ಬೆಂಗಳೂರು: ‘ಮೊಳೆ ಮುಕ್ತ ಮರ’ ಅಭಿಯಾನದ ಅಂಗವಾಗಿ ನಗರದಲ್ಲಿ ಇದೇ 21ರಂದು ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ’ ಎಂದು ಬೆಂಗಳೂರು ಹುಡುಗರು ತಂಡದ ವಿನೋದ್ ಕರ್ತವ್ಯ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ರಸ್ತೆ ಬದಿಯ ಮರಗಳು ಉದ್ಯಾನನಗರಿಯ ಸೌಂದರ್ಯ ಹೆಚ್ಚಿಸುತ್ತಿವೆ. ಅವುಗಳ ಮೇಲೆ ಅನಧಿಕೃತ ಭಿತ್ತಿಪತ್ರ ಅಂಟಿಸಲಾಗುತ್ತಿದೆ. ಮೊಳೆ ಹಾಗೂ ಪಿನ್ಗಳನ್ನು ಹೊಡೆದು ಮರಗಳನ್ನು ಘಾಸಿಗೊಳಿಸಲಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಈ ಜಾಥಾದ ಉದ್ದೇಶ’ ಎಂದರು.
‘ಎಂ.ಜಿ.ರಸ್ತೆಯ ಬಾಲಭವನದಿಂದ ಆರಂಭವಾಗುವ ಜಾಥಾ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆವರಣದಲ್ಲಿರುವ ಡಾ.ರಾಜ್ಕುಮಾರ್ ಗಾಜಿನ ಮನೆಯ ಬಳಿ ಕೊನೆಗೊಳ್ಳಲಿದೆ. ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹಾಗೂ ರೈಲ್ವೇಸ್ ಎಡಿಜಿಪಿ ಭಾಸ್ಕರ್ ರಾವ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.