ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್–ಬಿಜೆಪಿ ನಡುವೆ ಒಪ್ಪಂದ ಏರ್ಪಟ್ಟಿದೆ ಎಂದು ಹೇಳಲಾಗುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಸ್ಪೀಕರ್ ಓಂ ಬಿರ್ಲಾ, ಗೃಹಸಚಿವ ಅಮಿತ್ ಶಾ, ಕಾಂಗ್ರೆಸ್ ಮುಖಂಡ ಅಧಿರ್ ರಂಜನ್ ಚೌಧರಿ ಅವರು ‘ರಹಸ್ಯ ಸಭೆ’ ನಡೆಸುತ್ತಿದ್ದಾರೆ’ ಎಂದು ಚಿತ್ರಕ್ಕೆ ಅಡಿಬರಹ ನೀಡಲಾಗಿದೆ. ‘2024ರಲ್ಲೂ ಮೋದಿ ಅವರು ಪ್ರಧಾನಿಯಾಗಿ ಮುಂದುವರಿಯಲು ಕಾಂಗ್ರೆಸ್ ಅವಕಾಶ ಮಾಡಿಕೊಡಲಿದೆ. ಮುಸ್ಲಿಮರು ಕಾಂಗ್ರೆಸ್ಗೆ ಬಹಿಷ್ಕಾರ ಹಾಕಬೇಕು. ಏಕೆಂದರೆ ಇಂತಹ ಒಪ್ಪಂದವೊಂದು ನಡೆದಿದ್ದು, ಕಾಂಗ್ರೆಸ್ಗೆ ಮತ ಹಾಕಿದರೆ ಮುಸ್ಲಿಮರು ನಾಶವಾಗುತ್ತಾರೆ’ ಎಂದು ಟ್ವಿಟರ್ ಬಳಕೆದಾರರೊಬ್ಬರು ಉಲ್ಲೇಖಿಸಿದ್ದಾರೆ. ಆದರೆ ಇದು ಸುಳ್ಳು ಸುದ್ದಿ.
2021ರ ಆಗಸ್ಟ್ 12ರಂದು ದೆಹಲಿಯಲ್ಲಿ ನಡೆದ ಸರ್ವಪಕ್ಷ ಸಭೆಯ ಚಿತ್ರವಿದು ಎಂದು ‘ಪಿಟಿಐ’ ಫ್ಯಾಕ್ಟ್ಚೆಕ್ ಪ್ರಕಟಿಸಿದೆ. ಲೋಕಸಭೆ ಕಲಾಪ ಮುಂದೂಡಿಕೆ ಬಳಿಕ, ಸ್ಪೀಕರ್ ಓಂ ಬಿರ್ಲಾ ಅವರು ಕರೆದಿದ್ದ ಸರ್ವಪಕ್ಷಗಳ ಸಭೆ ಕುರಿತ ಈ ಚಿತ್ರವು, ಅಂದು ಬಹುತೇಕ ಪತ್ರಿಕೆಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಬಿರ್ಲಾ ಅವರೂ ಈ ಸಭೆಯ ವಿಚಾರವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದರು. 2021ರ ಚಿತ್ರವನ್ನು ಕಾಂಗ್ರೆಸ್–ಬಿಜೆಪಿ ನಡುವಿನ ರಹಸ್ಯ ಒಪ್ಪಂದದ ಚಿತ್ರ ಎಂಬುದಾಗಿ ತಪ್ಪಾಗಿ ಅರ್ಥೈಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.