ADVERTISEMENT

ಜವೆಗೋಧಿಯ ಉಪ್ಪಿಟ್ಟು; ಸೂಸಲಾ..!

ಕಡಣಿಯ ಭೋಗೇಶ್ವರ ಟಿಫಿನ್ ಸೆಂಟರ್ ಭಾರಿ ಫೇಮಸ್‌

ರಮೇಶ ಎಸ್.ಕತ್ತಿ
Published 19 ಏಪ್ರಿಲ್ 2019, 20:00 IST
Last Updated 19 ಏಪ್ರಿಲ್ 2019, 20:00 IST
ಜವೆ ಗೋಧಿಯ ಉಪ್ಪಿಟ್ಟು ಸವಿಯುತ್ತಿರುವ ಗ್ರಾಹಕರು
ಜವೆ ಗೋಧಿಯ ಉಪ್ಪಿಟ್ಟು ಸವಿಯುತ್ತಿರುವ ಗ್ರಾಹಕರು   

ಆಲಮೇಲ:ಹನ್ನೆರೆಡು ವರ್ಷಗಳಿಂದ ತಾಲ್ಲೂಕಿನ ಕಡಣಿ ಗ್ರಾಮದಲ್ಲಿ ಶ್ರೀ ಭೋಗೇಶ್ವರ ಟಿಫಿನ್ ಸೆಂಟರ್ ಇದೆ. ಇಲ್ಲಿಗೆ ಬರುವ ಗ್ರಾಹಕರು ಕಡಿಮೆ ರೊಕ್ಕದಲ್ಲಿ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ತೃಪ್ತಿಯಿಂದ ಹೊರ ಹೋಗುತ್ತಾರೆ. ಮುಂಜಾನೆ–ಮುಸ್ಸಂಜೆ ಇಲ್ಲಿ ಜನದಟ್ಟಣೆ ಹೆಚ್ಚಿರುತ್ತದೆ.

ಪುಂಡಲೀಕ ಬಂದರವಾಡ ಈ ಹೋಟೆಲ್‌ ಮಾಲೀಕ. ತನ್ನೂರಾದ ಮಿರಗಿಯಿಂದ ಇಲ್ಲಿಗೆ ಬಂದು ನೆಲೆ ಕಂಡುಕೊಂಡಿದ್ದಾರೆ. ತಮ್ಮ ತಂದೆಯಿಂದ ಕಲಿತ ಅಡುಗೆ ಕಲೆಯನ್ನು, ಹೋಟೆಲ್ ಆರಂಭಿಸುವುದರೊಂದಿಗೆ ಸಾರ್ಥಕ ಗಳಿಸಿಕೊಂಡಿದ್ದಾರೆ. ಗ್ರಾಮಕ್ಕೆ ಯಾರೇ ಬಂದರೂ ಇಲ್ಲಿಗೆ ಭೇಟಿ ನೀಡುವುದು ಕಾಯಂ.

ಜವೆಗೋದಿ ಉಪ್ಪಿಟ್ಟು:

ADVERTISEMENT

ಬಹುತೇಕ ಹೋಟೆಲ್‌ಗಳಲ್ಲಿ ಬಾಂಬೆ ರವೆಯನ್ನು ಉಪ್ಪಿಟ್ಟಿಗೆ ಬಳಸುವುದು ವಾಡಿಕೆ. ಇಲ್ಲಿ ಜವೆಗೋಧಿಯಿಂದ ರವೆ ತಯಾರಿಸಿ, ಅದರಿಂದ ಸ್ವಾದಿಷ್ಟ ಉಪ್ಪಿಟ್ಟು ತಯಾರಿಸುತ್ತಾರೆ ಪುಂಡಲೀಕ. ಇದನ್ನು ಸವಿಯಲಿಕ್ಕಾಗಿಯೇ ಜನ ಮುಗಿಬೀಳುತ್ತಾರೆ.

