ಜಮ್ಮು: ಮತ ಗಳಿಸುವ ಸಲುವಾಗಿ ಬಿಜೆಪಿಯು ತಾಲಿಬಾನ್, ಅಫ್ಗಾನಿಸ್ತಾನ ಮತ್ತು ಪಾಕಿಸ್ತಾನದ ವಿಚಾರಗಳಲ್ಲಿ ರಾಜಕಾರಣ ಮಾಡುತ್ತಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತಿ ಭಾನುವಾರ ಹೇಳಿದ್ದಾರೆ.
ಪಿಡಿಪಿಯ ಯುವ ಕಾರ್ಯಕರ್ತರ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಕೇಸರಿ ಪಕ್ಷದ ಏಳು ವರ್ಷಗಳ ಆಡಳಿತದಿಂದ ದೇಶದ ಜನರಿಗೆ ದುಃಖವುಂಟಾಗಿದ್ದು, ಜಮ್ಮು ಮತ್ತು ಕಾಶ್ಮೀರದ ಜನರ ಜೀವನವೇ ನಾಶವಾಗಿದೆ’ ಎಂದು ದೂಷಿಸಿದ್ದಾರೆ.
‘ವಿವಿಧ ರಾಜ್ಯಗಳಲ್ಲಿ ಚುನಾವಣೆಗಳು ಹತ್ತಿರವಾಗುತ್ತಿದ್ದಂತೆಯೇ, ಬಿಜೆಪಿಯು ಮತಗಳಿಕೆಗಾಗಿ ಈಗ ದೇವರೇ ಅವಕಾಶವೊಂದನ್ನು ಕಲ್ಪಿಸಿರುವಂತೆ ತಾಲಿಬಾನ್ ಮತ್ತು ಅಫ್ಗಾನಿಸ್ತಾನದಲ್ಲಿನ ಬೆಳವಣಿಗೆಯನ್ನು ಬಳಸಿಕೊಳ್ಳಲು ಪ್ರಾರಂಭಿಸುತ್ತದೆ. ಒಂದು ವೇಳೆ ಅದು ಕೆಲಸ ಮಾಡದಿದ್ದರೆ, ಪಾಕಿಸ್ತಾನ ಮತ್ತು ಡ್ರೋನ್ಗಳನ್ನು ಮುಂಚೂಣಿಗೆ ತರುತ್ತದೆ’ ಎಂದರು.
‘ರೈತರ ಪ್ರತಿಭಟನೆ, ಹೆಚ್ಚುತ್ತಿರುವ ನಿರುದ್ಯೋಗ, ಹಣದುಬ್ಬರ ಮತ್ತು ದೇಶವು ಎದುರಿಸುತ್ತಿರುವ ಇತರ ಸಮಸ್ಯೆಗಳು ನಮ್ಮ ಚರ್ಚೆಗಳ ಕೇಂದ್ರಬಿಂದುವಾಗಿರಬೇಕು. ಆದರೆ, ಈ ಪ್ರಮುಖ ವಿಷಯಗಳ ಬಗ್ಗೆ ಯಾವುದೇ ಚರ್ಚೆ ಇಲ್ಲ. ಉತ್ತರ ಪ್ರದೇಶದಲ್ಲಿ ಚುನಾವಣೆ ಹತ್ತಿರ ಬರುತ್ತಿರುವುದರಿಂದ, ತಾಲಿಬಾನ್ ಮತ್ತು ಅಫ್ಗಾನಿಸ್ತಾನದ ಬಗ್ಗೆ ಹೆಚ್ಚು ಚರ್ಚೆ ನಡೆಯಲಿದೆ. ಅಲ್ಲಿನ ಮಹಿಳೆಯರ ವಿರುದ್ಧ ತಾಲಿಬಾನ್ ಅಳವಡಿಸಿಕೊಂಡ ದಬ್ಬಾಳಿಕೆಯ ಕ್ರಮಗಳ ಬಗ್ಗೆ ಚರ್ಚೆಗಳಾಗುತ್ತವೆ. ಆದರೆ, ಅತ್ಯಾಚಾರ ಮತ್ತು ವರದಕ್ಷಿಣೆಯ ಸಾವುಗಳನ್ನು ಎದುರಿಸುತ್ತಿರುವ ಭಾರತದ ಮಹಿಳೆಯರ ಬಗ್ಗೆ ಯಾರೂ ಮಾತನಾಡುತ್ತಿಲ್ಲ’ ಎಂದು ಅವರು ದೂರಿದರು.
‘ಜಮ್ಮು ಮತ್ತು ಕಾಶ್ಮೀರವು ಸಂಕಷ್ಟದಲ್ಲಿದೆ ಮತ್ತು ಇಡೀ ದೇಶದಲ್ಲಿನ ಹಿಂದೂಗಳು ಅಪಾಯದಲ್ಲಿದ್ದಾರೆ ಎಂದು ಅವರು (ಬಿಜೆಪಿ) ಹೇಳುತ್ತಾರೆ. ಆದರೆ, ವಾಸ್ತವವಾಗಿ ಬಿಜೆಪಿಯಿಂದ ಭಾರತ ಮತ್ತು ಇಡೀ ಪ್ರಜಾಪ್ರಭುತ್ವವೇ ಅಪಾಯದಲ್ಲಿದೆ’ ಎಂದೂ ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ... ಚರಣ್ಜಿತ್ ಸಿಂಗ್ ಚನ್ನಿ: ಪಂಜಾಬ್ನ ಮೊದಲ ದಲಿತ ಮುಖ್ಯಮಂತ್ರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.