ADVERTISEMENT

ಆರೋಗ್ಯಕ್ಕೂ ರುಚಿಗೂ ಕಷಾಯ, ಸೂಪ್‌

ಮನಸ್ವಿ
Published 30 ಏಪ್ರಿಲ್ 2021, 19:30 IST
Last Updated 30 ಏಪ್ರಿಲ್ 2021, 19:30 IST
ಕ್ಯಾರೆಟ್‌, ಕಿತ್ತಳೆ, ಶುಂಠಿ ಸ್ಮೂದಿ
ಕ್ಯಾರೆಟ್‌, ಕಿತ್ತಳೆ, ಶುಂಠಿ ಸ್ಮೂದಿ   

ಕಷಾಯ

ಬೇಕಾಗುವ ಸಾಮಗ್ರಿಗಳು: ಕಷಾಯ ‍ಪುಡಿ ತಯಾರಿಸಲು: ಅರಿಸಿನ – 1 ಇಂಚು, ಒಣಶುಂಠಿ – ಅರ್ಧ ಇಂಚು, ಕೊತ್ತಂಬರಿ ಕಾಳು – 1 ಕಪ್‌, ಜೀರಿಗೆ – 1/2 ಕಪ್‌, ಕಾಳುಮೆಣಸು – 1/2 ಕಪ್‌, ಮೆಂತ್ಯೆ – ಸ್ವಲ್ಪ, ಲವಂಗ – 8, ಏಲಕ್ಕಿ – 2, ನೀರು – 1ಕಪ್‌, ಬೆಲ್ಲ – 4 ರಿಂದ 5 ತುಂಡು, ಹಾಲು – ಅರ್ಧ ಕಪ್‌.

ತಯಾರಿಸುವ ವಿಧಾನ: ಮೇಲೆ ಹೇಳಿದ ಬೆಲ್ಲ, ಹಾಲು, ನೀರು ಬಿಟ್ಟು ಉಳಿದ ಎಲ್ಲಾ ಸಾಮಗ್ರಿಗಳನ್ನು ಹುರಿದುಕೊಳ್ಳಿ. ಅದನ್ನು ತಣ್ಣಗಾಗಲು ಬಿಡಿ. ಪೂರ್ತಿ ತಣ್ಣದಾಗ ಮೇಲೆ ಮಿಕ್ಸಿಯಲ್ಲಿ ನೀರು ಸೇರಿಸದೇ ನುಣ್ಣಗೆ ಪುಡಿ ಮಾಡಿಕೊಳ್ಳಿ. ಈ ಪುಡಿಯನ್ನು ನೀರಿನಂಶ ಇಲ್ಲದ ಗಾಜಿನ ಡಬ್ಬಿಯಲ್ಲಿ ಸಂಗ್ರಹಿಸಿಡಿ. ಆಗಾಗ ಬಳಸಲು ಅನುಕೂಲವಾಗುತ್ತದೆ.

ADVERTISEMENT

ಕಷಾಯ ತಯಾರಿಸುವುದು: ಒಂದು ಪಾತ್ರೆಯಲ್ಲಿ ನೀರು ಕುದಿಯಲು ಇಡಿ. ಕುದಿಯಲು ಆರಂಭಿಸಿದ ಮೇಲೆ ಅದಕ್ಕೆ ಬೆಲ್ಲ, ಅರಿಸಿನ ಪುಡಿ, ಕಷಾಯದ ಪುಡಿ, ಸ್ವಲ್ಪ ಶುಂಠಿ ಪೇಸ್ಟ್‌ ಸೇರಿಸಿ ಮಧ್ಯಮ ಉರಿಯಲ್ಲಿ ಕುದಿಸಿ. ನೀರು ಕುದ್ದು ಅರ್ಧಕ್ಕೆ ಬಂದ ಮೇಲೆ ಅದಕ್ಕೆ ಹಾಲು ಸೇರಿಸಿ ಕುದಿಸಿದರೆ ಕಷಾಯ ಕುಡಿಯಲು ಸಿದ್ಧ.

