ADVERTISEMENT

Bigg Boss 8: ಹೇಗಿರಲಿವೆ ಕೊನೆಯ ಎರಡು ಕಂತು? ಇಲ್ಲಿದೆ ಮಾಹಿತಿ

​ಪ್ರಜಾವಾಣಿ ವಾರ್ತೆ
Published 11 ಮೇ 2021, 15:07 IST
Last Updated 11 ಮೇ 2021, 15:07 IST
ಕಲರ್ಸ್ ಕನ್ನಡ ವಿಡಿಯೊದಿಂದ ತೆಗೆದ ಸ್ಕ್ರೀನ್ ಶಾಟ್  
ಕಲರ್ಸ್ ಕನ್ನಡ ವಿಡಿಯೊದಿಂದ ತೆಗೆದ ಸ್ಕ್ರೀನ್ ಶಾಟ್     

ಬೆಂಗಳೂರು: ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಿದ್ದ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್‌ಗೆ ತೆರೆ ಬಿದ್ದಿದೆ. ಆದರೆ, ಅಂತಿಮ ಎಪಿಸೋಡ್‌ಗಳು ಇನ್ನೂ ಪ್ರಸಾರವಾಗಿಲ್ಲ. ಇಷ್ಟು ದಿನ ಮನೆಯಲ್ಲಿ ಟಾಸ್ಕ್, ಜಗಳ, ಗದ್ದಲದ ನಡುವೆ 70ಕ್ಕೂ ಹೆಚ್ಚು ದಿನಗಳ ಸಮಯ ಕಳೆದ ಸ್ಪರ್ಧಿಗಳು ಏಕಾಏಕಿ ಕಾರ್ಯಕ್ರಮ ಬಂದ್ ಮಾಡಿದ್ದರಿಂದ ಹೇಗೆ ಪ್ರತಿಕ್ರಿಯಿಸಿದ್ದಾರೆ ಎಂಬುದು ಎಲ್ಲ ವೀಕ್ಷಕರ ಕುತೂಹಲಕ್ಕೆ ಎಡೆ ಮಾಡಿದೆ.

ಹೌದು, ಇಷ್ಟು ದಿನ ಮನೆಯಲ್ಲಿ ಗೆಲುವಿಗಾಗಿ ತಂತ್ರ ,ಪ್ರತಿತಂತ್ರ, ಕುತಂತ್ರಗಳನ್ನು ಬಳಸಿ ಟಾಸ್ಕ್‌ಗಳಲ್ಲಿ ಪಾಲ್ಗೊಂಡಿದ್ದ ಸ್ಪರ್ಧಿಗಳಿಗೆ ನಿರಾಸೆಯಾಗಿದೆ. ಆದರೆ, ಬೇರೆ ವಿಧಿ ಇಲ್ಲ, ಕೋವಿಡ್ ಅಬ್ಬರದ ನಡುವೆ ಎಲ್ಲವೂ ಬಂದ್ ಆಗಿರುವಾಗ ಬಿಗ್ ಬಾಸ್ ಶೂಟಿಂಗ್ ನಡೆಸಲು ಅಸಾಧ್ಯ ಎಂಬ ಕಾರಣದಿಂದ ಮುಕ್ಕಾಲು ಭಾಗ ಮುಗಿದಿದ್ದ ಬಿಗ್ ಬಾಸ್ ರಿಯಾಲಿಟಿ ಶೋಗೆ ತೆರೆ ಎಳೆಯಲಾಗಿದೆ.

ಪ್ರೊಮೊದಲ್ಲಿದೆ ಸ್ಪರ್ಧಿಗಳ ಗೋಳಾಟ: ಹೌದು, ಇಂದು ಮತ್ತು ನಾಳೆ ಬಿಗ್ ಬಾಸ್‌ನ ಅಂತಿಮ ಎಪಿಸೋಡ್‌ಗಳು ಪ್ರಸಾರವಾಗುತ್ತವೆ ಎಂದು ಪ್ರೊಮೊಗಳಲ್ಲಿ ತಿಳಿಸಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಆಗಿರುವ ಪ್ರೊಮೊದಲ್ಲಿ ಸ್ಪರ್ಧಿಗಳು ಈ ದಿಢೀರ್ ನಿರ್ಧಾರದಿಂದ ಅಕ್ಷರಶಃ ಶಾಕ್ ಆಗಿ ಅಳುತ್ತಿರುವುದು ಕಂಡು ಬಂದಿದೆ.

