ADVERTISEMENT

ಮಕ್ಕಳನ್ನು 3ನೇ ಅಲೆಯಿಂದ ತಪ್ಪಿಸಲು ಪೌಷ್ಠಿಕಾಂಶದ ಬಗ್ಗೆ ಕಾಳಜಿ ಇರಲಿ

ಡಾ.ಸ್ಮಿತಾ ಜೆ ಡಿ
Published 16 ಆಗಸ್ಟ್ 2021, 10:24 IST
Last Updated 16 ಆಗಸ್ಟ್ 2021, 10:24 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಕೋವಿಡ್ ಸೋಂಕು ವಯಸ್ಕರ ಜೀವನದಲ್ಲಿ ಅಲ್ಲದೆ, ಮಕ್ಕಳ ದೈನಂದಿನ ಜೀವನದ ಮೇಲೆ ಸಹ ಅನೇಕ ಬದಲಾವಣೆಗಳನ್ನು ತಂದಿದೆ.

ಶಾಲಾ ಕಾಲೇಜುಗಳು ಇಲ್ಲದಿರುವ ಬೇಸರ ಒಂದೆಡೆಯಾದರೆ, ಆಟಪಾಠಗಳಲ್ಲಿನ ಏರುಪೇರು ಇನ್ನೊಂದು ಕಡೆ. ಮನೆಯಲ್ಲೇ ಬಂಧಿಯಾಗಿರುವ ಮಕ್ಕಳ ಮಾನಸಿಕ ಆರೋಗ್ಯವು ಅಸ್ಥಿರವಾಗುತ್ತಿದೆ.

ಸರ್ಕಾರಿ ಶಾಲೆಗಳು ಮುಚ್ಚಿರುವುದರಿಂದ ಅಲ್ಲಿ ಒದಗಿಸುತ್ತಿದ್ದ ಪೌಷ್ಠಿಕ ಆಹಾರದಿಂದ ಮಕ್ಕಳು ವಂಚಿತರಾಗುತ್ತಿದ್ದಾರೆ. ಅಧ್ಯಯನಗಳ ಪ್ರಕಾರ 37 ಕೋಟಿ ಮಕ್ಕಳು ಶಾಲೆಗಳಲ್ಲಿ ಒದಗಿಸುತ್ತಿದ್ದ ಪೌಷ್ಠಿಕ ಆಹಾರದಿಂದ ವಂಚಿತರಾಗಿದ್ದಾರೆ. ಇದು ಒಂದೆಡೆಯಾದರೆ ಬದಲಾದ ಆಹಾರ ಅಭ್ಯಾಸಗಳು ಹಾಗೂ ದೈಹಿಕ ಚಟುವಟಿಕೆ ಕಡಿಮೆಯಾಗುತ್ತಿರುವುದರಿಂದ ಅತಿತೂಕದ ಸಮಸ್ಯೆ ಸಹ ಉಂಟಾಗಿದೆ.

ADVERTISEMENT

ಇದಲ್ಲದೆ ಆರೋಗ್ಯ ವ್ಯವಸ್ಥೆಯಲ್ಲಿನ ಏರುಪೇರುಗಳಿಂದ ಮಕ್ಕಳಿಗೆ ಸಿಗಬೇಕಾದ ಲಸಿಕೆಗಳು ಹಾಗೂ ಇತರೆ ಕಾಯಿಲೆಗಳ ಚಿಕಿತ್ಸೆಗಳೂ ಸಹ ಕುಂಠಿತವಾಗುತ್ತಿದೆ. “ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ಸ್ಟಡಿ” ಪ್ರಕಾರ ಪ್ರಪಂಚದಾದ್ಯಂತ 1.10 ಕೋಟಿ ಮಕ್ಕಳು ( ಅಂದರೆ 5 ಮಕ್ಕಳಲ್ಲಿ ಒಂದು ) ಅಪೌಷ್ಠಿಕತೆಯಿಂದ ಮರಣ ಹೊಂದುತ್ತಿದ್ದಾರೆ.

ಮಕ್ಕಳು ಕಾಲೋಚಿತ ವೈರಸ್ ಗಳ ಅಂದರೆ ಫ್ಲೂ ಮುಂತಾದ ವೈರಾಣುಗಳ ಆಗರವಾಗಿರುವುದರಿಂದ ಹಾಗೂ ಆಂತರಿಕ ಶಕ್ತಿಯನ್ನು ತಾಯಿಯ ಗರ್ಭದಿಂದ ಪಡೆದಿರುವುದರಿಂದ ಸ್ವಾಭಾವಿಕವಾಗಿ ಆಂತರಿಕ ಶಕ್ತಿಯು ಹೆಚ್ಚಿರುತ್ತದೆ. ಆದರೂ ಸಹ ಮಕ್ಕಳ ಆಹಾರದ ಬಗ್ಗೆ ಪೌಷ್ಠಿಕತೆಯ ಬಗ್ಗೆ ನಿಗಾ ವಹಿಸುವುದು ಪೋಷಕರ ಕರ್ತವ್ಯವಾಗಿದೆ.

