ADVERTISEMENT

ವೃತ್ತಿರಂಗಭೂಮಿ ಚರಿತ್ರಕಾರ ‘ಗವೀಶ ಹಿರೇಮಠ’

ಗುಡಿಹಳ್ಳಿ ನಾಗರಾಜ
Published 5 ಸೆಪ್ಟೆಂಬರ್ 2020, 19:30 IST
Last Updated 5 ಸೆಪ್ಟೆಂಬರ್ 2020, 19:30 IST
ಗವೀಶ ಹಿರೇಮಠ
ಗವೀಶ ಹಿರೇಮಠ   

ಕಲಾವಿದರ, ನಾಟಕ ಕಂಪನಿಗಳ ಅಸಂಖ್ಯಾತ ಚಿತ್ರಣಗಳನ್ನು ಕಟ್ಟಿಕೊಟ್ಟು ಅದರ ಚರಿತ್ರೆಕಾರ ಎನಿಸಿದ್ದ ಗವೀಶ ಹಿರೇಮಠ ಅವರ ಅಗಲಿಕೆಯು ವೃತ್ತಿ ರಂಗಭೂಮಿಗೆ ಬಹುದೊಡ್ಡ ನಷ್ಟ.

ವೃತ್ತಿರಂಗಭೂಮಿಯ ನೂರಾರು ಕಲಾವಿದರ ವ್ಯಕ್ತಿಚಿತ್ರ ಕಟ್ಟಿಕೊಟ್ಟವರು ಗವೀಶ ಹಿರೇಮಠ. ಹತ್ತಾರು ನಾಟಕ ಕಂಪನಿಗಳ ಪರಿಚಯವನ್ನೂ ಮಾಡಿಸಿದರು. ಪುಸ್ತಕ ಪ್ರಕಟಣೆ, ಅಂಕಣ ಬರಹ, ಸಾಕ್ಷ್ಯಚಿತ್ರ ನಿರ್ಮಾಣ, ಆಕಾಶವಾಣಿ, ದೂರದರ್ಶನಗಳಲ್ಲಿ ಸಂದರ್ಶನಗಳ ಮೂಲಕ ಈ ಕೆಲಸವನ್ನು ಅವರು ನಿರಂತರವಾಗಿ ಮಾಡಿದರು. ವೃತ್ತಿರಂಗಭೂಮಿ ಕುರಿತ ಬಹುದೊಡ್ಡ ದಾಖಲೀಕರಣ ಅದು. ರಂಗಭೂಮಿ ಕುರಿತು ಸರಿಯಾದ ದಾಖಲೀಕರಣವೇ ಇಲ್ಲದಿದ್ದ ಸನ್ನಿವೇಶದಲ್ಲಿ ಗವೀಶರು ಮಾಡಿದ ಕೆಲಸ ಮುಖ್ಯವಾದುದು. ಹಾಗಾಗಿ ಅವರನ್ನು ವೃತ್ತಿರಂಗಭೂಮಿಯ ಚರಿತ್ರಕಾರ ಎನ್ನಲು ಅಡ್ಡಿಯಿಲ್ಲ.

‘ಪ್ರಣಯ ಮುಕ್ತಕಗಳು’, ‘ನಿನಗಿನ್ನೂ ಹೇಳುವುದಿದೆ’, ‘ಬದುಕು ಚದುರಂಗದಾಟ’, ‘ಹಕ್ಕಿ ಗೂಡು ಸೇರಿತು’ ಕೃತಿಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಹೆಜ್ಜೆಗುರುತು ಮೂಡಿಸಿದವರು ಅವರು. ಬಳಿಕ ರಂಗಭೂಮಿ ಕಡೆಗೆ ಹೊರಳಿದ ಅವರು ಅಲ್ಲಿಂದ ಹಿಂತಿರುಗಿ ನೋಡಿದ್ದೇ ಇಲ್ಲ. ಸ್ವಯಂಜ್ಯೋತಿ ನಾಟ್ಯಸಂಘದ ಸಾರಥ್ಯವನ್ನು ಕೆಲಕಾಲ ವಹಿಸಿದ್ದರು. ‘ರಂಗ ಕುಸುಮಗಳು’, ‘ರಂಗಾಂತರಂಗ’, ‘ಹೊತ್ತು ಮುಳುಗುವ ಮುನ್ನ’ ಪುಸ್ತಕಗಳಲ್ಲಿ ನೂರಾರು ಕಲಾವಿದರನ್ನು ತಮ್ಮದೇ ವರ್ಣನಾಮಯ ಶೈಲಿಯಲ್ಲಿ ಹಿಡಿದಿಟ್ಟರು. ಈ ಮಧ್ಯೆ ಗದ್ದಗಿಮಠ, ಎಂ.ಎಸ್.ಲಠ್ಠೆ, ಮಿಣಜಗಿ ಮುಂತಾದ ಸಾಹಿತಿ, ಕಲಾವಿದರ ಬದುಕು–ಬರಹ ಕುರಿತು ಪುಸ್ತಕಗಳನ್ನು ಪ್ರಕಟಿಸಿದರೂ ಮತ್ತೆ ಮತ್ತೆ ಅವರ ಚಿತ್ತ ರಂಗಭೂಮಿಯತ್ತಲೇ ಹೊರಳಿತು.

