ADVERTISEMENT

ಹಾಸ್ಯ ಕಲಾವಿದರ ವಿರುದ್ಧ ಪ್ರಕರಣ: ಮತ್ತಿಬ್ಬರಿಗೆ ಜಾಮೀನು

ಪಿಟಿಐ
Published 12 ಫೆಬ್ರುವರಿ 2021, 13:12 IST
Last Updated 12 ಫೆಬ್ರುವರಿ 2021, 13:12 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಭೋಪಾಲ್: ಇಂಧೋರ್‌ನಲ್ಲಿ ಆಯೋಜಿಸಿದ್ದ ಹಾಸ್ಯ ಕಾರ್ಯಕ್ರಮವೊಂದರಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಆರೋಪದಡಿ ಬಂಧಿಸಲಾಗಿದ್ದ ಆರೋಪಿಗಳಲ್ಲಿ ಮತ್ತಿಬ್ಬರಿಗೆ ಮಧ್ಯಪ್ರದೇಶ ಹೈಕೋರ್ಟ್‌ ಮಧ್ಯಂತರ ಜಾಮೀನು ನೀಡಿದೆ.

ಇದೇ ಪ್ರಕರಣದಲ್ಲಿ ಬಂಧಿಸಲಾಗಿದ್ದ ಹಾಸ್ಯ ಕಲಾವಿದ ಮುನವಾರ್ ಫಾರೂಕಿ ಅವರಿಗೂ ಇತ್ತೀಚೆಗೆ ಜಾಮೀನು ಮಂಜೂರಾಗಿದೆ.

ನ್ಯಾಯಮೂರ್ತಿ ರೋಹಿತ್ ಆರ್ಯ ಅವರನ್ನೊಳಗೊಂಡ ಹೈಕೋರ್ಟ್‌ನ ಏಕ ಸದಸ್ಯ ಪೀಠ, ಆರೋಪಿಗಳಾದ ಪ್ರಖರ್ ವ್ಯಾಸ್ ಮತ್ತು ಅಡ್ವಿನ್ ಆಂಥೋನಿ ಅವರಿಗೆ ಜಾಮೀನು ನೀಡಿದೆ.

ADVERTISEMENT

ಹೊಸ ವರ್ಷದ ದಿನ ಕಾಮಿಡಿ ಷೋನಲ್ಲಿ ಹಿಂದೂ ದೇವತೆಗಳು ಮತ್ತು ಗೃಹ ಸಚಿವ ಅಮಿತ್‌ ಶಾ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ಆರೋಪದಲ್ಲಿ ಮುನಾವರ್‌ ಮತ್ತು ಇತರ ನಾಲ್ವರ ವಿರುದ್ಧ ಬಿಜೆಪಿ ಶಾಸಕರೊಬ್ಬರ ಮಗ ದೂರು ನೀಡಿದ್ದರು. ಬಳಿಕ ಇವರೆಲ್ಲರನ್ನೂ ಬಂಧಿಸಲಾಗಿತ್ತು.

ಪ್ರಕರಣ ವಜಾಕ್ಕೆ ನೂರಕ್ಕೂ ಹೆಚ್ಚು ಕಲಾವಿದರ ಆಗ್ರಹ:ಮುನವಾರ್ ಫಾರೂಕಿ ಮತ್ತು ಇತರ ನಾಲ್ವರ ವಿರುದ್ಧದ ಎಲ್ಲಾ ಪ್ರಕರಣವನ್ನು ವಜಾಗೊಳಿಸಬೇಕೆಂದು ಅರುಂಧತಿ ರಾಯ್, ಕುನಾಲ್ ಕಾಮ್ರಾ, ಪೂಜಾ ಭಟ್ ಮತ್ತು ಕಲ್ಕಿ ಕೊಚೆಲಿನ್‌ ಸೇರಿದಂತೆ ನೂರಕ್ಕೂ ಹೆಚ್ಚು ಕಲಾವಿದರು ಮತ್ತು ಬರಹಗಾರರು ಒತ್ತಾಯಿಸಿದ್ದಾರೆ.

ಫಾರೂಕಿ, ನಳಿನ್ ಯಾದವ್, ಪ್ರಖರ್ ವ್ಯಾಸ್, ಎಡ್ವಿನ್ ಆಂಥೋನಿ ಮತ್ತು ಸದಕತ್ ಖಾನ್ ವಿರುದ್ಧದ ಎಲ್ಲಾ ಆರೋಪಗಳನ್ನು ಸಂಪೂರ್ಣವಾಗಿ ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ.

‘ದೇಶದಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗುತ್ತಿದೆ ಎಂಬುದಕ್ಕೆ ಫಾರೂಕಿ ಅವರ ಬಂಧನವೇ ನಿದರ್ಶನ. ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಸಮಂಜಸವಾದ ನಿರ್ಬಂಧಗಳಿದ್ದರೂ, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಸಾಂವಿಧಾನಿಕ ಹಕ್ಕಾಗಿದೆ. ಇಂತಹ ವರ್ತನೆಯಿಂದ ದೇಶದ ಕಲಾತ್ಮಕ ಮತ್ತು ಸೃಜನಶೀಲ ಸ್ವಾತಂತ್ರ್ಯಕ್ಕೆ ಹಾನಿಯಾಗಲಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.