ದೈನಂದಿನ ಮಕ್ಕಳ ಆಹಾರಾಭ್ಯಾಸಗಳಲ್ಲಿ ಗಮನಿಸಬೇಕಾದ ಅಂಶಗಳು :

*ಸಮತೋಲನ ಆಹಾರ ಮಕ್ಕಳ ದೇಹದ ಆಂತರಿಕ ರೋಗನಿರೋಧಶಕ್ತಿಯನ್ನು ವೃದ್ಧಿಸಲು ಅವಶ್ಯಕ.
*ಮಗು ಹುಟ್ಟಿದಾಗಿನಿoದ 6 ತಿಂಗಳಿನವರೆಗೆ ಕೇವಲ ತಾಯಿಯ ಎದೆ ಹಾಲನ್ನು ಕುಡಿಸುವುದು ಒಳಿತು.
*ಮಗುವಿಗೆ ಆರು ತಿಂಗಳ ನಂತರ ತಾಯಿಯ ಎದೆ ಹಾಲಿನೊಂದಿಗೆ ಪೂರಕ ಆಹಾರ, ಬೇಯಿಸಿದ ತರಕಾರಿಗಳು, ಧಾನ್ಯಗಳು, ಕಾಳುಗಳು, ಹಣ್ಣು, ಹಾಲಿನ ಉತ್ಪನ್ನಗಳು, ಒಣಹಣ್ಣುಗಳನ್ನು ಒದಗಿಸಬಹುದು.
*ಆಹಾರದಲ್ಲಿ ಸೂಕ್ಷ್ಮ ಪೋಷಕಾಂಶಗಳಾದ ವಿಟಮಿನ್ ಗಳು, ಜಿಂಕ್, ಕಾಪರ್, ಸೆಲೇನಿಯಂ, ಕಬ್ಬಿಣಾಂಶ ಮಗುವಿನ ಆಂತರಿಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹಾಗೂ ಸೋಂಕಿನಿಂದ ರಕ್ಷಿಸಲು ಅತ್ಯವಶ್ಯಕ.
*ಆಹಾರದಲ್ಲಿ ವಿಟಮಿನ್ ಎ, ಸಿ, ಡಿ ಯುಕ್ತ ಆಹಾರಗಳಾದ ಹುಳಿ ಹಣ್ಣುಗಳು, ಹಳದಿ ಹಣ್ಣುಗಳು, ಸೊಪ್ಪು ತರಕಾರಿಗಳು, ಪಾಲಕ್ ಸೊಪ್ಪು, ಬೆಳ್ಳುಳ್ಳಿ, ಶುಂಠಿ, ಬಾದಾಮಿ, ಮೊಸರು, ಅರಿಶಿನವು ಮಕ್ಕಳ ಆಂತರಿಕ ರೋಗನಿರೋಧಕ ಶಕ್ತಿ ಹೆಚ್ಚಿಸಲು ಪೂರಕ.
*ಮಕ್ಕಳ ಶರೀರದಲ್ಲಿನ ನೀರಿನಾಂಶವನ್ನು ಹಾಗೂ ಗುಣಮಟ್ಟದ ನಿದ್ರೆ ಕಾಪಾಡಿಕೊಳ್ಳುವುದು ಸೋಂಕಿನಿಂದ ರಕ್ಷಿಸಲು ಸಹಾಯಕ.
*ದೈಹಿಕ ಚಟುವಟಿಕೆ, ಸಮತೋಲನವಾದ ಆಹಾರ, ಶರೀರದಲ್ಲಿನ ನೀರಿನಾಂಶ, ಒಳ್ಳೆಯ ನಿದ್ರೆ ಹಾಗೂ ವಿಶ್ರಾಂತಿ ಮಕ್ಕಳನ್ನು ಕೋವಿಡ್ -19 ಸೋಂಕಿನಿಂದ ರಕ್ಷಿಸಲು ಅತ್ಯವಶ್ಯಕ.

ಲೇಖಕರು:ಓರಲ್ ಮೆಡಿಸಿನ್ ಅಂಡ್ ರೇಡಿಯೋಲಾಜಿ ತಜ್ಞರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.