ADVERTISEMENT

ಕೊಪ್ಪಳ ತಾಲ್ಲೂಕು ಬಿಸರಳ್ಳಿಯಲ್ಲಿ ವೀರಭದ್ರಯ್ಯ ಹಿರೇಮಠ-ಪಾರ್ವತಿದೇವಿ ದಂಪತಿಗೆ 1946ರಲ್ಲಿ ಜನಿಸಿದ ಗವೀಶರು ಧಾರವಾಡಕ್ಕೆ ಕಾಲೇಜು ವಿದ್ಯಾಭ್ಯಾಸಕ್ಕಾಗಿ ಹೋದವರು ಅಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ಗ್ರಂಥಾಲಯದ ನೌಕರನಾಗಿ ಸೇರಿದರು. ಕಲಬುರ್ಗಿ ಸ್ನಾತಕೋತ್ತರ ಕೇಂದ್ರಕ್ಕೆ ವರ್ಗಾವಣೆಯಾದರು. ಅದು ವಿಶ್ವವಿದ್ಯಾಲಯವಾಗಿ ಪರಿವರ್ತನೆಯಾದ ನಂತರ 2004ರಲ್ಲಿ ನಿವೃತ್ತಿಯವರೆಗೆ ಅಲ್ಲಿಯೇ ಸೇವೆ ಸಲ್ಲಿಸಿದರು.

ವಿಶ್ವವಿದ್ಯಾಲಯದ ತಮ್ಮ ಕೆಲಸದ ಅವಧಿ ನಂತರ ಕಲಬುರ್ಗಿ ಇರಲಿ ಸುತ್ತಲಿನ ಯಾವುದೇ ಊರಿನ ನಾಟಕ ಕಂಪನಿಗಳಿರಲಿ ಅಲ್ಲಿ ಹೆಚ್ಚು ಕಾಲ ಕಳೆದು ನಾಟಕ ವೀಕ್ಷಿಸಿ ತಮ್ಮದೇ ಅಭಿಪ್ರಾಯ ರೂಪಿಸಿಕೊಂಡು ಕಲಾವಿದರ ಜೊತೆ ಮಾತನಾಡಿ ವ್ಯಕ್ತಿಚಿತ್ರಗಳನ್ನು ಕಟ್ಟಿಕೊಡುತ್ತ ಹೋದರು. ತಮ್ಮ ಬದುಕಿನ ಬಹುಭಾಗ ಅವರು ಈ ಕೆಲಸ ಮಾಡಿದರು. ಪ್ರಖ್ಯಾತ ಕಲಾವಿದರಾದ ಫಕೀರಪ್ಪ ವರವಿ, ರೆಹಿಮಾನವ್ವ ಕುಕನೂರು, ಶ್ರೀಧರ ಹೆಗಡೆ ಕುರಿತು ಪುಸ್ತಕಗಳನ್ನು ರಚಿಸಿದರು.

ಅಭಿನಂದನಾ ಗ್ರಂಥಗಳ ಸೇವೆ ಸಾಮಾನ್ಯವಾಗಿ ಸಾಹಿತಿಗಳು ಹಾಗೂ ಕೆಲವು ಹಣವಂತರಿಗೆ ಸಲ್ಲುವುದು ಹೆಚ್ಚು. ಗ್ರಾಮೀಣ, ವೃತ್ತಿ, ಜಾನಪದ, ಪೌರಾಣಿಕ ನಾಟಕಗಳ ಕಲಾವಿದರ ಕುರಿತ ಗ್ರಂಥ ಹೊರತರಲು ಯಾರು ಮುಂದೆ ಬರಬೇಕು? ಸುಭದ್ರಮ್ಮ ಮನ್ಸೂರು ಅವರಂತಹ ಮೇರುಪ್ರತಿಭೆ ಬಗ್ಗೆ ಅಭಿನಂದನಾ ಗ್ರಂಥ ಹೊರಬರಲಿಲ್ಲ. ಕಾಡುಕುಸುಮದಂತಿದ್ದ ಹತ್ತಾರು ವೃತ್ತಿ ರಂಗ ಕಲಾವಿದರ ಕುರಿತು ‘ರಂಗಪ್ರಭೆ’, ‘ಸಿರಿಗಂಧ’, ‘ಸಂಪ್ರೀತಿ’, ‘ಚಿನ್ನದಗಟ್ಟಿ’, ‘ಗಾಳಿಗಂಧ’, ‘ಧೀಮಂತೆ’, ‘ರಂಗ ಆರಾಧಕ’, ‘ರಂಗದೀಪ್ತಿ’ ಅಭಿನಂದನಾ ಕೃತಿಗಳನ್ನು ಗವೀಶರು ಸಂಪಾದಿಸಿದರು. ನಿರ್ಲಕ್ಷಿತ ವಲಯವನ್ನು ಲಕ್ಷಿಸಿ ದಾಖಲಿಸಿದ ಈ ಕೆಲಸ ಮುಖ್ಯವಾದುದು. ಬರೀ ಬರೆಯುತ್ತ ಕುಳಿತರೆ ಸಾಲದು ಎಂದು ಹಲವು ಬಡ ರಂಗಕಲಾವಿದರ ಸಹಾಯಾರ್ಥ ನಾಟಕ ಪ್ರದರ್ಶನ, ಅವರಿಗೆ ಗೌರವ, ಸನ್ಮಾನ ಮುಂತಾದ ಕೆಲಸಗಳಲ್ಲೂ ಗವೀಶರು ಕೈಜೋಡಿಸಿದರು.

