ಗೋಲಾಘಾಟ್ (ಅಸ್ಸಾಂ): 2019ರಲ್ಲಿ ಅಸ್ಸಾಂನಲ್ಲಿ ಸಂಭವಿಸಿದ ಪ್ರವಾಹ ಸಂದರ್ಭದಲ್ಲಿ ರಕ್ಷಿಸಿದ್ದ ಎರಡು ಹೆಣ್ಣು ಮರಿಗಳು ಸೇರಿದಂತೆ ಘೇಂಡಾಮೃಗದ ಮೂರು ಮರಿಗಳನ್ನು ಶೀಘ್ರದಲ್ಲೇ ಅರಣ್ಯಕ್ಕೆ ಬಿಡಲಾಗುವುದು ಎಂದು ವೈಲ್ಡ್ ಲೈಫ್ ಟ್ರಸ್ಟ್ ಆಫ್ ಇಂಡಿಯಾ (ಡಬ್ಲ್ಯುಟಿಐ) ತಿಳಿಸಿದೆ.
‘ಕಾಜಿರಂಗ ರಾಷ್ಟ್ರೀಯ ಉದ್ಯಾನದ ಬಳಿ ರಕ್ಷಿಸಿದ ಈ ಮರಿಗಳನ್ನು ಬಾರ್ಪೆಟಾ ಜಿಲ್ಲೆಯ ಮಾನಸ್ ಹುಲಿ ಸಂರಕ್ಷಿತಾ ಪ್ರದೇಶಕ್ಕೆ ಬಿಡಲು ನಿರ್ಧರಿಸಲಾಗಿದೆ. ಅರಣ್ಯಕ್ಕೆ ಬಿಡುವವರೆಗೂ ಅವುಗಳನ್ನು ಜಾನುವಾರುಗಳಿರುವ ಆವರಣದಲ್ಲಿ ಇಡಲಾಗುವುದು. ಕಾಡಿಗೆ ಬಿಡುವ ಮೊದಲು ಅವುಗಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತದೆ‘ ಎಂದು ಡಬ್ಲ್ಯುಟಿಐ ಹೇಳಿಕೆಯಲ್ಲಿ ತಿಳಿಸಿದೆ.
ವನ್ಯಜೀವಿ ಪುನರ್ವಸತಿ ಮತ್ತು ಸಂರಕ್ಷಣಾ ಕೇಂದ್ರದಲ್ಲಿ ಎರಡು ವರ್ಷಗಳ ಕಾಲ ಈ ಮರಿಗಳನ್ನು ಪೋಷಿಸಲಾಗಿದೆ. ಈ ಮರಿಗಳಿಗೆ ಈಗ ಕೊಂಬು ಮೂಡುವ ಸಮಯವಾದ್ದರಿಂದ, ಅವುಗಳನ್ನು ಕಾಡಿಗೆ ಬಿಡುವುದಕ್ಕೆ ಇದು ಸೂಕ್ತ ಸಮಯವಾಗಿದೆ‘ ಎಂದು ಕಾಜಿರಂಗ ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಪಿ.ಶಿವಕುಮಾರ್ ತಿಳಿಸಿದ್ದಾರೆ.
‘2006ರಿಂದ ಇಲ್ಲಿಯವರೆಗೆ ಮಾನಸ್ ಹುಲಿ ಸಂರಕ್ಷಿತಾ ಅರಣ್ಯ ಪ್ರದೇಶಕ್ಕೆ 19 ಘೇಂಡಾಮೃಗಗಳನ್ನು ಬಿಟ್ಟಿದ್ದೇವೆ. ಈ ಅರಣ್ಯದಲ್ಲಿ ಒಟ್ಟು 44 ಘೇಂಡಾಮೃಗಗಳಿವೆ‘ ಎಂದು ಅವರು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.