ಬೆಂಗಳೂರು: ಹನುಮಂತ ಹಾಲಗೇರಿ ನಿರ್ದೇಶನದಲ್ಲಿವಿಶ್ವ ರಂಗ ಥಿಯೇಟರ್ ಪ್ರಸ್ತುತಪಡಿಸುತ್ತಿರುವ ‘ಅಲೈದೇವ್ರು’ ನಾಟಕಕ್ಕೆ ಕೆಲವು ಹಿಂದೂ ಸಂಘಟನೆಗಳ ಯುವಕರು ಬೆದರಿಕೆ ಹಾಕುತ್ತಿದ್ದಾರೆ ಎಂದು ರಂಗಕರ್ಮಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಭಾನುವಾರ ಸಂಜೆ 4 ಮತ್ತು 7 ಗಂಟೆಗೆ ಬಸವೇಶ್ವರನಗರದಲ್ಲಿರುವ ಪ್ರಭಾತ್ ಕೆಇಬಿ ರಂಗಮಂದಿರದಲ್ಲಿ ಈ ನಾಟಕ ಪ್ರದರ್ಶನ ಕಾಣಲಿದೆ. ಈ ಪ್ರದರ್ಶನವನ್ನು ಯಶಸ್ವಿಯಾಗಿ ನಡೆಸಲು ರಂಗಕರ್ಮಿಗಳು ನಿರ್ಧರಿಸಿದ್ದಾರೆ.
‘ತಂಡದ 40ಕ್ಕೂ ಹೆಚ್ಚು ಸದಸ್ಯರು ಕಳೆದ ಮೂರು ತಿಂಗಳಿ
ನಿಂದ ಅಭ್ಯಾಸ ಮಾಡಿದ್ದೇವೆ. ಕಳೆದ ಮೂರು ದಿನಗಳಿಂದ ದೂರವಾಣಿ ಕರೆಗಳ ಮೂಲಕ ಬೆದರಿಕೆ ಹಾಕಿ, ಪದರ್ಶನ ನಡೆಸದಂತೆ ಒತ್ತಡ ಹೇರಲಾಗುತ್ತಿದೆ. ತಂಡಕ್ಕೆ ರಕ್ಷಣೆ ನೀಡುವಂತೆ ಸಂಬಂಧಿಸಿದ ಪೊಲೀಸ್ ಠಾಣೆಗೆ ಮನವಿ ಮಾಡಿದ್ದೇವೆ. ನಾಟಕ ಪ್ರದರ್ಶನದ ಮೂಲಕವೇ ಬೆದರಿಕೆ ಹಾಕಿದವರಿಗೆ ಉತ್ತರಿಸಲು ನಿರ್ಧರಿಸಿದ್ದೇವೆ’ ಎಂದು ಹೆಸರು ಹೇಳಲು ಇಚ್ಛಿಸದ ಸಂಘಟಕರೊಬ್ಬರು ತಿಳಿಸಿದ್ದಾರೆ.
‘ಎಲ್ಲ ರಂಗಾಸಕ್ತರೂ ಒಟ್ಟಾಗಿ ನಾಟಕ ಪ್ರದರ್ಶನ ಕಾಣುವಂತೆ ನೋಡಿಕೊಳ್ಳಬೇಕು. ರಂಗಭೂಮಿಯನ್ನು ಇಬ್ಭಾಗ ಮಾಡುವ ಚಿಂತನೆಗಳನ್ನು ಸೋಲಿಸೋಣ’ ಎಂದು ರಂಗಕರ್ಮಿ ಗುಂಡಣ್ಣ ಚಿಕ್ಕಮಗಳೂರು ಅವರು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.