ದೇಶದೆಲ್ಲೆಡೆ ಕೋವಿಡ್ ರೋಗಿಗಳಿಗೆ ಆಮ್ಲಜನಕದ ಅಭಾವ ಉಂಟಾಗಿದೆ. ಇಂತಹ ಹೊತ್ತಿನಲ್ಲಿ ಫರೀದಾಬಾದ್ನ ಸರ್ವೋದಯ ಆಸ್ಪತ್ರೆಯ ವೈದ್ಯರೊಬ್ಬರು ಅಮ್ಲಜನಕ ಸಿಲಿಂಡರ್ಗೆ ಪರ್ಯಾಯವಾಗಿ ನೆಬ್ಯುಲೈಸರ್ ಬಳಸಬಹುದು ಎಂದು ಪ್ರಾತ್ಯಕ್ಷಿಕೆ ಮೂಲಕ ತೋರಿಸಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ. ಇಂತಹ ಸುಲಭ ಪರಿಹಾರ ನೀಡಿದ ವೈದ್ಯರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಈ ವಿಡಿಯೊ ತಮ್ಮ ಆಸ್ಪತ್ರೆಗೆ ಸಂಬಂಧಿಸಿದ್ದು ಅಲ್ಲ ಎಂದು ಸರ್ವೋದಯ ಆಸ್ಪತ್ರೆ ಸ್ಪಷ್ಟಪಡಿಸಿದೆ. ವಿಡಿಯೊದಲ್ಲಿರುವ ಮಾಹಿತಿಗೆ ಯಾವುದೇ ವೈಜ್ಞಾನಿಕ ಆಧಾರ ಇಲ್ಲ. ವೈದ್ಯರನ್ನು ಸಂಪರ್ಕಿಸದೇ ಈ ಪ್ರಯತ್ನ ಮಾಡಬೇಡಿ. ಹೀಗೆ ಮಾಡುವುದರಿಂದ ರೋಗ ಇನ್ನಷ್ಟು ತೀವ್ರಗೊಳ್ಳಬಹುದು ಎಂದು ಆಸ್ಪತ್ರೆ ಎಚ್ಚರಿಸಿದೆ. ನೆಬ್ಯುಲೈಸರ್ ಬಳಸಿದರೆ ರಕ್ತದಲ್ಲಿರುವ ಆಮ್ಲಜನಕದ ಪ್ರಮಾಣ ಹೆಚ್ಚುತ್ತದೆ ಎಂಬ ವಾದವನ್ನು ಮೇದಾಂತ ಆಸ್ಪತ್ರೆ ಸರ್ಜನ್ ಅರವಿಂದರ್ ಸಿಂಗ್ ಅಲ್ಲಗಳೆದಿದ್ದಾರೆ. ಹಲವು ವೈದ್ಯರು ಈ ತಂತ್ರವನ್ನು ಒಪ್ಪಿಲ್ಲ ಎಂದು ಆಲ್ಟ್ ನ್ಯೂಸ್ ವರದಿ ಮಾಡಿದೆ. ‘ನೆಬ್ಯುಲೈಸರ್ ಬಳಸುವ ವಿಧಾನದ ಬಗ್ಗೆ ರೋಗಿಯೊಬ್ಬರಿಗೆ ಮಾಡಿ ಕಳುಹಿಸಿದ್ದ ವಿಡಿಯೊ ಇದು’ ಎಂದು ವಿಡಿಯೊದಲ್ಲಿರುವ ವೈದ್ಯ ಡಾ. ಅಲೋಕ್ ಸ್ಪಷ್ಟಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.