ವಾಷಿಂಗ್ಟನ್: ಭೂಮಿಯ ಆರನೇ ಒಂದು ಭಾಗದಲ್ಲಿರುವ ಬಳಕೆ ಯೋಗ್ಯ ಜಮೀನು ಹಾಗೂ ಸಿಹಿನೀರಿರುವ ಭಾಗವು ರಕ್ಷಿತ ಇಲ್ಲವೇ ಸಂರಕ್ಷಣೆಗೊಳಪಟ್ಟ ಪ್ರದೇಶದಲ್ಲಿದೆ. ಜೀವವೈವಿಧ್ಯದ ನಷ್ಟ ತಡೆಯುವಲ್ಲಿ ಈ ಪ್ರದೇಶಗಳೇ ಮಹತ್ವದ ಪಾತ್ರ ವಹಿಸುತ್ತವೆ ಎಂದು ವಿಶ್ವಸಂಸ್ಥೆ ಹೇಳಿದೆ.
ವಿಶ್ವಸಂಸ್ಥೆ ‘ಪ್ರೊಟೆಕ್ಟೆಡ್ ಪ್ಲ್ಯಾನೆಟ್’ ಎಂಬ ವರದಿಯನ್ನು ಬಿಡುಗಡೆ ಮಾಡಿದೆ. ಜೀವವೈವಿಧ್ಯ, ಹವಾಮಾನ ಬದಲಾವಣೆ ಮತ್ತಿತರ ವಿಷಯಗಳ ಮೇಲೆ ಈ ವರದಿಯಲ್ಲಿ ಬೆಳಕು ಚೆಲ್ಲಲಾಗಿದೆ.
‘ರಕ್ಷಿತ ಮತ್ತು ಸಂರಕ್ಷಿತ ಪ್ರದೇಶಗಳನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡುವುದು ಮುಖ್ಯ. ಈ ಪ್ರದೇಶದ ಒಟ್ಟು ವಿಸ್ತೀರ್ಣವನ್ನು ಹೆಚ್ಚಿಸಲು ಗಮನ ಹರಿಸಬೇಕು. ಇದರಿಂದ ಹವಾಮಾನದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಬಹುದು. ಜೀವವೈವಿಧ್ಯಕ್ಕಾಗುವ ನಷ್ಟವನ್ನು ತಡೆಯಲು ಸಾಧ್ಯ’ ಎಂದು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ವಿಶ್ವ ಸಂರಕ್ಷಣೆ ಕಣ್ಗಾವಲು ಕೇಂದ್ರದ ನಿರ್ದೇಶಕ ನೆವಿಲ್ ಆ್ಯಶ್ ಪ್ರತಿಪಾದಿಸಿದ್ದಾರೆ.
‘ಸಮುದ್ರದಲ್ಲಿರುವ ಪರಿಸರವನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಕಳೆದ ದಶಕದಲ್ಲಿ ಗಮನಾರ್ಹ ಕಾರ್ಯವಾಗಿದೆ. ಆದರೆ, ಇದೇ ಅವಧಿಯಲ್ಲಿ ಭೂಭಾಗದಲ್ಲಿನ ಸಂರಕ್ಷಿತ ಪ್ರದೇಶವನ್ನು ವಿಸ್ತರಿಸುವ ಕಾರ್ಯದಲ್ಲಿ ಅಷ್ಟೊಂದು ಪ್ರಗತಿಯಾಗಿಲ್ಲ’ ಎಂದು ಡ್ಯೂಕ್ ವಿಶ್ವವಿದ್ಯಾಲಯದ ಪರಿಸರ ವಿಜ್ಞಾನಿ ಸ್ಟುವರ್ಟ್ ಪಿಮ್ ಹೇಳುತ್ತಾರೆ.
‘ರಕ್ಷಿತ ಪ್ರದೇಶಗಳನ್ನು ವಿಸ್ತೀರ್ಣದ ದೃಷ್ಟಿಯಿಂದ ಮಾತ್ರ ನೋಡಬಾರದು. ಅವುಗಳ ಗುಣಮಟ್ಟದ ಕಡೆಗೂ ಗಮನ ಹರಿಸುವುದು ಮುಖ್ಯ’ ಎಂದು ಪಿಮ್ ಪ್ರತಿಪಾದಿಸುತ್ತಾರೆ.
ಕರಾವಳಿ ಹಾಗೂ ಸಾಗರದ ನೀರಿನ ಪೈಕಿ ಶೇ 8ರಷ್ಟು ಭಾಗ ರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿಯೇ ಇದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.