ಬೆಂಗಳೂರು: ಭಾರೀ ಗಲಾಟೆ, ಗದ್ದಲದ ನಡುವೆ ಕಳೆದ ಬಿಗ್ ಬಾಸ್ ಎರಡನೆ ಇನಿಂಗ್ಸ್ನ ಎರಡನೇ ವಾರ ನಾಯಕಿಯಾಗಿದ್ದ ದಿವ್ಯಾ ಉರುಡುಗ ಹಿತಾಸಕ್ತಿ ಸಂಘರ್ಷಕ್ಕೆ ಸಿಲುಕಿದ್ದರೇ? ಎಂಬ ಪ್ರಶ್ನೆ ಎದ್ದಿದೆ.
ಅರವಿಂದ್ ಕೆ.ಪಿ ಜೊತೆ ಆಪ್ತವಾಗಿರುವ ದಿವ್ಯಾ ಉರುಡುಗ ಅವರು ತಮಗೆ ಗೊತ್ತೋ ಗೊತ್ತಿಲ್ಲದೆಯೋ ಅವರಿಗೆ ಅನುಕೂಲ ಮಾಡಿಕೊಟ್ಟ ಬಗ್ಗೆ ಸುದೀಪ್ ಪ್ರಶ್ನೆ ಎತ್ತಿದ್ದಾರೆ. ಅಲ್ಲಿ ಹಿತಾಸಕ್ತಿ ಸಂಘರ್ಷವಿತ್ತು ಎಂದು ಒತ್ತಿ ಹೇಳಿದ್ದಾರೆ.
ಸುದೀಪ್ ಹೇಳಿದ್ದೇನು?: ಕ್ಯಾಪ್ಟನ್ಸಿ ಟಾಸ್ಕ್ ವೇಳೆ ಪೆಟ್ಟಿಗೆಗಳ ಕೀ ಬಳಸಿ ಬೀಗ ತೆಗೆಯುವ ಟಾಸ್ಕ್ ಕೊಡಲಾಗಿತ್ತು. ಆದರೆ, ಒಮ್ಮೆ ಬಳಸಿದ ಕೀ ಅನ್ನು ಮತ್ತೆ ಎಲ್ಲಿಂದ ತಂದರೋ ಅಲ್ಲಿಯೇ ಹಾಕಬೇಕೆಂಬ ನಿಯಮವಿದ್ದರೂ ಸಹ ಅರವಿಂದ್ ಮಾತ್ರ ತಾವು ಬಳಸಿದ ಕೀಗಳನ್ನು ಪೆಟ್ಟಿಗೆ ಮೇಲಿಟ್ಟು ಹೋಗುತ್ತಿದ್ದರು. ಇದನ್ನು ಗಮನಿಸಿದ್ದ ಪ್ರಶಾಂತ್ ಎಚ್ಚರಿಸಿದರೂ ದಿವ್ಯಾ, ಅರವಿಂದ್ ಅವರಿಗೆ ಸರಿಯಾಗಿ ಎಚ್ಚರಿಕೆ ಕೊಟ್ಟಿರಲಿಲ್ಲ. ಕೀ ವಾಪಸ್ ಇಟ್ಟು ಸುಮ್ಮನಾಗಿದ್ದರು. ಇದಕ್ಕೂ ಮುನ್ನ ಎರಡೆರಡು ಕೀ ತಂದಿದ್ದ ಶಮಂತ್ ಅವರನ್ನು ಗದರಿದ್ದ ಉರುಡುಗ, ಅರವಿಂದ್ ವಿಚಾರದಲ್ಲಿ ಮೃದು ಧೋರಣೆ ತಳೆದಿದ್ದರು. ಬಳಿಕ, ಈ ಟಾಸ್ಕ್ನಲ್ಲಿ ಗೆದ್ದ ಅರವಿಂದ್ ಅವರು ನಾಯಕರಾಗಿ ಆಯ್ಕೆಯಾಗಿದ್ದರು. ಈ ಬಗ್ಗೆ ಸುದೀಪ್ ಪ್ರಶ್ನೆ ಎತ್ತಿದರು. ಅದು ಸ್ಪಷ್ಟವಾಗಿ ಹಿತಾಸಕ್ತಿ ಸಂಘರ್ಷವಾಗಿತ್ತು ಎಂದು ತರಾಟೆಗೆ ತೆಗೆದುಕೊಂಡರು. ನಿಮ್ಮ ಹಿತಾಸಕ್ತಿ ಸಂಘರ್ಷದಿಂದ ಬೇರೊಬ್ಬರು ಕ್ಯಾಪ್ಟನ್ ಆಗುವ ಸಾಧ್ಯತೆ ಎಷ್ಟು ಕಡಿಮೆ ಆಯಿತು ಎಂದು ಕೇಳಿದರು. ನಾನು ಎಲ್ಲರಿಗೂ ಒಂದೇ ರೀತಿ ಇರಬೇಕೆಂದುಕೊಂಡಿದ್ದೆ ಹೇಗೋ ತಪ್ಪಾಗಿದೆ ಎಂದು ಹೇಳಿದರು.
ತಪ್ಪೊಪ್ಪಿಕೊಂಡ ಉರುಡುಗ: ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ ಮುಗಿದ ಬಳಿಕ ಮನೆಯಲ್ಲಿ ಚರ್ಚಿಸಿದ ದಿವ್ಯಾ ಉರುಡುಗ ಮತ್ತು ಅರವಿಂದ್ ಅವರು ಅದು ದೊಡ್ಡ ಮಿಸ್ಟೇಕ್ ಎಂಬ ಅಭಿಪ್ರಾಯಕ್ಕೆ ಬಂದರು. ನಾನು ಯಾರ ಪರವಾಗಿಯೂ ನಿಲ್ಲದೆ ಉತ್ತಮವಾಗಿ ಕ್ಯಾಪ್ಟನ್ಸಿ ನಿರ್ವಹಿಸಲು ರ್ಧರಿಸಿದ್ದೆ. ಅದು ಹೇಗೆ ತಪ್ಪಾಯಿತೋ ಗೊತ್ತಾಗುತ್ತಿಲ್ಲ. ಯಾವಾಗಲೂ ಜಗಳ ತೆಗೆಯುತ್ತಿದ್ದ ಕಾರಣಕ್ಕೆ ಆ ಸಮಯದಲ್ಲಿ ಸಂಬರಗಿ ಅವರ ಮಾತನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಉರುಡುಗ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.