ಕಲಾವಿದರ ಪರಿಚಯದ ಅವರ ಲೇಖನಗಳಲ್ಲಿ ತುಸು ಬಣ್ಣನೆ ಹೆಚ್ಚು. ಕಲಾವಿದರ ಕುರಿತು ಅವರಿಗಿದ್ದ ಪ್ರೀತಿಯ ದ್ಯೋತಕ ಅದು. ಪ್ರತಿಮೆ, ಅಲಂಕಾರವನ್ನು ಬಳಸುತ್ತಿದ್ದ ಅವರ ಬರಹಗಳಲ್ಲಿ ವಿಶ್ಲೇಷಣೆ ಅಥವಾ ವಿಮರ್ಶಾತ್ಮಕ ನಿಲುವು ತುಸು ಕಡಿಮೆ. ಮತ್ತೆ ಮತ್ತೆ ಪ್ರಕಟಿಸುವಾಗ ಅಪ್‍ಡೇಟ್ ಮಾಡುವ ಗುಣದ ಕೊರತೆ ಇತ್ತು. ಹವ್ಯಾಸಿ ಸೇರಿದಂತೆ ಒಟ್ಟಾರೆ ರಂಗಭೂಮಿಯಲ್ಲಿ ವೃತ್ತಿರಂಗಭೂಮಿಯ ಪಾತ್ರ ಗುರುತಿಸುವಂತಿದ್ದರೆ ಅವರ ಬರವಣಿಗೆಗೆ ಇನ್ನೂ ತೂಕ ಬರುತ್ತಿತ್ತು. ಆದರೆ, ದಾಖಲೆಯೇ ಕ್ವಚಿತ್ತಾಗಿರುವ ಕಡೆ ಗವೀಶರು ಎಷ್ಟೋ ಕೆಲಸ ಮಾಡಿದರು. ಹಲವು ಕಲಾವಿದರ ಕುರಿತ ಮಾಹಿತಿ ಬೇಕಾದರೆ ಅವರ ಬರಹ ಹಾಗೂ ಅದಕ್ಕೂ ಮೊದಲು ಈ ಕೆಲಸ ಆರಂಭಿಸಿದ ಹ.ವೆ.ಸೀತಾರಾಮಯ್ಯ ಅವರ ‘ಕನ್ನಡ ರಂಗಭೂಮಿ ಕಲಾವಿದರು’ ಪುಸ್ತಕಗಳನ್ನು ನಾವು ಆಶ್ರಯಿಸಬೇಕಿದೆ.

ಪತ್ನಿ ಸುಶೀಲಾ ಹಾಗೂ ಪುತ್ರ ಸಂತೋಷ ಎಂಬ ವೈಯಕ್ತಿಕ ಪುಟ್ಟ ಸಂಸಾರಕ್ಕಿಂತ ರಂಗಭೂಮಿಯ ಗವೀಶರ ಸಂಸಾರವೇ ದೊಡ್ಡದಾಗಿತ್ತು. ಅಸಂಖ್ಯಾತ ವೃತ್ತಿರಂಗಭೂಮಿ ಕಲಾವಿದರು ಅವರಿಗೆ ಚಿರಪರಿಚಿತರಾಗಿದ್ದರು. ಕರ್ನಾಟಕ ನಾಟಕ ಅಕಾಡೆಮಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದರು. ಕಳೆದ ವರ್ಷದ ನಾಟಕ ಅಕಾಡೆಮಿಯ ಪುಸ್ತಕ ಬಹುಮಾನಕ್ಕೆ ಗವೀಶರ ‘ಪಂಚಾಕ್ಷರಿ ಗವಾಯಿಗಳ ನಾಟ್ಯ ಸಂಘ’ ಆಯ್ಕೆಯಾಗಿತ್ತು. ಗವೀಶರ ಕುರಿತು ಕಲಬುರ್ಗಿಯ ಮಹಿಪಾಲರೆಡ್ಡಿ ಮನ್ನೂರು, ಪ್ರಭಾಕರ ಜೋಶಿ ಮತ್ತಿತರರು ‘ಗುಣಗ್ರಾಹಿ’ ಎಂಬ ಅಭಿನಂದನಾ ಗ್ರಂಥ ಹೊರತರಲು ಸಿದ್ಧತೆ ನಡೆಸಿದ್ದರು. ಈ ಎರಡು ತುರಾಯಿಗಳನ್ನು ಧರಿಸುವ ಮೊದಲೇ ಗವೀಶರು ಇನ್ನಿಲ್ಲವಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.