ADVERTISEMENT

ರಾಜ್ಯದಾದ್ಯಂತ ಕೊರೊನಾ ಹರಡುವಿಕೆ ಹೆಚ್ಚಾಗಿದೆ ಎಂಬ ನ್ಯೂಸ್ ಚಾನಲ್‌ಗಳ ಬ್ರೇಕಿಂಗ್ ನ್ಯೂಸ್ ಮತ್ತು ಕೊರೊನಾ ಹರಡುವಿಕೆ ತಡೆಗೆ ಸಂಪೂರ್ಣ ಲಾಕ್‌ಡೌನ್ ವಿಧಿಸಲಾಗುವುದು ಎಂಬ ಸಿಎಂ ಯಡಿಯೂರಪ್ಪನವರ ಸುದ್ದಿಗೋಷ್ಠಿಯನ್ನು ಸ್ಪರ್ಧಿಗಳ ಮುಂದಿಟ್ಟು, ಬಿಗ್ ಬಾಸ್ ಶೋ ಅಂತ್ಯಗೊಳಿಸುತ್ತಿದ್ದು, ಮನೆಯಿಂದ ತೆರಳುವಂತೆ ಸೂಚಿಸಲಾಗಿದೆ.

ಈ ವೇಳೆ, ದುಃಖ ತಡೆಯಲಾರದೇ ಬಹುತೇಕ ಸ್ಪರ್ಧಿಗಳು ವಿ ಮಿಸ್ ಯೂ ಬಿಗ್ ಬಾಸ್ ಎಂದು ಜೋರಾಗಿ ಅತ್ತಿದ್ದಾರೆ. ನಮ್ಮ ಒಳ್ಳೆಯದಕ್ಕೆ ಈ ನಿರ್ಧಾರ ಕೈಗೊಂಡಿದ್ದೀರ ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು ಹೊರಗಡೆ ವ್ಯವಸ್ಥೆ ಹಾಳಾಗಿರುವುದರಿಂದ ಶೋ ಮುಗಿಸುವ ನಿರ್ಧಾರಕ್ಕೆ ಬಂದಿರುವ ಬಗ್ಗೆ ಸ್ವಾಗತ ಹೇಳಿದ್ದಾರೆ.

ಆದರೆ, ಅವರ ಕಣ್ಣಲ್ಲಿ ನೀರು, ಶೋ ಅರ್ಧಕ್ಕೆ ನಿಂತ ನೋವು ಮುಖದಲ್ಲಿ ಎದ್ದು ಕಾಣುತ್ತಿತ್ತು.

ಮಂಜು, ಅರವಿಂದ್‌ಗೆ ನಿರಾಸೆ: ಬಿಗ್ ಬಾಸ್ ಸೀಸನ್ 8 ಅತ್ಯುತ್ತಮ ಸ್ಪರ್ಧಿಗಳ ಸಾಲಿನಲ್ಲಿ ನಿಂತಿದ್ದ ಮಂಜು ಪಾವಗಡ ಮತ್ತು ಅರವಿಂದ್. ಕೆ.ಪಿ ಅವರಿಗೆ ಇದು ನಿಜಕ್ಕೂ ನುಂಗಲಾರದ ತುತ್ತು ಎಂದರೆ ತಪ್ಪಿಲ್ಲ. ಈ ಇಬ್ಬರೂ ಮನೆಯ ಟಾಪ್ ಕಂಟೆಂಡರ್‌ಗಳಾಗಿದ್ದರು. ಇವರಲ್ಲಿ ಒಬ್ಬರು ಜಯಶಾಲಿಯಾಗಬಹುದು ಎಂಬುದು ಎಲ್ಲ ಸ್ಪರ್ಧಿಗಳ ಮನದಾಳವಾಗಿತ್ತು. ಎಷ್ಟೇ ಬಾರಿ ನಾಮಿನೇಟ್ ಆದರೂ ಈ ಇಬ್ಬರೂ ಯಶಸ್ವಿಯಾಗಿ ಜನರ ಅಗ್ನಿಪರೀಕ್ಷೆ ಗೆದ್ದು ಬರುತ್ತಿದ್ದರು. ಆದರೆ, ಈಗ ಈ ಇಬ್ಬರ ಕನಸು ಕಮರಿಹೋಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.