ADVERTISEMENT

ಹಿರೇನ್ ಕೊಲೆ ಪ್ರಕರಣ: ಪೊಲೀಸ್ ಅಧಿಕಾರಿ ಪ್ರದೀಪ್ ಶರ್ಮಾ ಮನೆ ಮೇಲೆ ಎನ್‌ಐಎ ದಾಳಿ

ಪಿಟಿಐ
Published 17 ಜೂನ್ 2021, 6:03 IST
Last Updated 17 ಜೂನ್ 2021, 6:03 IST
ಕಳೆದ ಮಾರ್ಚ್‌ 20ರಂದು ಮುಂಬೈನಲ್ಲಿ ಮುಕೇಶ್ ಅಂಬಾನಿ ನಿವಾಸದ ಬಳಿ ಸ್ಪೋಟ ಪತ್ತೆ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ ಅಧಿಕಾರಿಗಳು (ಸಂಗ್ರಹ ಚಿತ್ರ)
ಕಳೆದ ಮಾರ್ಚ್‌ 20ರಂದು ಮುಂಬೈನಲ್ಲಿ ಮುಕೇಶ್ ಅಂಬಾನಿ ನಿವಾಸದ ಬಳಿ ಸ್ಪೋಟ ಪತ್ತೆ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ ಅಧಿಕಾರಿಗಳು (ಸಂಗ್ರಹ ಚಿತ್ರ)   

ಮುಂಬೈ: ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ನಿವಾಸದ ಸಮೀಪ ಬಾಂಬ್‌ ಪತ್ತೆ ಹಾಗೂ ಮನಸುಖ್‌ ಹಿರೇನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಗುರುವಾರ ‘ಎನ್‌ಕೌಂಟರ್ ಸ್ಪೆಷಲಿಸ್ಟ್‌‘ ಪೊಲೀಸ್ ಅಧಿಕಾರಿ ಪ್ರದೀಪ್ ಶರ್ಮಾ ಅವರ ನಿವಾಸದ ಮೇಲೆ ದಾಳಿ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಎನ್‌ಐಎ ತಂಡ ಸಶಸ್ತ್ರ ಸಿಆರ್‌ಪಿಎಫ್‌ ತಂಡದೊಂದಿಗೆ ಇಲ್ಲಿನ ಅಂಧೇರಿ ಉಪನಗರದ ಪಶ್ಚಿಮ ಭಾಗದ ಜೆ.ಬಿ.ನಗರದಲ್ಲಿರುವ ಶರ್ಮಾ ಅವರ ಮನೆ ಮೇಲೆ ಮುಂಜಾನೆ 6 ಗಂಟೆ ಸಮಯದಲ್ಲಿ ದಾಳಿ ನಡೆಸಿದೆ ಎಂದು ಮೂಲಗಳು ಖಚಿತಪಡಿಸಿವೆ.

ಇದೇ ವೇಳೆ ಮನ್‌ಸುಖ್ ಹಿರೇನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶರ್ಮಾ ಅವರನ್ನು ಎನ್‌ಐಎ ಅಧಿಕಾರಿಗಳು ಪ್ರಶ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ದಾಳಿಯ ವೇಳೆ ಶರ್ಮಾ ನಿವಾಸವನ್ನು ಸಂಪರ್ಕಿಸುವ ಎಲ್ಲ ರಸ್ತೆಗಳನ್ನು ಸಿಆರ್‌ಪಿಎಫ್‌ ಪಡೆಗಳು ಸುತ್ತುವರಿದಿದ್ದು, ಈ ಪ್ರದೇಶದಲ್ಲಿ ಸಾರ್ವಜನಿಕರ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಈ ದಾಳಿಯ ಬಗ್ಗೆ ಮಾಹಿತಿ ಪಡೆದ ನಂತರ ಮುಂಬೈ ಪೊಲೀಸರು ತನ್ನ ಸಿಬ್ಬಂದಿಯನ್ನು ಸ್ಥಳದಲ್ಲಿಯೇ ನಿಯೋಜಿಸಿದ್ದಾರೆ.

ಇದಕ್ಕೂ ಮುನ್ನ ಶರ್ಮಾ ಅವರನ್ನು ತನಿಖೆಯ ಭಾಗವಾಗಿ ಎನ್‌ಐಎ ದಕ್ಷಿಣ ಮುಂಬೈನ ತನ್ನ ಕಚೇರಿಯಲ್ಲಿ ಎರಡು ದಿನಗಳ ಕಾಲ ಪ್ರಶ್ನಿಸಿತ್ತು.

ಈ ಹಿಂದೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ತಂಡ ಪೊಲೀಸ್ ಅಧಿಕಾರಿಗಳಾದ ಸಚಿನ್ ವಾಜೆ, ರಿಯಾಝುದ್ದೀನ್ ಕಝಿ, ಸುನಿಲ್ ಮಾನೆ, ನಿವೃತ್ತ ಪೊಲೀಸ್ ಕಾನ್‌‌ಸ್ಟೆಬಲ್ ವಿನಾಯಕ್ ಶಿಂಧೆ ಮತ್ತು ಕ್ರಿಕೆಟ್ ಬುಕಿ ನರೇಶ್ ಗೌರ್ ಅವರನ್ನು ಬಂಧಿಸಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ಸಂತೋಷ್ ಸೇಲರ್ ಮತ್ತು ಆನಂದ್ ಜಾಧವ್ ಎಂಬುವವರನ್ನು ಬಂಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.