ADVERTISEMENT

‘ಜೊತೆ ಜೊತೆಯಲಿ’ ಧಾರಾವಾಹಿ ಬಿಡುವ ಸುದ್ದಿಗಳ ಬಗ್ಗೆ ‘ಅನು ಸಿರಿಮನೆ’ ಸ್ಪಷ್ಟನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಜುಲೈ 2021, 11:53 IST
Last Updated 16 ಜುಲೈ 2021, 11:53 IST
ಮೇಘಾ ಶೆಟ್ಟಿ ಇನ್‌ಸ್ಟಾಗ್ರಾಮ್ ಖಾತೆಯ ಸ್ಕ್ರೀನ್ ಗ್ರ್ಯಾಬ್
ಮೇಘಾ ಶೆಟ್ಟಿ ಇನ್‌ಸ್ಟಾಗ್ರಾಮ್ ಖಾತೆಯ ಸ್ಕ್ರೀನ್ ಗ್ರ್ಯಾಬ್   

ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ‘ಜೊತೆ ಜೊತೆಯಲಿ’ ಧಾರಾವಾಹಿಯ ‘ಅನು ಸಿರಿಮನೆ’ ಪಾತ್ರದ ಮೂಲಕ ಮನೆ ಮಾತಾಗಿರುವ ನಟಿ ಮೇಘಾ ಶೆಟ್ಟಿ ಸೀರಿಯಲ್ ತೊರೆದು ಚಿತ್ರರಂಗಕ್ಕೆ ಕಾಲಿಡಲಿದ್ದಾರೆ ಎಂಬ ಊಹಾಪೋಹಗಳಿಗೆ ಸ್ವತಃ ಅವರೇ ತೆರೆ ಎಳೆದಿದ್ದಾರೆ.

ನಾಲ್ಕೈದು ದಿನಗಳಿಂದ ನಾನು ಸೀರಿಯಲ್‌ನಿಂದ ಹೊರಗಿದ್ದೇನೆ ಎಂಬ ಸುದ್ಧಿಯಾಗಿತ್ತು. ಒಂದು ಕುಟುಂಬ ಅಂದಮೇಲೆ ಗೊಂದಲಗಳು ಸಾಮಾನ್ಯ. ನನ್ನ ಕುಟುಂಬದಲ್ಲೂ ಗೊಂದಲಗಳಾಗಿದ್ದವು. ಈಗ ಗೊಂದಲಗಳು ನಿವಾರಣೆಯಾಗಿದ್ದು, ಜೊತೆ ಜೊತೆಯಲಿಸೀರಿಯಲ್ ಮುಗಿಯುವವರೆಗೂ ‘ಅನು ಸಿರಿಮನೆ’ ಪಾತ್ರವನ್ನು ನಾನೇ ನಿರ್ವಹಿಸಿಕೊಂಡು ಹೋಗುತ್ತೇನೆ. ಇದಕ್ಕಾಗಿ ನನ್ನ ಗುರುಗಳಾದ ನಿರ್ದೇಶಕ ಆರೂರು ಜಗದೀಶ್ ಮತ್ತು ಜೀ ಕನ್ನಡ, ಜೊತೆ ಜೊತೆಯಲಿ ಧಾರಾವಾಹಿ ಕುಟುಂಬಕ್ಕೆ ಆಭಾರಿಯಾಗಿರುತ್ತೇನೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊ ಪೋಸ್ಟ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಈ ಎಲ್ಲ ಗೊಂದಲಗಳಿಂದ ನನ್ನ ಪ್ರೀತಿಯ ವೀಕ್ಷಕರು ಮತ್ತು ನನ್ನ ಕುಟುಂಬಕ್ಕೆ ಆತಂಕ ಉಂಟಾಗಿದ್ದಕ್ಕೆ ಕ್ಷಮೆಯಾಚಿಸುತ್ತೇನೆ ಎಂದು ಅವರು ಹೇಳಿದ್ದಾರೆ. ಇದಾದ ಬಳಿಕ, ಈ ಬಗ್ಗೆ ಬೇರೆ ಯಾವುದೇ ಸುದ್ದಿ ಬಂದರೂ ಗಮನಹರಿಸದೇ ಈ ಹಿಂದಿನ ರೀತಿಯೇ ನಮ್ಮನ್ನು ಪ್ರೋತ್ಸಾಹಿಸಿ. ಜೊತೆ ಜೊತೆಯಲಿ ಸೀರಿಯಲ್ ನನಗೆ ಬಹಳಷ್ಟು ಕೊಟ್ಟಿದೆ ಎಂದು ಮೇಘಾ ಶೆಟ್ಟಿ ಹೇಳಿದ್ದಾರೆ.

ADVERTISEMENT

ಮೇಘಾ ಶೆಟ್ಟಿಯವರು ‘ತ್ರಿಬಲ್ ರೈಡಿಂಗ್’ ಚಿತ್ರದಲ್ಲಿ ನಟಿಸುತ್ತಿದ್ದು, ಧಾರಾವಾಹಿಗೆ ಕಾಲ್ ಶೀಟ್ ಕೊಡಲು ಸಾಧ್ಯವಾಗುತ್ತಿಲ್ಲ ಎಂಬ ಬಗ್ಗೆ ಸುದ್ದಿ ಆಗಿತ್ತು. ‘ಲವ್ 360’ ಸಿನಿಮಾ ತಂಡವೂ ಮೇಘಾ ಶೆಟ್ಟಿಯವರ ಕಾಲ್ ಶೀಟ್ ಕೇಳಿದೆ ಎಂದೂ ಸುದ್ದಿ ಹರಡಿತ್ತು. ಇದೀಗ, ಸ್ವತಃ ಅವರೇ ಈ ಎಲ್ಲ ಸುದ್ದಿಗಳಿಗೂ ಸ್ಪಷ್ಟನೆ ನೀಡಿದ್ದಾರೆ.

ಈ ಧಾರಾವಾಹಿಯಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ ಜತ್ಕರ್ ಅವರು ‘ಆರ್ಯವರ್ಧನ್’ ಎಂಬ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು, ಅವರಿಗೆ ಜೋಡಿಯಾಗಿ ‘ಅನು ಸಿರಿಮನೆ’ ಪಾತ್ರದಲ್ಲಿ ಮೇಘಾ ಶೆಟ್ಟಿ ನಟಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.