ನಿಂಬೆ ಕೊತ್ತಂಬರಿ ಸೂಪ್‌

ಬೇಕಾಗುವ ಸಾಮಗ್ರಿಗಳು: ಎಣ್ಣೆ – 1 ಚಮಚ, ಶುಂಠಿ – 1 ಇಂಚು (ಹೆಚ್ಚಿದ್ದು), ಬೆಳ್ಳುಳ್ಳಿ – 4 ಹೆಚ್ಚಿದ್ದು, ಸ್ಪ್ರಿಂಗ್‌ ಈರುಳ್ಳಿ – ಕಾಲು ಕಪ್‌, ಕ್ಯಾರೆಟ್‌ – ಮುಕ್ಕಾಲು ಕಪ್‌, ಬಟನ್ ಅಣಬೆ – 1/2 ಕಪ್‌, ಹಸಿಮೆಣಸು – 1 ಹೆಚ್ಚಿದ್ದು, ಕಾಳುಮೆಣಸಿನ ಪುಡಿ – ಅಗತ್ಯವಿದ್ದಷ್ಟು, ಉಪ್ಪು – ರುಚಿಗೆ, ನೀರು – 4 ಕಪ್‌, ನಿಂಬೆರಸ – 2 ಟೇಬಲ್ ಚಮಚ, ಕೊತ್ತಂಬರಿ ಸೊಪ್ಪು – ಮುಕ್ಕಾಲು ಕಪ್‌, ಸ್ಪ್ರಿಂಗ್‌ ಈರುಳ್ಳಿ ಎಲೆ – 2 ಚಮಚ

ಅಲಂಕರಿಸಲು: ಕೊತ್ತಂಬರಿ ಸೊಪ್ಪು – 1 ಟೇಬಲ್ ಚಮಚ, ನಿಂಬೆಹಣ್ಣಿನ ಹೋಳು – 4 ತುಂಡು, ಸ್ಪ್ರಿಂಗ್ ಈರುಳ್ಳಿ ಹೆಚ್ಚಿದ್ದು – 1 ಚಮಚ.

ತಯಾರಿಸುವ ವಿಧಾನ: ಸ್ಪ್ರಿಂಗ್ ಈರುಳ್ಳಿ ಹಾಗೂ ಅಣಬೆಯನ್ನು ಚೆನ್ನಾಗಿ ತೊಳೆದು ಕತ್ತರಿಸಿ. ಕ್ಯಾರೆಟ್ ಸಿಪ್ಪೆ ತೆಗೆದು ಹೆಚ್ಚಿಕೊಳ್ಳಿ. ಕೊತ್ತಂಬರಿ ಸೊಪ್ಪು ಹಾಗೂ ಹಸಿಮೆಣಸನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ. ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಬಿಸಿಯಾದ ಮೇಲೆ ಶುಂಠಿ, ಬೆಳ್ಳುಳ್ಳಿ ಹಾಗೂ ಹಸಿಮೆಣಸು ಹಾಕಿ ಕೊಂಚ ಪರಿಮಳ ಬರುವವರೆಗೂ ಹುರಿದುಕೊಳ್ಳಿ. ಅದಕ್ಕೆ ಕಾಲು ಕಪ್‌ ಸ್ಪ್ರಿಂಗ್ ಈರುಳ್ಳಿ ಸೇರಿಸಿ ಸ್ವಲ್ಪ ಹೊತ್ತು ಕೈಯಾಡಿಸಿ. ಅದಕ್ಕೆ ಹೆಚ್ಚಿದ ಅಣಬೆ, ಕ್ಯಾರೆಟ್‌, ಬೇಬಿ ಕಾರ್ನ್‌, ಹಸಿರುಬಟಾಣಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದನ್ನು ಮಧ್ಯಮ ಉರಿಯಲ್ಲಿ 3 ನಿಮಿಷ ಬೇಯಿಸಿ. ಅದಕ್ಕೆ 4 ಕಪ್ ನೀರು ಸೇರಿಸಿ ಕುದಿಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಕಾಳುಮೆಣಸು ಸೇರಿಸಿ. ತರಕಾರಿ ಎಲ್ಲಾ ಚೆನ್ನಾಗಿ ಬೇಯುವವರೆಗೂ ಕುದಿಸಿ. ತರಕಾರಿ ಬೆಂದ ಮೇಲೆ ಕೊತ್ತಂಬರಿ ಸೊಪ್ಪು ಹಾಗೂ 2 ಚಮಚ ನಿಂಬೆರಸ ಸೇರಿಸಿ ಮಿಶ್ರಣ ಮಾಡಿ ಕುದಿಸಿ ಗ್ಯಾಸ್ ಆಫ್ ಮಾಡಿ. ಅದಕ್ಕೆ ಸ್ಪ್ರಿಂಗ್ ಈರುಳ್ಳಿ ಎಲೆಯನ್ನು ಹೆಚ್ಚಿ ಹಾಕಿ. ಸೂಪ್ ಬಿಸಿ ಇರುವಾಗಲೇ ಕುಡಿಯಲು ಕೊಡಿ.

