ನವದೆಹಲಿ: ಕೇಂದ್ರ ಸರ್ಕಾರದ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರು ತಮ್ಮ ಅಧಿಕೃತ ಕರ್ತವ್ಯದ ಅವಧಿಯ ಬಳಿಕ ರೋಗಿಗಳಿಗೆ ಔಷಧ ನೀಡುವುದು ಅಥವಾ ದೂರವಾಣಿ ಸಮಾಲೋಚನೆ ಒದಗಿಸುವುದಕ್ಕೆ ಪೂರ್ವಾನುಮತಿ ಪಡೆಯುವ ಅಗತ್ಯ ಇಲ್ಲ. ಕೋವಿಡ್–19ರ ಕಾರಣದಿಂದ ವೈದ್ಯರ ಕೊರತೆ ಇದೆ ಮತ್ತು ರೋಗಿಗಳಿಗೆ ವೈದ್ಯರು ಸಿಗುತ್ತಿಲ್ಲ. ಈ ಕಾರಣಕ್ಕೆ ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಈ ಆದೇಶ ಹೊರಡಿಸಿದೆ.
ಸಾಂಕ್ರಾಮಿಕದ ಈ ಅವಧಿಯಲ್ಲಿ ಕೇಂದ್ರ ಸರ್ಕಾರದ ಸಂಸ್ಥೆಗಳಲ್ಲಿ ಕೆಲಸ ಮಾಡುವ ವೈದ್ಯರು ಅವರ ಕೆಲಸದ ಅವಧಿಯ ಬಳಿಕವೂ ಸಮಾಲೋಚನೆಗೆ ಅವಕಾಶ ಕೊಡಬೇಕು ಎಂಬ ಬೇಡಿಕೆ ವ್ಯಕ್ತವಾಗಿತ್ತು.
ಆದರೆ, ಈ ಸೇವೆಗಳಿಗೆ ವೈದ್ಯರು ಶುಲ್ಕ ಪಡೆಯುವಂತಿಲ್ಲ. ಪೂರ್ಣವಾಗಿ ಇದು ಸೇವೆಯ ರೂಪದಲ್ಲಿಯೇ ಇರಬೇಕು ಎಂದು ಆದೇಶವು ಸ್ಪಷ್ಟಪಡಿಸಿದೆ.
ಹೀಗೆ ಒದಗಿಸಿದ ಸೇವೆಯ ಬಗ್ಗೆ ತಮ್ಮ ಇಲಾಖೆಗೆ ವೈದ್ಯರು ಮಾಹಿತಿ ನೀಡುವುದು ಉತ್ತಮ. ಇದು ದಾಖಲಾತಿ ನಿರ್ವಹಣೆಯ ಉದ್ದೇಶಕ್ಕಾಗಿ ಮಾತ್ರ ಎಂದು ಆದೇಶದಲ್ಲಿ ಹೇಳಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.