ಕೋವಿಡ್ ಎರಡನೇ ಅಲೆಯು ದೇಶದಲ್ಲಿ ಸಾವಿರಾರು ಜನರನ್ನು ಬಲಿ ಪಡೆಯಿತು. ಅದೇ ಹೊತ್ತಿಗೆ ಎದುರಾದ ಆಮ್ಲಜನಕ ಕೊರತೆಯು ಇನ್ನಷ್ಟು ಸಾವುನೋವಿಗೆ ಕಾರಣವಾಯಿತು. ಆದರೆ ಆಮ್ಲಜನಕ ಕೊರತೆಯಿಂದ ಮೃತಪಟ್ಟಿದ್ದು ಒಬ್ಬರು ಮಾತ್ರ ಎಂದು ಸರ್ಕಾರ ತಿಳಿಸಿದೆ ಎಂದು ಇಂಗ್ಲಿಷ್ ನಿಯತಕಾಲಿಕಔಟ್ಲುಕ್ ವೆಬ್ಸೈಟ್ನಲ್ಲಿ ಪ್ರಕಟವಾಗಿದೆ. ಕೇಂದ್ರ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ಅವರು ಈ ಹೇಳಿಕೆ ನೀಡಿದ್ದಾರೆ ಎಂದು ವೆಬ್ಸೈಟ್ ಉಲ್ಲೇಖಿಸಿದೆ.
'ಪತ್ರಿಕೆ ಉಲ್ಲೇಖಿಸಿರುವ ಮಾಹಿತಿಯು ತಪ್ಪಾಗಿದೆ. ಆಮ್ಲಜನಕ ಕೊರತೆಯಿಂದ ಕೇವಲ ಒಂದು ಸಾವು ಸಂಭವಿಸಿದೆ ಎಂಬುದಾಗಿ ಲವ ಅಗರ್ವಾಲ್ ಅವರು ಎಲ್ಲಿಯೂ ಹೇಳಿಕೆ ಕೊಟ್ಟಿಲ್ಲ' ಎಂದು ಪಿಐಬಿ ಫ್ಯಾಕ್ಟ್ ಚೆಕ್ ವೇದಿಕೆ ತಿಳಿಸಿದೆ. 'ಆಮ್ಲಜನಕ ಕೊರತೆಯಿಂದ ಸಂಭವಿಸಿದ ಸಾವುಗಳ ಬಗ್ಗೆ ವರದಿ ನೀಡಿ ಎಂದು ರಾಜ್ಯಗಳಿಗೆ ಸೂಚಿಸಲಾಗಿತ್ತು. ಈವರೆಗೆ 13 ರಾಜ್ಯಗಳಷ್ಟೇ ಪ್ರತಿಕ್ರಿಯೆ ನೀಡಿವೆ. 'ಆಮ್ಲಜನಕ ಕೊರತೆಯಿಂದ ಸಾವು ಸಂಭವಿಸಿರಬಹುದು' ಎಂದು ಪಂಜಾಬ್ ಮಾತ್ರವೇ ಹೇಳಿದೆ. ಬೇರೆ ರಾಜ್ಯಗಳು ಮಾಹಿತಿಯೇ ನೀಡಿಲ್ಲ' ಎಂದು ಲವ ಅಗರ್ವಾಲ್ ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.