ಕ್ಯಾರೆಟ್‌, ಕಿತ್ತಳೆ, ಶುಂಠಿ ಸ್ಮೂದಿ

ಬೇಕಾಗುವ ಸಾಮಗ್ರಿಗಳು: ಕಿತ್ತಳೆ – 1 ಹಣ್ಣು, ಕ್ಯಾರೆಟ್‌ – 1, ಶುಂಠಿ – 1 ಇಂಚು, ಅರಿಸಿನ – 1 ಇಂಚು, ತೆಂಗಿನಹಾಲು – 2 ಚಮಚ, ಕಾಳುಮೆಣಸು – 4 ರಿಂದ 5, ಜೇನುತುಪ್ಪ – 2 ಚಮಚ, ಹಾಲು – 1ಕಪ್‌

ತಯಾರಿಸುವ ವಿಧಾನ: ಕಿತ್ತಳೆ, ಸಿಪ್ಪೆ ತೆಗೆದ ಕ್ಯಾರೆಟ್‌, ಸಿಪ್ಪೆ ತೆಗೆದ ಶುಂಠಿ ಹಾಗೂ ಅರಿಸಿನ ಮಿಕ್ಸಿಗೆ ಹಾಕಿ. ಅದಕ್ಕೆ ತೆಂಗಿನಹಾಲು, ಕಾಳುಮೆಣಸು, ಜೇನುತುಪ್ಪ ಹಾಗೂ ಹಾಲು ಸೇರಿಸಿ ಚೆನ್ನಾಗಿ ರುಬ್ಬಿದರೆ ಸ್ಮೂದಿ ಸಿದ್ಧ. ಇದು ಬೇಸಿಗೆಗೆ ಉತ್ತಮ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಲು ಸಹಾಯಕ.

ಮಿಶ್ರ ಎಲೆಗಳ ಕಷಾಯ

ಬೇಕಾಗುವ ಸಾಮಗ್ರಿಗಳು: ಅಮೃತಬಳ್ಳಿ ಎಲೆ – 5, ತುಳಸಿ ಎಲೆ – ಸ್ವಲ್ಪ, ಕಾಳುಮೆಣಸು – 1 ಚಮಚ, ದೊಡ್ಡಪತ್ರೆ– 4, ಒಂದೆಲಗ ಎಲೆ – 4, ಕೊತ್ತಂಬರಿ ಕಾಳು – 1 ಚಮಚ, ಜೀರಿಗೆ – 1 ಚಮಚ, ಶುಂಠಿ – 1 ತುಂಡು, ವೀಳ್ಯದೆಲೆ – 2, ಬೆಲ್ಲ – ಸ್ವಲ್ಪ, ನೀರು – 2 ಕಪ್‌

ತಯಾರಿಸುವ ವಿಧಾನ: ಬೆಲ್ಲ ಬಿಟ್ಟು ಉಳಿದ ಸಾಮಗ್ರಿಗಳನ್ನು ಸ್ವಲ್ಪ ನೀರು ಸೇರಿಸಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು. 2 ಕಪ್‌ ನೀರು ಕುದಿಯಲು ಇಟ್ಟು ಅದಕ್ಕೆ ಬೆಲ್ಲ ಹಾಗೂ ರುಬ್ಬಿದ ಮಿಶ್ರಣ ಸೇರಿಸಿ ಚೆನ್ನಾಗಿ ಕುದಿಸಿ ಸೋಸಿ ಕುಡಿಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.