ಟೋಕಿಯೊ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದಿರುವ ನೀರಜ್ ಚೋಪ್ರಾ ಅವರು ಮಾಡಿದ್ದಾರೆ ಎನ್ನಲಾದ ಟ್ವೀಟ್ ಭಾರಿ ಸದ್ದು ಮಾಡುತ್ತಿದೆ. ಪದಕ ಗೆದ್ದ ಶ್ರೇಯವನ್ನು ರೈತರಿಗೆ ಅರ್ಪಿಸಿ ಅವರು ಮಾಡಿರುವ ಟ್ವೀಟ್ ವೈರಲ್ ಆಗಿದೆ. ‘ನಾನು ಮತ್ತು ನನ್ನ ತರಬೇತುದಾರರ ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ. ಪ್ರಧಾನಿಗೆ ಸುಮ್ಮನೆ ಇದರ ಶ್ರೇಯ ಕೊಡಬೇಡಿ’ ಎಂದು ಉಲ್ಲೇಖಿಸಲಾಗಿದೆ. ‘ಪ್ರಧಾನಿ ಅವರು ಏನೇ ಒಳ್ಳೆಯದಾದರೂ ತಮ್ಮಿಂದ ಎನ್ನುತ್ತಾರೆ’ ಎಂದು ಟ್ವಿಟರ್ ಬಳಕೆದಾರರೊಬ್ಬರು ಕಿಡಿಕಾರಿದ್ದಾರೆ. ರೈತರ ಮಗನಾಗಿರುವ ನೀರಜ್ ಅವರು ರೈತರಿಗೆ ಗೌರವ ಸಲ್ಲಿಸಿದ್ದು, ರೈತರ ಪ್ರತಿಭಟನೆಗೆ ಈ ಮೂಲಕ ಬೆಂಬಲ ಸೂಚಿಸಿದ್ದಾರೆ ಎಂಬ ಅರ್ಥದ ಚರ್ಚೆಗಳು ನಡೆಯುತ್ತಿವೆ.
2020ರ ಡಿಸೆಂಬರ್ನಲ್ಲಿ ಸೃಷ್ಟಿಯಾಗಿರುವ ನೀರಜ್ ಚೋಪ್ರಾ ಹೆಸರಿನ ಖಾತೆಯೊಂದಕ್ಕೆ (@neeraj_chopra_) ಕೇವಲ 24 ಸಾವಿರ ಫಾಲೋವರ್ಸ್ ಇದ್ದು, ಇದುವರೆಗೆ ಎರಡೇ ಟ್ವೀಟ್ ಮಾಡಲಾಗಿದೆ. ಆದರೆ 2017ರಲ್ಲಿ ರಚನೆಯಾದ @Neeraj_chopra1 ಎಂಬ ಹೆಸರಿನ ಖಾತೆ ನೀರಜ್ ಚೋಪ್ರಾ ಅವರದ್ದು ಎಂದು ಟ್ವಿಟರ್ ದೃಢಪಡಿಸಿದೆ. ಮೋದಿ, ರೈತರ ಹೆಸರನ್ನು ಪ್ರಸ್ತಾಪ ಮಾಡಿರುವ ಯಾವುದೇ ಟ್ವೀಟ್ ಈ ಎರಡೂ ಖಾತೆಗಳಲ್ಲಿ ಲಭ್ಯವಾಗಿಲ್ಲ. ಹೀಗಾಗಿ ವೈರಲ್ ಆಗಿರುವ ಟ್ವೀಟ್ ನಕಲಿ ಎಂದು ಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ವೇದಿಕೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.