಿತ್ರರಂಗದ ಇನ್ನೊಬ್ಬ ಪ್ರಬುದ್ಧ ನಟ ಮುಸುರಿ ಕೃಷ್ಣಮೂರ್ತಿಗಳು ಸಿನಿಮಾ ರಂಗಕ್ಕೆ ಬರುವ ಮೊದಲು ನಾಟಕಗಳಲ್ಲಿಯೂ ಪಾತ್ರ ವಹಿಸುತ್ತಿದ್ದರು. ;ರಾಮಾಯಣ’ ನಾಟಕದಲ್ಲಿನ ಆಂಜನೇಯನ ಪಾತ್ರದ ಹಾಡುಗಳಲ್ಲಿ ಒಂದಾದ ‘ಇಂತಿವರ ನುಡಿಯ’ ರಾಗಮಾಲಿಕೆವುಳ್ಳ ಕಂದಪದ್ಯವನ್ನು ಸೊಗಸಾಗಿ ಹಾಡುತ್ತಿದ್ದರು. ‘ಬೇಡರಕಣ್ಣಪ್ಪ’ ನಾಟಕದಲ್ಲಿ ಕಣ್ಣಪ್ಪನ ಹಾಡುಗಳನ್ನು ರಾಜ್‌ಕುಮಾರ್ ಚೆನ್ನಾಗಿ ಹಾಡುತ್ತಿದ್ದರು. ಇವುಗಳಲ್ಲಿ - ‘ಎನ್ನ ಸಿರಿಯೆ ಎನ್ನ ದೊರೆಯೆ’, ‘ಬಡವನ ಬಾಳು’, ‘ಸಣ್ಣ ಜಾತಿ ಕಣ್ಣನ ಮೇಲೆ ಕಣ್ಣು ತೆರೆಯೊ ಮುಕ್ಕಣ್ಣ’ ಮೊದಲಾದವು ಪ್ರಸಿದ್ಧ ಹಾಡುಗಳು. ಸದಾರಮೆ ನಾಟಕದಲ್ಲಿನ ‘ಎಲ್ಲಿ ನೋಡಲು ಶೋಭಿಕುಂ’ ಎಂಬ ಹಾಡನ್ನೂ ಇವರು ಸೊಗಸಾಗಿ ಹಾಡುತ್ತಿದ್ದರು ಎಂದು ತಿಳಿದುಬರುತ್ತದೆ.

400ಕ್ಕೂ ಹೆಚ್ಚಿನ ಚಿತ್ರಗೀತೆಗಳನ್ನು ಹಾಡಿರುವ ಡಾ. ರಾಜ್ ಅವರು 150ಕ್ಕೂ ಹೆಚ್ಚು ಭಕ್ತಿಗೀತೆಗಳನ್ನು, ಭಾವಗೀತೆಗಳನ್ನು ಹಾಗೂ ಜಾನಪದ ಗೀತೆಗಳನ್ನೂ ಹಾಡಿದ್ದಾರೆ. ಒಟ್ಟು 208 ಕನ್ನಡ ಚಲನಚಿತ್ರಗಳಲ್ಲಿ ನಟಿಸಿರುವ ಡಾ. ರಾಜ್, 21 ಪೌರಾಣಿಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇವರ ಈ ನಾಟಕಗಳ ಹೆಚ್ಚಿನ ಹಾಡುಗಳಲ್ಲಿ ರಂಗಗೀತೆಗಳ, ರಂಗಸಂಗೀತದ ಧಾಟಿಯನ್ನು ನಾವು