ADVERTISEMENT

ವನ್ಯಜೀವಿಗಳನ್ನು ರಕ್ಷಿಸೋಣ...

ನಾಳೆಯಿಂದ ನ್ಯಾಷನಲ್‌ ಜಿಯೋಗ್ರಾಫಿಕ್‌ ವಾಹಿನಿಯಲ್ಲಿ ಪ್ರಸಾರ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2020, 19:30 IST
Last Updated 2 ಮಾರ್ಚ್ 2020, 19:30 IST
   
""
""

ಕಾ ಳಿಂಗ ಸರ್ಪಗಳ ಬಗ್ಗೆ ಆಗುಂಬೆಯಲ್ಲಿ ಚಿತ್ರೀಕರಿಸಿದ ಸಾಕ್ಷ್ಯಚಿತ್ರ ‘ಸೀಕ್ರೆಟ್ಸ್‌ ಆಫ್‌ ಕಿಂಗ್‌ ಕೋಬ್ರಾ’ ಮತ್ತುಭಾರತದ ಚಿರತೆಗಳ ಬಗ್ಗೆ ತಯಾರಿಸಿದ ‘ಇಂಡಿಯನ್‌ ಲೆಪರ್ಡ್ಸ್’ ಸಾಕ್ಷ್ಯಚಿತ್ರವು ನ್ಯಾಷನಲ್‌ ಜಿಯೋಗ್ರಾಫಿಕ್‌ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಪ್ರತಿ ದಿನ ಹೊಸ ವಿಷಯ ಒಳಗೊಂಡ 44 ನಿಮಿಷಗಳ ಸಾಕ್ಷ್ಯ ಚಿತ್ರಗಳು ಕಾಡು ಪ್ರಾಣಿಗಳ ಬದುಕಿನ ವೈವಿಧ್ಯವನ್ನು ಕಟ್ಟಿಕೊಡಲಿವೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ವನ್ಯಜೀವಿ ಛಾಯಾಗ್ರಾಹಕ, ಸಾಕ್ಷ್ಯಚಿತ್ರಕಾರ ಸಂದೇಶ್‌ ಕಡೂರು, ಕರ್ನಾಟಕ ಸೇರಿದಂತೆ ವಿಶ್ವದ ನಾನಾ ಭಾಗಗಳಲ್ಲಿರುವ ಅಪರೂಪದ ಜೀವ ವೈವಿಧ್ಯದ ಬಗ್ಗೆ ಕಾರ್ಯಕ್ರಮ ಪ್ರಸಾರವಾಗಲಿದೆ. ಪ್ರತಿ ದಿನ ಒಂದೊಂದು ಜೀವಿಯ ಬಗ್ಗೆ ಸಾಕ್ಷ್ಯ ಚಿತ್ರ ಪ್ರಸಾರವಾಗಲಿದೆ. ‘ಸೇವ್‌ ಟುಗೇದರ್‌’ ಎಂಬುದು ಈ ಪರಿಕಲ್ಪನೆಯ ಹೆಸರು‘ ಎಂದು ವಿವರಿಸಿದರು.

ನ್ಯಾಷನಲ್‌ ಜಿಯೋಗ್ರಾಫಿಕ್‌ ವಾಹಿನಿಗೆ ಭಾರತದಲ್ಲಿ ನಾಲ್ವರು ಮುಂಚೂಣಿಯಲ್ಲಿರುವ ವಿಷಯ ಪರಿಶೋಧಕರು (ಎಮರ್ಜಿಂಗ್‌ ಎಕ್ಸ್‌ಪ್ಲೋರರ್‌) ಇದ್ದಾರೆ. ಅವರ ಪೈಕಿ ವನ್ಯಜೀವಿ ಸಂರಕ್ಷಣಾ ಮುಖ್ಯ ವಿಜ್ಞಾನಿ ಡಾ.ಕೃತಿ ಕಾರಂತ್‌ ಹಾಗೂ ವನ್ಯಜೀವಿ ಛಾಯಾಗ್ರಾಹಕ, ಸಾಕ್ಷ್ಯಚಿತ್ರ ನಿರ್ಮಾಪಕ ಸಂದೇಶ್‌ ಕಡೂರ್‌ (ಅವರೀಗ ನ್ಯಾಟ್‌ ಜಿಯೋ ಫೆಲೋ) ಇಬ್ಬರು. ಟಿವಿ ವಾಹಿನಿ, ಛಾಯಾಗ್ರಾಹಕರು, ವಿಜ್ಞಾನಿಗಳ ಸಹಯೋಗದಲ್ಲಿ ‘ವನ್ಯಜೀವಿಗಳನ್ನು ಒಟ್ಟಾಗಿ ರಕ್ಷಿಸಿ‘ ಎಂಬ ಅಭಿಯಾನ ಶುರುವಾಗಿದೆ.

