ಭೂಮಿ ಮತ್ತು ಪರಿಸರ ಸಂರಕ್ಷಣೆ ಉದ್ದೇಶದೊಂದಿಗೆ ಎಂಬೆಸಿಗ್ರೂಪ್ ಭಾನುವಾರ ‘ಪೆಡಲ್ ಫಾರ್ ಪ್ಲಾನೆಟ್’ ಹೆಸರಿನಲ್ಲಿ ಸೈಕ್ಲೋಥಾನ್ ಆಯೋಜಿಸಿದೆ.
ಭಾನುವಾರ ಇಡೀ ದಿನ ನಗರದ ಎಂಬೆಸಿ ಸ್ಪ್ರಿಂಗ್ಸ್ನಲ್ಲಿ ಸೈಕ್ಲೋಥಾನ್, ಸಂಡೇ ಸೋಲ್ ಸಂತೆ ಸೇರಿದಂತೆ ವಿಭಿನ್ನ ಕಾರ್ಯಕ್ರಮ ನಡೆಯಲಿವೆ. ಐದು ವರ್ಷಗಳಿಂದ ಈ ಕಾರ್ಯಕ್ರಮ ನಡೆಯುತ್ತಿದ್ದು, ಇದು ಆರನೇ ಆವೃತ್ತಿ.
ಸೈಕ್ಲೋಥಾನ್ನಲ್ಲಿ ಭಾಗವಹಿಸಲು ವಯೋಮಾನದ ನಿರ್ಬಂಧವಿಲ್ಲ. ಸೈಕ್ಲಿಂಗ್ ಬಗ್ಗೆ ಆಸಕ್ತಿ ಹೊಂದಿರುವ ಎಲ್ಲ ವಯೋಮಾನದವರೂ ಮುಕ್ತವಾಗಿ ಪಾಲ್ಗೊಳ್ಳಬಹುದು. ವಯೋಮಾನದ ಅನುಸಾರ ಸೈಕ್ಲಿಂಗ್ ವಿಂಗಡಿಸಲಾಗಿದೆ. ಸ್ಥಳದಲ್ಲಿಯೇ ಬಾಡಿಗೆ ಸೈಕಲ್ ದೊರೆಯುತ್ತವೆ. ನಟ ದಿಗಂತ್ ಕೂಡ ಸೈಕ್ಲಿಂಗ್ನಲ್ಲಿ ಪಾಲ್ಗೊಳ್ಳಲಿದ್ದಾರೆ.
ಪ್ರತಿ ವರ್ಷ ವಿಭಿನ್ನ ಧ್ಯೇಯದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಪರಿಸರ ರಕ್ಷಣೆ ಮತ್ತು ಮಾಲಿನ್ಯ ತಡೆಗಾಗಿ ಸೈಕಲ್ ಬಳಕೆ ಉತ್ತೇಜಿಸುವುದು ಈ ಬಾರಿಯ ಧ್ಯೇಯವಾಗಿದೆ. ಸೈಕಲ್ ಬಳಸುವುದರಿಂದ ಪರಿಸರದಲ್ಲಿ ಇಂಗಾಲ ಡೈಆಕ್ಸೈಡ್ ಪ್ರಮಾಣ ಕಡಿಮೆಯಾಗುವ ಜತೆಗೆ ಜನರ ಆರೋಗ್ಯವೂ ಸುಧಾರಿಸುತ್ತದೆ ಎನ್ನುತ್ತಾರೆ ಎಂಬೆಸಿ ಗ್ರೂಪ್ ಸಿಒಒ ಆದಿತ್ಯ ವಿರ್ವಾನಿ.ಎಂಬೆಸಿ ಮಾನ್ಯತಾ ಬ್ಯುಸಿನೆಸ್ ಟೆಕ್ ಪಾರ್ಕ್ನಲ್ಲಿರುವ ಉದ್ಯೋಗಿಗಳಿಗಾಗಿ 150 ಸೈಕಲ್ ಇಡಲಾಗಿದೆ ಎಂದರು.
ಸಂಡೇ ಸೋಲ್ ಸಂತೆಯಲ್ಲಿ ತೆರೆಯಲಾಗುವ ನೂರಕ್ಕೂ ಹೆಚ್ಚು ಅಂಗಡಿಗಳಲ್ಲಿ ಪರಿಸರ ಸ್ನೇಹಿ ಮತ್ತು ಸ್ಥುಸ್ಥಿರ ಉತ್ಪನ್ನಗಳ ಮಾರಾಟ ನಡೆಯಲಿದೆ. ಫ್ಯಾಶನ್ ಶೋ, ಸಂಗೀತ ಸಂಜೆ, ಮಕ್ಕಳಿಗೆ ಆಟೋಟಗಳನ್ನು ಏರ್ಪಡಿಸಲಾಗಿದೆ ಎಂದು ಸೋಲ್ ಸಂತೆಯ ಸಹ ಸಂಸ್ಥಾಪಕ ಹರೀಶ್ ರಾವ್ ತಿಳಿಸಿದರು.
ಇಲ್ಲಿ ಸಂಗ್ರಹವಾಗುವ ಹಣವನ್ನು ‘ಕಲರ್ಸ್ ಆಫ್ ಲೈಫ್’ ಸ್ವಯಂ ಸೇವಾ ಸಂಸ್ಥೆಗೆ ದಾನ ನೀಡಲಾಗುವುದು. 17 ಸರ್ಕಾರಿ ಶಾಲೆಗಳ ಏಳು ಸಾವಿರ ಮಕ್ಕಳ ಶಿಕ್ಷಣಕ್ಕೆ ಈ ಸಂಸ್ಥೆ ನೆರವು ನೀಡುತ್ತಿದೆ.
ಆಸಕ್ತರು www.embassyindia.com/pedalforplanet ಇಲ್ಲಿ ಹೆಸರು ನೋಂದಣಿ ಮಾಡಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.