₹ 5ಕ್ಕೆ ಸಿಂಗಲ್ ಟಿಫಿನ್. ₹ 10ಕ್ಕೆ ಫುಲ್‌ ಟಿಫಿನ್ ಎಂಬುದು ಇಲ್ಲಿನ ವೈಶಿಷ್ಟ್ಯ. ಈ ಜವೆಗೋಧಿ ಉಪ್ಪಿಟ್ಟು ಸಾಮಾನ್ಯ ರವೆಯ ಉಪ್ಪಿಟ್ಟಿನಂತಿರುವುದಿಲ್ಲ. ಅದರ ಸ್ವಾದ, ಘಮಘಮ ಸುವಾಸನೆ ಸವಿದವರು ಮತ್ತೇ ಮತ್ತೇ ಇಲ್ಲಿಗೆ ಬರುತ್ತಾರೆ. ನಿತ್ಯ ಬೆಳಿಗ್ಗೆ 10ಗಂಟೆವರೆಗೆ 200ಕ್ಕೂ ಹೆಚ್ಚು ಗ್ರಾಹಕರು ಭೇಟಿ ನೀಡಿ ಈ ಉಪ್ಪಿಟ್ಟು ತಿನ್ನುತ್ತಾರೆ.

ಇದರ ಜತೆಯಲ್ಲೇ ಸೂಸಲಾವೂ ಸಿದ್ಧ. ಇದಕ್ಕೂ ₹ 10 ದರ. ಚಹಾ ₹ 2. ಕೇಟಿ ₹ 3. ಕಡಿಮೆ ಹಣದಲ್ಲಿ ಇಂಥಹ ಸ್ವಾದಿಷ್ಟ ತಿನಿಸು ಕೊಡುವ ಕಾರಣವೇನು ಎಂದರೇ, ‘ಇಲ್ಲಿ ಹೋಟೆಲ್‌ ನಿರ್ಮಿಸಲು ಜಾಗ ನೀಡಿದವರು ಮಲಕಣ್ಣಗೌಡ ಬಾಲಗೊಂಡ. 12 ವರ್ಷಗಳಿಂದಲೂ ಯಾವುದೇ ಬಾಡಿಗೆ ಪಡೆದಿಲ್ಲ. ಪುಕ್ಕಟೆ ಸ್ಥಳ ನೀಡಿದ್ದು, ಹಳ್ಳಿಯ ಮಂದಿಗೆ ₹ 10 ದೊಡ್ಡದು’ ಎನ್ನುತ್ತಾರೆ ಪುಂಡಲೀಕ.

‘ನನ್ನ ಜತೆ ಪತ್ನಿಯೂ ದುಡಿಯುತ್ತಾಳೆ. ಸಾರ್ಥಕ ಬದುಕಿಗೆ ಇದು ಸಹಾಯವಾಗಿದೆ. ಗ್ರಾಹಕ ಸಂತೃಪ್ತಿ, ನಾವು ಸುಖಿಯಾಗಿದ್ದೇವೆ’ ಎಂದು ಪುಂಡಲೀಕ ಹೇಳಿದರು.

ರದ್ದಿ ಕಾಗದವೇ ಇಲ್ಲಿ ಪ್ಲೇಟ್‌ ಆಗುತ್ತದೆ, ಹಾಳೆಯಲ್ಲೇ ಉಪ್ಪಿಟ್ಟು. ಸೂಸಲಾ, ಭಜಿ ಕೊಡುತ್ತಾರೆ.

ಉಚಿತ ಸೇವೆ:

ಜಾತ್ರೆ, ಉತ್ಸವಗಳಲ್ಲಿ, ಸಣ್ಣಪುಟ್ಟ ಕಾರ್ಯಕ್ರಮಗಳಿಗೂ ಉಪಾಹಾರ ಮಾಡಿಕೊಡುತ್ತಾರೆ. ಆದರೆ ಸಂಭಾವನೆ ಪಡೆಯಲ್ಲ. ನನ್ನದು ನಿಮ್ಮ ಜತೆ ಭಕ್ತಿ ಸೇವೆ ಎನ್ನುತ್ತಾರೆ ಪುಂಡಲೀಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.