ಬೆಂಗಳೂರು: ‘ತುಮಕೂರಿನಲ್ಲಿ ಫೆ.10ರಂದು ಮಷಿನ್ ಟೂಲ್ಸ್(ಯಂತ್ರಗಳ ಬಿಡಿಭಾಗ) ಪಾರ್ಕ್ಗೆ ಶಂಕುಸ್ಥಾಪನೆ ನೇರವೇರಿಸುತ್ತೇವೆ’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ಭಾರತೀಯ ಯಂತ್ರ ಬಿಡಿಭಾಗಗಳ ತಯಾರಕರ ಒಕ್ಕೂಟವು ನಗರದಲ್ಲಿ ಗುರುವಾರ ಆಯೋಜಿಸಿದ್ದ ಇಮ್ಟೆಕ್ಸ್ ಮತ್ತು ಟೂಲ್ಟೆಕ್- 2018 ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯಂತ್ರಗಳ ಬಿಡಿಭಾಗ ತಯಾರಿಕೆಯಲ್ಲಿ ರಾಜ್ಯವು ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ. ವಿಶೇಷ ಉದ್ದೇಶದ ಯಂತ್ರೋಪಕರಣಗಳು ಹಾಗೂ ಭಾರಿ ವಿದ್ಯುತ್ ಯಂತ್ರೋಪಕರಣಗಳ ತಯಾರಿಕೆಯಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ. ಬಿಡಿಭಾಗಗಳ ಉತ್ಪಾದನೆಯಲ್ಲಿ ಶೇ 60ರಷ್ಟು ನಗರದಲ್ಲೇ ತಯಾರಾಗುತ್ತಿವೆ ಎಂದು ಹೇಳಿದರು.
‘ಯಂತ್ರಗಳ ಬಿಡಿಭಾಗಗಳ ಪೂರೈಕೆಯನ್ನು ಮತ್ತಷ್ಟು ಬಲಪಡಿಸಬೇಕು. ಎಲ್ಲ ಕ್ಷೇತ್ರಗಳಲ್ಲಿಯೂ ಸಂಶೋಧನೆಯ ಕಡೆಗೆ ದಾಪುಗಾಲು ಇಡಬೇಕು. ಕೈಗಾರಿಕೆಗಳ ಸ್ಥಾಪನೆ ಹಾಗೂ ಬಂಡವಾಳ ಹೂಡಿಕೆಯನ್ನು ಸ್ವಾಗತಿಸುತ್ತೇವೆ. ಲಾಭಾಂಶದ ಸ್ವಲ್ಪ ಪಾಲನ್ನು ಉದ್ದಿಮೆದಾರರು ಸಮಾಜಕ್ಕೆ ಹಿಂದಿರುಗಿಸಬೇಕು. ಯುವಜನರಿಗೆ ಉದ್ಯೋಗ ಕಲ್ಪಿಸಬೇಕು’ ಎಂದು ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.