ನಿಚ್ಚಳವಾಗಿ ಕಾಣಬಹುದು. ‘ಬಭ್ರುವಾಹನ’, ‘ಭಕ್ತಪ್ರಹ್ಲಾದ’, ‘ಭೂಕೈಲಾಸ’, ‘ಮೋಹಿನಿ ಭಸ್ಮಾಸುರ’, ಮೊದಲಾದ ಚಿತ್ರಗಳಲ್ಲಿ ಇವುಗಳ ಛಾಯೆ ದಟ್ಟವಾಗಿ ಕಾಣುತ್ತದೆ. ‘ಬಬ್ರುವಾಹನ’ ಚಿತ್ರದಲ್ಲಿ ಅರ್ಜುನ-ಬಭ್ರುವಾಹನ ಈ ಎರಡೂ ಪಾತ್ರಗಳಿಗೆ, ‘ಇಲ್ಲೊಂದು ದ್ವಂದ್ವ ಗೀತೆಯಿದ್ದರೆ ಚೆನ್ನ’ ಎಂದು ಕನ್ನಡ ಚಿತ್ರರಂಗದ ಹೆಸರಾಂತ ಸಾಹಿತಿ-ನಿರ್ದೇಶಕ ಶ್ರೀ ಹುಣಸೂರು ಕೃಷ್ಣಮೂರ್ತಿಗಳಿಗೆ ರಾಜ್ ತಿಳಿಸಿದ ಫಲವೇ ‘ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ’ ಎಂಬ ಗೀತೆ. ಹಾಗೆಯೇ ಭಕ್ತಪ್ರಹ್ಲಾದ ಚಿತ್ರದಲ್ಲಿ ‘ಸಿಗಿವೆಂ ಕ್ಷಣದಲ್ಲಿ ನಿನ್ನ ನಾಂ’ ಎಂಬ ಹಂಸಧ್ವನಿಯ ಹಾಡು ಅವರ ತಂದೆಯ ದೈತ್ಯ ಪಾತ್ರದ ಹಾಡಿನಂತಿದೆ.

ದಾದಾಸಾಹೇಬ್ ಫಾಲ್ಕೆ, ಕರ್ನಾಟಕರತ್ನ, ನಾಡೋಜ, ಪದ್ಮಭೂಷಣ, ಕೆಂಟುಕಿಕರ್ನಲ್, ವರನಟ, ಕನ್ನಡ ಕಂಠೀರವ, ಕಲಾ ಕೌಸ್ತುಭ, ರಸಿಕರರಾಜ, ಗಾನ ಗಾರುಡಿಗ, ನಟಸಾರ್ವಭೌಮ, ಮೊದಲಾದ ಅನೇಕ ಪ್ರಶಸ್ತಿ / ಬಿರುದುಗಳಿಗೆ ಭಾಜನರಾಗಿರುವ ಡಾ. ರಾಜ್‌ಕುಮಾರ್ ಅವರಿಗೆ, ‘ನಾದಮಯ’ ಎಂಬ ‘ಜೀವನಚೈತ್ರ’ ಸಿನಿಮಾದ ಹೃದಯಂಗಮ ಹಾಡಿಗೆ ರಾಷ್ಟ್ರಪ್ರಶಸ್ತಿ ಸಹ ಸಂದಿದೆ. ಅಲ್ಲದೆ ಹತ್ತಾರು ಸಂಘ-ಸಂಸ್ಥೆಗಳ ಅತ್ಯುತ್ತಮ ನಟ, ಗಾಯಕ ಪ್ರಶಸ್ತಿಗಳೂ ಸಹ ಅವರ ಪಾಲಾಗಿವೆ.

