ನವದೆಹಲಿ: ಖ್ಯಾತ ರಂಗ ನಿರ್ದೇಶಕ, ರಾಷ್ಟ್ರೀಯ ನಾಟಕ ಶಾಲೆಯ (ಎನ್ಎಸ್ಡಿ) ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಇಬ್ರಾಹಿಂ ಅಲ್ಕಾಜಿ (94) ಅವರು ಮಂಗಳವಾರ ಮಧ್ಯಾಹ್ನ ಹೃದಯಾಘಾತದಿಂದ ಕೊನೆಯುಸಿರೆಳೆದರು.
ಅತಿ ಹೆಚ್ಚು ಅವಧಿಗೆ ಎನ್ಎಸ್ಡಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಅಲ್ಕಾಜಿ ಅವರು, ಸಾಹಿತಿ ಗಿರೀಶ್ ಕಾರ್ನಾಡ್ ಅವರ ‘ತುಘಲಕ್’ ಹಾಗೂ ಧರಂವೀರ್ ಭಾರತಿ ಅವರ ‘ಅಂಧಾ ಯುಗ್’ ಮುಂತಾದ ನಾಟಕಗಳನ್ನು ನಿರ್ದೇಶಿಸಿದ್ದರು. ಜನಪ್ರೀಯ ನಟರಾದ ನಸೀರುದ್ದೀನ್ ಶಾ, ಓಂ ಪುರಿ ಮುಂತಾದ ನೂರಾರು ಕಲಾವಿದರಿಗೆ ಅಲ್ಕಾಜಿ ಗುರುಗಳಾಗಿದ್ದರು.
‘ಮಧ್ಯಾಹ್ನ 2.45ರ ವೇಳೆಗೆ ಹೃದಯಾಘಾತದಿಂದ ತಂದೆ ಮೃತಪಟ್ಟರು’ ಎಂದು ಅವರ ಮಗ ಫೈಸಲ್ ಅಲ್ಕಾಜಿ ತಿಳಿಸಿದರು.
ಪ್ರಧಾನಿ ಮೋದಿ ಸಂತಾಪ: ಅಲ್ಕಾಜಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ‘ರಂಗಭೂಮಿಯ ಏಳಿಗೆಗೆ ದುಡಿದ ಹಾಗೂ ರಾಷ್ಟ್ರದ ಮೂಲೆಮೂಲೆಗೂ ರಂಗಭೂಮಿ ತಲುಪುವಂತೆ ಮಾಡಿದ ಅಲ್ಕಾಜಿ ಅವರ ಪ್ರಯತ್ನವನ್ನು ಮರೆಯಲು ಸಾಧ್ಯವಿಲ್ಲ. ಕಲಾ ಜಗತ್ತು ಹಾಗೂ ಸಂಸ್ಕೃತಿಗೆ ಇವರ ಕೊಡುಗೆ ಶ್ಲಾಘನೀಯ. ಅವರ ನಿಧನದಿಂದ ದುಃಖವಾಗಿದೆ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.