ADVERTISEMENT

ಈಗಾಗಲೇ ಶಾಲಾ ಮಟ್ಟದಲ್ಲಿ ‘ವೈಲ್ಡ್‌ ಸ್ಕೂಲ್‌’ ಎಂಬ ಪರಿಕಲ್ಪನೆಯ ಮೂಲಕ ವಾಹಿನಿಯು ಮಕ್ಕಳಲ್ಲೂ ವನ್ಯ ಜೀವಿಗಳ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಕಾಡು ಪ್ರಾಣಿಗಳ ಪರಿಚಯ, ಅವುಗಳ ದಾಳಿ ಸಂದರ್ಭದಲ್ಲಿ ನಾವೇನು ಮಾಡಬೇಕು? ಪ್ರಾಣಿಗಳ ಜತೆ ನಮ್ಮ ವರ್ತನೆಗಳು ಹೇಗಿರಬೇಕು ಎಂಬ ಬಗ್ಗೆ ಅರಿವು ಮೂಡಿಸುತ್ತಿದೆ. ಈ ಜಾಗೃತಿ ಕಾರ್ಯಕ್ರಮ 400 ಶಾಲೆಗಳ ಮಕ್ಕಳನ್ನು ತಲುಪಿದೆ. ಮಕ್ಕಳಿಗೆ ಕಾಡಿನ ಕುತೂಹಲವನ್ನೂ ಮೂಡಿಸಿದೆ.

ಪ್ರಾಣಿ ಸಂಘರ್ಷ ತಡೆಗೆ ನೆರವು

ನಾವು ಕಾಡು ಪ್ರಾಣಿಗಳ ಆವಾಸವನ್ನು ಆಕ್ರಮಿಸಿಕೊಂಡಿದ್ದೇವೆ. ಹಾಗಾಗಿ ಅವು ನಾಡಿಗೆ ಬರುತ್ತಿವೆ. ಇದಕ್ಕಾಗಿ ಮಾಡಬೇಕಾದ ಮುನ್ನೆಚ್ಚರಿಕೆ ಬಗ್ಗೆ ಹೇಳುತ್ತಿದ್ದೇವೆ. ಕಾಡಂಚಿನ ಗ್ರಾಮಗಳ ಜನರಿಗೆ ಕಾಡು ಪ್ರಾಣಿಗಳ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ. ಪ್ರಾಣಿ ದಾಳಿಗೊಳಗಾದವರು ಶೀಘ್ರವಾಗಿ ಪರಿಹಾರ ಪಡೆಯುವ ಮಾರ್ಗಗಳ ಬಗೆಗೂ ವಾಹಿನಿಯ ತಂಡ ಚಿಂತನೆ ನಡೆಸಿದೆ ಎಂದು ಕೃತಿ ಮಾಹಿತಿ ನೀಡಿದರು.

ಭಾರತದ ವನ್ಯಜೀವಿ ವೈವಿಧ್ಯ

’ಭಾರತದಲ್ಲಿ ಹುಲಿ, ಚಿರತೆ ಸೇರಿ ಸುಮಾರು 15 ಪ್ರಕಾರದ ಕಾಡು ಬೆಕ್ಕಿನ ಜಾತಿಗಳಿವೆ. ಇದು ಈ ದೇಶದ ವನ್ಯಜೀವಿ ವೈವಿಧ್ಯ. ಸರ್ಕಾರ ಈವರೆಗೆ ಶೇ 4.9 ರಷ್ಟು ಅರಣ್ಯ ಪ್ರದೇಶವನ್ನು ಮಾತ್ರ ರಕ್ಷಣೆ ಮಾಡಿದೆ. ಅದರಲ್ಲೂ ಮೀಸಲು ಅರಣ್ಯ ಪ್ರದೇಶದ ಮಿತಿಯನ್ನು ಇನ್ನೂ ಸಡಿಲಿಸಿದರೆ ಅಪಾಯ ಖಂಡಿತ‘ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಕೃತಿ ಕಾರಂತ.

‘ಭಾರತದಲ್ಲಿ ಗ್ರೇಟ್‌ ಇಂಡಿಯನ್‌ ಬಸ್ಟರ್ಡ್‌ ಪೂರ್ಣ ಅಳಿವಿನ ಅಂಚಿನಲ್ಲಿದೆ. ಹುಲ್ಲುಗಾವಲು ಕಡಿಮೆಯಾಗಿರುವುದು ಈ ಅವನತಿಗೆ ಕಾರಣ. ಹುಲ್ಲುಗಾವಲುಗಳಲ್ಲಿ ವಿದ್ಯುತ್‌ ತಂತಿಗಳನ್ನು ಅಳವಡಿಸಿದ ಕಾರಣ ಅವು ಆಘಾತಕ್ಕೊಳಗಾಗಿ ಸಾಯುತ್ತಿವೆ. ಕರ್ನಾಟಕದ ರಾಣೆಬೆನ್ನೂರು, ಆಂಧ್ರದ ಕೆಲ ಭಾಗಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಹಕ್ಕಿಗಳು ಈಗ ರಾಜಸ್ಥಾನದ ಕೆಲವು ಭಾಗಗಳಲ್ಲಿ ಮಾತ್ರ ಉಳಿದಿವೆ. ಅವುಗಳನ್ನು ರಕ್ಷಿಸುವ ಕಾರ್ಯ ನಡೆದಿದೆ‘ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.