ಕೊರಗು : ‘ಬಭ್ರುವಾಹನ’, ‘ಭಕ್ತಪ್ರಹ್ಲಾದ’ ಹಾಗೂ ‘ಆಕಸ್ಮಿಕ’ ಚಿತ್ರಗಳಲ್ಲಿನ ಪೌರಾಣಿಕ ರಂಗಗೀತೆಗಳನ್ನು ಕೇಳಿದ ಮೇಲೆ, ಡಾ. ರಾಜ್‌ಕುಮಾರ್ ಅವರು ವೃತ್ತಿ ರಂಗಭೂಮಿಯಲ್ಲಿ ಸಾಕಷ್ಟು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರೂ, ಅವರ ಸಿನಿಮಾ ಜೀವನದ ಅವಧಿಯಲ್ಲಿ ಹೆಚ್ಚಿನ ವೇಳೆ ರಂಗಗೀತೆಗಳನ್ನು ಏಕೆ ಬಹಳವಾಗಿ ಹಾಡಲಿಲ್ಲ? 400ಕ್ಕೂ ಹೆಚ್ಚಿನ ಚಿತ್ರಗೀತೆಗಳನ್ನು, 150ಕ್ಕೂ ಹೆಚ್ಚು ಭಕ್ತಿಗೀತೆಗಳನ್ನು ಹಾಗೂ ಜಾನಪದ ಗೀತೆಗಳನ್ನು ಹಾಡಿರುವ ಅವರು, ಕೊನೆಯ ಪಕ್ಷ 40-50 ರಂಗಗೀತೆಗಳನ್ನೊಳಗೊಂಡ ಧ್ವನಿಸುರುಳಿಯನ್ನಾದರೂ ಏಕೆ ಹೊರತರಲಿಲ್ಲ? ಈ ರಂಗಗೀತೆಗಳನ್ನು ಅವರ ಧ್ವನಿಯಲ್ಲಿ ಸದಾ ಕಾಲ ಕೇಳುವ ಮುಖಾಂತರ ರಂಗಭೂಮಿಯ ವೃತ್ತಿ ನಾಟಕಗಳ ವೈಭವ, ಹಿರಿಮೆ-ಗರಿಮೆ ಜನಮನದಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತಿರಲಿಲ್ಲವೆ? ಎಂದು ವೃತ್ತಿ ರಂಗಭೂಮಿಯ ದಿನಗಳಲ್ಲಿ ಹಾಗೂ ಆನಂತರ ರಾಜ್‌ಕುಮಾರ್ ಅವರ ಸಂಗಡವೇ ಇದ್ದ ರಂಗಸಂಗೀತ ತಜ್ಞ ದಿ. ಆರ್. ಪರಮಶಿವನ್ ಅವರನ್ನೊಮ್ಮೆ ನಾನು ಕೇಳಿದಾಗ, ‘ಅದಕ್ಕಾಗಿ ಪ್ರಯತ್ನ ನಡೆದಿತ್ತು, ಅನೇಕ ಬಾರಿ ನಾನು ರಾಜ್‌ಕುಮಾರ್ ಅವರ ಮನೆಗೆ ಹೋಗಿ ‘ಅದಕ್ಕಾಗಿ ತಾಲೀಮು ಸಹ ನಡೆದಿತ್ತು, ಆದರೆ ಕಾರಣಾಂತರಗಳಿಂದ ರಂಗಗೀತೆಗಳ ಧ್ವನಿಸುರುಳಿ ಹೊರತರುವ ಕಾರ್ಯ ಸಾಧ್ಯವಾಗಲಿಲ್ಲ’ ಎಂದು ಬೇಸರದಿಂದ ಹೇಳಿದರು. ಇದು ನಿಜಕ್ಕೂ ರಂಗಭೂಮಿಗೆ ಆದ ತುಂಬಲಾರದ ನಷ್ಟ ಎಂದು ನನ್ನ ಭಾವನೆ. ಏಕೆ ಅವರು ಸಿನಿಮಾ ರಂಗದಲ್ಲಿ ಇರುವಾಗಲೇ ಅಥವಾ ಆನಂತರದ ದಿನಗಳಲ್ಲಿ ನಾವು ಈ ದಿಕ್ಕಿನಲ್ಲಿ ಯೋಚಿಸಲಿಲ್ಲ? ಪ್ರಯತ್ನಿಸಲಿಲ್ಲ ಎಂದು ಈಗಲೂ ನನ್ನನ್ನು ಕಾಡುತ್ತಿದೆ.

ಲೇಖಕರು: ಅಧ್ಯಕ್ಷರು, ಕರ್ನಾಟಕ ರಂಗಸಂಗೀತ ಪರಿಷತ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.