ಕಾರವಾರ: ಅಖಿಲ ಭಾರತ ಆಹ್ವಾನಿತ ‘ಎ’ ಗ್ರೇಡ್ ತಂಡಗಳ ರಾಷ್ಟ್ರಮಟ್ಟದ ಹೊನಲು ಬೆಳಕಿನ ಪುರುಷರ ಕಬಡ್ಡಿ ಚಾಂಪಿಯನ್ಷಿಪ್ ಮಂಗಳವಾರದಿಂದ ಮೂರು ದಿನಗಳ ಕಾಲ ನಡೆಯಲಿದೆ.
ಪ್ರೊ ಕಬಡ್ಡಿ ಟೂರ್ನಿಯಲ್ಲಿ ಆಡಿರುವ ಪ್ರಮುಖ ಆಟಗಾರರು ಇಲ್ಲಿನ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ. ಕಾಶಿಲಿಂಗ ಅಡಕೆ, ರಿಶಾಂಕ್ ದೇವಾಡಿಗ, ರೋಹಿತ್ ರಾಣಾ, ನೀಲೇಶ್ ಶಿಂಧೆ, ವಿಶಾಲ್ ಮಾನೆ, ನಿತಿನ್ ಮದನೆ ಅವರು ಭಾರತ್ ಪೆಟ್ರೋಲಿಯಂ ತಂಡವನ್ನು ಪ್ರತಿನಿಧಿಸಲಿದ್ದಾರೆ.
‘ಕೇಂದ್ರೀಯ ಅಬಕಾರಿ ಬೆಂಗಳೂರು ತಂಡದಲ್ಲಿ ಪ್ರಭಂಜನ್, ಸಂತೋಷ್, ವಿಜಯ ಬ್ಯಾಂಕ್ ತಂಡದಲ್ಲಿ ಪ್ರಶಾಂತ್ ರೈ, ಸುಕೇಶ್ ಹೆಗ್ಡೆ, ದಕ್ಷಿಣ ಮಧ್ಯ ರೈಲ್ವೆ ತಂಡದಲ್ಲಿ ಸುರೇಂದ್ರ ಸಿಂಗ್, ಜೀವಕುಮಾರ್ ಪಾಲ್ಗೊಳ್ಳಲಿದ್ದಾರೆ. ಲೀಗ್ ಮತ್ತು ನಾಕೌಟ್ ಮಾದರಿಯಲ್ಲಿ ಟೂರ್ನಿ ಜರುಗಲಿದೆ.
‘ಮಹಿಂದ್ರಾ ಅಂಡ್ ಮಹಿಂದ್ರಾ, ಸೆಂಟ್ರಲ್ ರೈಲ್ವೆ, ಭಾರತೀಯ ನೇವಿ ಕರ್ನಾಟಕ ವಿಭಾಗ, ರಾಜ್ಯ ಮಟ್ಟದಲ್ಲಿ ಸಾಧನೆಗೈದ ಸ್ಥಳೀಯ ಕಬಡ್ಡಿ ಆಟಗಾರರನ್ನು ಒಳಗೊಂಡ ಕಾಮತ್ ಪ್ಲಸ್ ಬೋರ್ಕರ್ ವಾರಿಯರ್ಸ್ ಮತ್ತು ಉತ್ತರ ಕನ್ನಡ ಜಿಲ್ಲಾ ಕಬಡ್ಡಿ ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿವೆ’ ಎಂದು ಟೂರ್ನಿಯ ಸಂಘಟನಾ ಕಾರ್ಯದರ್ಶಿ ರವಿ ಶೆಟ್ಟಿ ತಿಳಿಸಿದ್ದಾರೆ. ಶಾಸಕ ಸತೀಶ ಸೈಲ್ ಟೂರ್ನಿ ಆಯೋಜಿಸಿದ್ದು ಸೈಲ್ ಕೃಷ್ಣಗಿರಿ ಟ್ರೋಫಿಗಾಗಿ 12 ತಂಡಗಳು ಪೈಪೋಟಿ ನಡೆಸಲಿವೆ.
‘ಮೊದಲ ಸ್ಥಾನ ಪಡೆಯುವ ತಂಡಕ್ಕೆ ₹ 3.5 ಲಕ್ಷ, ರನ್ನರ್ಸ್ ಅಪ್ ಸ್ಥಾನ ಗಳಿಸುವ ತಂಡಕ್ಕೆ ₹ 2 ಲಕ್ಷ ಬಹುಮಾನ ನಿಗದಿ ಮಾಡಲಾಗಿದೆ. ಮೂರು ಮತ್ತು ನಾಲ್ಕನೇ ಸ್ಥಾನ ಗಳಿಸುವ ತಂಡಗಳಿಗೆ ತಲಾ ₹ 1 ಲಕ್ಷ ಲಭಿಸಲಿದೆ.
ಉದ್ಘಾಟನಾ ದಿನದಂದು ಗೋವಾ ರಾಜ್ಯ ಮಹಿಳಾ ಕಬಡ್ಡಿ ತಂಡ ಹಾಗೂ ಉತ್ತರ ಕನ್ನಡ ಜಿಲ್ಲಾ ಮಹಿಳಾ ಕಬಡ್ಡಿ ತಂಡಗಳ ನಡುವೆ ಪ್ರದರ್ಶನ ಪಂದ್ಯ ಆಯೋಜಿಸಲಾಗಿದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.