ADVERTISEMENT

ಬಿಗ್ ಬಾಸ್ ವಿಜೇತ ಸಿದ್ಧಾರ್ಥ್ ಶುಕ್ಲಾ ಹೃದಯಾಘಾತದಿಂದ ನಿಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಸೆಪ್ಟೆಂಬರ್ 2021, 7:20 IST
Last Updated 2 ಸೆಪ್ಟೆಂಬರ್ 2021, 7:20 IST
ಸಿದ್ಧಾರ್ಥ್ ಶುಕ್ಲಾ, ಚಿತ್ರ ಕೃಪೆ–ಇನ್‌ಸ್ಟಾಗ್ರಾಂ
ಸಿದ್ಧಾರ್ಥ್ ಶುಕ್ಲಾ, ಚಿತ್ರ ಕೃಪೆ–ಇನ್‌ಸ್ಟಾಗ್ರಾಂ   

ಬೆಂಗಳೂರು:ಹಿಂದಿಯ ಬಿಗ್‌ ಬಾಸ್ 13 ನೇ ಆವೃತ್ತಿಯವಿಜೇತ ಹಾಗೂ 'ಬಾಲಿಕಾ ವಧು‘ ಧಾರಾವಾಹಿ ಖ್ಯಾತಿಯಸಿದ್ಧಾರ್ಥ ಶುಕ್ಲಾ (40) ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.

‘ಎದೆ ನೋವಿನಿಂದ ಅವರು ಇಂದು ಮುಂಬೈನ ಕೂಪರ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಅವರು ಚಿಕಿತ್ಸೆ ಫಲಿಸದೇ ಮೃತರಾಗಿದ್ದಾರೆ’ಎಂದು ವೈದ್ಯರು ತಿಳಿಸಿದ್ದಾರೆ.

ಸಿದ್ಧಾರ್ಥ್ ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.ಮೊದಲು ರೂಪದರ್ಶಿಯಾಗಿದ್ದ ಶುಕ್ಲಾ ಅವರು, ದೂರದರ್ಶನದ ಪ್ರಮುಖ ಧಾರಾವಾಹಿ ‘ಬಾಬುಲ್‌ ಕಾ ಆಂಗನ್ ಚೂಟೆ ನಾ‘ ಮೂಲಕ ನಟನಾ ರಂಗಕ್ಕೆ ಪದಾರ್ಪಣೆ ಮಾಡಿದರು. ನಂತರ ‘ಜಾನೆ ಪೆಹ್ಚಾನೆ ಸೆ ... ಯೆ ಅಜ್ನಬಿ", ‘ಲವ್ ಯು ಜಿಂದಗಿ‘ ನಂತಹ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದರೂ, ಅವರು ದೂರದರ್ಶನದಲ್ಲಿ ದೀರ್ಘಕಾಲ ಪ್ರಸಾರವಾದ ‘ಬಾಲಿಕಾ ವಧು‘ ಧಾರಾವಾಹಿ ಮೂಲಕ ದೇಶದಾದ್ಯಂತ ಮನೆಮಾತಾಗಿದ್ದರು.

ADVERTISEMENT

ಹಿಂದಿಯಲ್ಲಿ ಸಲ್ಮಾನ್ ಖಾನ್ ನಡೆಸಿ ಕೊಡುವ ಬಿಗ್‌ ಬಾಸ್‌ನ 13 ನೇ ಆವೃತ್ತಿಯಲ್ಲಿ ಭಾಗವಹಿಸಿ ವಿಜೇತರಾಗಿದ್ದ ಅವರು ಕರಣ್ ಜೋಹರ್ ನಿರ್ಮಾಣದ'ಹಂಪ್ಟಿ ಶರ್ಮಾ ಕಿ ದುಲ್ಹೇನಿಯಾ' ಸಿನಿಮಾದಲ್ಲೂ ನಟಿಸಿದ್ದರು. ಅಲ್ಲದೇ 'ಡ್ಯಾನ್ಸ್‌ ದಿವಾನೇ3' ರಲ್ಲಿ ಸೇರಿದಂತೆ ಅನೇಕ ಹಿಂದಿಯ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು.

ಉತ್ತರ ಪ್ರದೇಶ ಮೂಲದ ಶುಕ್ಲಾ ಅವರು, ಡಿಸೆಂಬರ್ 12, 1980 ರಲ್ಲಿ ಜನಿಸಿ, ಮುಂಬೈನಲ್ಲಿ ಶಿಕ್ಷಣ ಪಡೆದುಕೊಂಡು ಅಲ್ಲಿಯೇ ನೆಲೆ ನಿಂತಿದ್ದರು. ಅವರ ನಿಧನಕ್ಕೆ ಬಾಲಿವುಡ್ ಸೇರಿದಂತೆ ಅನೇಕ ಜನ ಕಂಬನಿ ಮಿಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.