ADVERTISEMENT

ಫ್ಯಾಕ್ಟ್‌ಚೆಕ್: ಹಿಂದೂಗಳನ್ನು ಕೊಂದು, ಅವರ ಜನಸಂಖ್ಯೆಯನ್ನು ಕಡಿಮೆ ಮಾಡಲು ಸಂಚು?

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2022, 4:21 IST
Last Updated 2 ನವೆಂಬರ್ 2022, 4:21 IST
   

ಹಿಂದೂಗಳನ್ನು ಕೊಂದು, ಅವರ ಜನಸಂಖ್ಯೆಯನ್ನು ಕಡಿಮೆ ಮಾಡಲು ಮುಸ್ಲಿಮರು ಸಂಚು ರೂಪಿಸಿದ್ದರು. ಇದಕ್ಕಾಗಿ ಉತ್ತರ ಪ್ರದೇಶದ ಮುಜಪ್ಫರನಗರದಲ್ಲಿ ರಸಗುಲ್ಲಾ ತಯಾರಿಕೆ ವೇಳೆ ಅಪಾರ ಪ್ರಮಾಣದ ವಿಷ ಬೆರೆಸಲಾಗಿತ್ತು. ಆ ರಸಗುಲ್ಲಾವನ್ನು ದೀಪಾವಳಿಯಲ್ಲಿ ಮಾರಾಟ ಮಾಡಲು ಉದ್ದೇಶಿಸಿದ್ದರು. ಆದರೆ, ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಶೋಧ ಕಾರ್ಯ ನಡೆಸಿ ರಸಗುಲ್ಲಾವನ್ನು ನಾಶ ಮಾಡಿದರು. ಮುಸ್ಲಿಮರನ್ನು ಬಂಧಿಸಿದರು ಎಂಬ ವಿವರ ಇರುವ ವಿಡಿಯೊ ಮತ್ತು ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗಿವೆ. ಸುದರ್ಶನ ಟಿ.ವಿ.ಯ ಸುದರ್ಶನ ಚೌಹಾನ್ಕೆ ಅಂತಹ ವಿಡಿಯೊ ಹಂಚಿಕೊಂಡಿದ್ದಾರೆ. ಪೊಲೀಸರು ರಸಗುಲ್ಲಾವನ್ನು ಹಳ್ಳಕ್ಕೆ ಸುರಿಯುವ ದೃಶ್ಯ ಅದರಲ್ಲಿ ಇದೆ. ಇದು ಸುಳ್ಳು ಸುದ್ದಿ.

‘ಇದು ತಿರುಚಲಾದ ಮಾಹಿತಿ. ಮುಜಪ್ಫರನಗರದ ಪಟ್ಟಣವೊಂದರಲ್ಲಿನ ರಸಗುಲ್ಲಾ ತಯಾರಿಕೆಯ ಅಂಗಡಿಗಳಲ್ಲಿ ಇದೇ ಅಕ್ಟೋಬರ್‌ 21ರಂದು ಪೊಲೀಸರು ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದರು. ‘ರಸಗುಲ್ಲಾ ತಯಾರಿಕೆಯಲ್ಲಿ ಕಳಪೆ ಗುಣಮಟ್ಟದ ಸಾಮಗ್ರಿ ಮತ್ತು ನಿಷೇಧಿತ ರಾಸಾಯನಿಕಗಳನ್ನು ಬಳಸುತ್ತಿರುವುದು ಪತ್ತೆಯಾಯಿತು. ಆಗ 400 ಕ್ವಿಂಟಲ್‌ನಷ್ಟು ರಸಗುಲ್ಲಾವನ್ನು ನಾಶಮಾಡಲಾಯಿತು. ತಯಾರಿಕೆಯಲ್ಲಿ ತೊಡಗಿದ್ದ ಹಲವರನ್ನು ಬಂಧಿಸಲಾಯಿತು’ ಎಂದು ಮುಜಪ್ಫರನಗರ ಪೊಲೀಸರು ಟ್ವೀಟ್ ಮಾಡಿದ್ದಾರೆ. ಬಂಧಿತರಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಇದ್ದಾರೆ. ಹಿಂದೂಗಳನ್ನು ಕೊಲ್ಲಲು ಮುಸ್ಲಿಮರು ರಸಗುಲ್ಲಾದಲ್ಲಿ ವಿಷ ಬೆರೆಸಿದ್ದಾರೆ ಎಂಬುದು ಸುಳ್ಳು ಸುದ್ದಿ’ ಎಂದು ದಿ ಲಾಜಿಕಲ್ ಇಂಡಿಯನ್ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT