ADVERTISEMENT

ಫ್ಯಾಕ್ಟ್‌ಚೆಕ್‌: ಪಿಎಫ್‌ಐಗೆ ಕಾಂಗ್ರೆಸ್‌ ನೆರವು ನೀಡಿತ್ತೆ?

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 19:30 IST
Last Updated 29 ಸೆಪ್ಟೆಂಬರ್ 2022, 19:30 IST
ಹಿಂದೂ ಮಹಾ ಸಭಾದ ನಾಯಕಿ ಪ್ರಾಚಿ ಸಾಧ್ವಿ ಅವರ ಪೋಸ್ಟ್‌
ಹಿಂದೂ ಮಹಾ ಸಭಾದ ನಾಯಕಿ ಪ್ರಾಚಿ ಸಾಧ್ವಿ ಅವರ ಪೋಸ್ಟ್‌   

ಪಿಎಫ್‌ಐಗೆ ಕಾಂಗ್ರೆಸ್‌ ನೆರವು ನೀಡುತ್ತಿದೆ ಎಂದು ಬಿಜೆಪಿಯ ಹಲವು ನಾಯಕರು ಆರೋಪಿಸಿದ್ದಾರೆ. ‘ಸೆಪ್ಟೆಂಬರ್ 23ರಂದು ಕೇರಳದಾದ್ಯಂತ ಬಂದ್ ಆಚರಣೆಗೆ ಪಿಎಫ್‌ಐ ಕರೆ ನೀಡಿತ್ತು. ಅದೇ ದಿನ ಕಾಂಗ್ರೆಸ್‌ ತನ್ನ ಭಾರತ ಜೋಡೊ ಯಾತ್ರೆಗೆ ವಿರಾಮ ನೀಡಿದೆ. ಈ ಮೂಲಕ ಪಿಎಫ್‌ಐ ಅನ್ನು ಬೆಂಬಲಿಸಿದೆ’ ಎಂದು ಬಿಜೆಪಿ ನಾಯಕ ಕಪಿಲ್ ಮಿಶ್ರಾ ಟ್ವೀಟ್ ಮಾಡಿದ್ದಾರೆ. ಹಿಂದೂ ಮಹಾ ಸಭಾದ ನಾಯಕಿ ಪ್ರಾಚಿ ಸಾಧ್ವಿ ಸಹ ಇದೇ ರೀತಿಯ ಟ್ವೀಟ್ ಮಾಡಿದ್ದಾರೆ.

ಇದು ಸುಳ್ಳು ಸುದ್ದಿ ಎಂದು ದಿ ಲಾಜಿಕಲ್ ಇಂಡಿಯನ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ. ‘ಸೆಪ್ಟೆಂಬರ್ 23ರಂದು ಭಾರತ ಜೋಡೊ ಯಾತ್ರೆಗೆ ವಿರಾಮ ನೀಡಲಾಗುತ್ತದೆ. ಅಂದು ಯಾತ್ರಿಗಳ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ ಎಂದು ಪಕ್ಷದ ನಾಯಕ ಜೈರಾಂ ರಮೇಶ್ ಅವರು ಸೆಪ್ಟೆಂಬರ್ 20ರಂದೇ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದರು. ಆ ವಿಡಿಯೊ ಟ್ವಿಟರ್‌ನಲ್ಲಿ ಲಭ್ಯವಿದೆ. ಜತೆಗೆ ದಿ ಹಿಂದೂ ಪತ್ರಿಕೆಯ ಸೆಪ್ಟೆಂಬರ್ 21ರ ಸಂಚಿಕೆಯಲ್ಲೂ ಈ ಸುದ್ದಿ ಪ್ರಕಟವಾಗಿದೆ. ಸೆಪ್ಟೆಂಬರ್ 23ರ ಬಂದ್‌ ಆಚರಣೆಗೆ ಪಿಎಫ್‌ಐ ಕರೆ ನೀಡಿದ್ದು ಸೆಪ್ಟೆಂಬರ್ 22ರ ಸಂಜೆ. ಹೀಗಾಗಿ ಪಿಎಫ್‌ಐ ಬಂದ್‌ ಕರೆಗೂ, ಭಾರತ ಜೋಡೊ ಜಾತ್ರೆಯ ವಿರಾಮಕ್ಕೂ ಸಂಬಂಧವಿಲ್ಲ. ಬಿಜೆಪಿ ನಾಯಕರು ಸುಳ್ಳು ಮಾಹಿತಿ ಟ್ವೀಟ್ ಮಾಡುವ ಮೂಲಕ ಜನರ ಹಾದಿ ತಪ್ಪಿಸಿದ್ದಾರೆ’ ಎಂದು ಫ್ಯಾಕ್ಟ್‌ಚೆಕ್‌ನಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT