ಮಣ್ಣಿನಲ್ಲಿ ಹೂತುಹೋಗಿದ್ದ ಮಡಕೆಯೊಂದನ್ನು ಹೊರತೆಗೆಯುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಡಕೆಯ ಮುಚ್ಚಳವನ್ನು ತೆರೆದಾಗ, ಅದರಲ್ಲಿ ಒಂದು ಹಾವು ಮತ್ತು ಒಂದು ಕಪ್ಪೆ ಇರುವುದು ಗೊತ್ತಾಗುತ್ತದೆ. ಅವನ್ನು ಹೊರಬಿಟ್ಟಾಗ, ಹೂಜಿಯ ತುಂಬಾ ಚಿನ್ನದ ನಾಣ್ಯಗಳು ಮತ್ತು ಆಭರಣಗಳು ಇರುವುದು ಕಾಣುತ್ತದೆ. ‘ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ ಜೀರ್ಣೋದ್ಧಾರ ಕಾಮಗಾರಿಯ ಸಂದರ್ಭದಲ್ಲಿ ಈ ಮಡಕೆ ಪತ್ತೆಯಾಗಿದೆ. ಹಲವು ವರ್ಷಗಳಿಂದ ಮುಚ್ಚಿದ ಸ್ಥಿತಿಯಲ್ಲಿ ಇರುವ ಮಡಕೆಯಲ್ಲಿ ಹಾವು ಹೇಗೆ ಜೀವಂತವಾಗಿದೆ?’ ಎಂದು ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇದು ಸುಳ್ಳು ಸುದ್ದಿ.
ಇದು ತಿರುಚಲಾದ ಮಾಹಿತಿ ಎಂದು ದಿ ಲಾಜಿಕಲ್ ಇಂಡಿಯನ್ ಫ್ಯಾಕ್ಟ್ಚೆಕ್ ಪ್ರಕಟಿಸಿದೆ. ಇದು ಮಂಗಳೂರಿಗೆ ಸಂಬಂಧಿಸಿದ ವಿಡಿಯೊ ಅಲ್ಲ. ಈ ವಿಡಿಯೊವನ್ನು ಟರ್ಕಿಯಲ್ಲಿ ಚಿತ್ರಿಸಲಾಗಿದೆ. ಟ್ರೆಶರ್ ಪಾತ್ ಎಂಬ ಯುಟ್ಯೂಬ್ ಚಾನೆಲ್ ಮತ್ತು ಫೇಸ್ಬುಕ್ ಫೇಜ್ನ ನಿರ್ವಾಹಕರು ಈ ವಿಡಿಯೊವನ್ನು ಚಿತ್ರೀಕರಿಸಿದ್ದಾರೆ. ನಿಧಿ ಶೋಧಕ್ಕೆ ಸಂಬಂಧಿಸಿದ ವಿಡಿಯೊವನ್ನು ಈ ಗುಂಪು ಪ್ರಸಾರ ಮಾಡುತ್ತದೆ. ನಿಧಿಗಳಿಗೆ ಸಂಬಂಧಿಸಿದಂತೆ ಟರ್ಕಿಯಲ್ಲಿರುವ ಕಾನೂನುಗಳ ಬಗ್ಗೆ ಅರಿವು ಮೂಡಿಸಲು ಈ ವಿಡಿಯೊ ಚಿತ್ರೀಕರಿಸಲಾಗಿತ್ತು. ಆದರೆ, ಅದು ಮಂಗಳೂರಿನದ್ದು ಎಂದು ತಪ್ಪು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ದಿ ಲಾಜಿಕಲ್ ಇಂಡಿಯನ್ ತನ್ನ ಫ್ಯಾಕ್ಟ್ಚೆಕ್ನಲ್ಲಿ ವಿವರಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.