ADVERTISEMENT

‘ಬಂಗಾಳದ ತಾಲಿಬಾನೀಕರಣ’ ವಿರುದ್ಧ ಹೋರಾಡುತ್ತೇವೆ: ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ್

ಪಿಟಿಐ
Published 21 ಸೆಪ್ಟೆಂಬರ್ 2021, 10:30 IST
Last Updated 21 ಸೆಪ್ಟೆಂಬರ್ 2021, 10:30 IST
ಸುಖಾಂತ್ ಮುಜುಮ್ದಾರ್‌ ಚಿತ್ರ: @Shantanu_bjp ಟ್ವಿಟರ್ ಖಾತೆ
ಸುಖಾಂತ್ ಮುಜುಮ್ದಾರ್‌ ಚಿತ್ರ: @Shantanu_bjp ಟ್ವಿಟರ್ ಖಾತೆ   

ಕೋಲ್ಕತ್ತಾ: ‘ರಾಜ್ಯದಲ್ಲಿರುವ ತಾಲಿಬಾನೀಕರಣ'ವನ್ನು ತೊಡೆದು ಹಾಕುವುದಾಗಿ ಮಂಗಳವಾರ ಪ್ರತಿಜ್ಞೆ ಮಾಡಿದ ಪಶ್ಚಿಮ ಬಂಗಾಳದ ನೂತನ ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮುಜಂದಾರ್‌, ಈವರೆಗೆ ಆಗಿರುವ ತಪ್ಪುಗಳನ್ನು ಪಕ್ಷವು ಸರಿಪಡಿಸಿಕೊಳ್ಳಲಿದೆ ಮತ್ತು ಮುಂದೆ ವಿಜಯದ ದಿನಗಳು ಮರುಕಳಿಸಲಿವೆ‘ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ರಾಜ್ಯಾಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ‘ರಾಜ್ಯ ಬಿಜೆಪಿಯೊಳಗೆ ಸರಣಿಯಾಗಿ ನಡೆಯುತ್ತಿರುವ ಪಕ್ಷಾಂತರದ ಬಗ್ಗೆ ಹೆಚ್ಚು ತಲೆಕೆಡೆಸಿಕೊಳ್ಳುವುದಿಲ್ಲ. ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿರುವವರು ಎಂದೂ ಪಕ್ಷವನ್ನು ತೊರೆಯಲು ಸಾಧ್ಯವಿಲ್ಲ‘ ಎಂದು ಸ್ಪಷ್ಟವಾಗಿ ಹೇಳಿದರು.

‘ರಾಜ್ಯದಲ್ಲಿ ನಡೆಯುತ್ತಿರುವ ತಾಲಿಬಾನೀಕರಣದ ವಿರುದ್ಧ ಪಕ್ಷದ ಹಿಂದಿನ ರಾಜ್ಯಘಟಕದ ಅಧ್ಯಕ್ಷರು ಮತ್ತು ಪಕ್ಷದ ನಾಯಕರ ಸಹಕಾರದೊಂದಿಗೆ ಹೋರಾಟ ಮುಂದುವರಿಸುತ್ತೇನೆ‘ ಎಂದರು.

ADVERTISEMENT

‘ಬಿಜೆಪಿಯವರಿಗೆ ಕಾರ್ಯಕರ್ತರೇ ನಿಜವಾದ ಆಸ್ತಿ. ನಾವೇನಾದರೂ ತಪ್ಪು ಮಾಡಿದರೆ, ನಾವೇ ಅದನ್ನು ಸರಿಪಡಿಸಿಕೊಳ್ಳುತ್ತೇವೆ‘ ಎಂದು ಸುಕಾಂತ ಹೇಳಿದರು.

‘ಪಕ್ಷವನ್ನು ತೊರೆಯುವ ಮೂಲಕ ಪಕ್ಷಕ್ಕೆ ಹಾನಿ ಮಾಡಬಹುದು ಎಂದು ಯಾರಾದರೂ ಯೋಚಿಸುತ್ತಿದ್ದರೆ, ಅದು ಖಂಡಿತಾ ತಪ್ಪು. ಬಿಜೆಪಿಯಲ್ಲಿ ಅಂಥದ್ದು ಸಂಭವಿಸುವುದಿಲ್ಲ. ಸಿದ್ಧಾಂತಕ್ಕೆ ಬದ್ಧರಾಗಿರುವವರು ಪಕ್ಷವನ್ನು ತೊರೆಯಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಪಕ್ಷ ವಿಜಯಶಾಲಿಯಾಗಲಿದೆ‘ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದೊಳಗಿನ ಆಂತರಿಕ ಸಂಘರ್ಷ ಮತ್ತು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪ‍ಕ್ಷದೊಂದಿಗಿನ ಜಟಾಪಟಿಯ ನಡುವೆ ಬಿಜೆಪಿ, ಸೋಮವಾರ ಪಶ್ಚಿಮ ಬಂಗಾಳ ಘಟಕದ ಅಧ್ಯಕ್ಷರಾಗಿದ್ದ ದೀಪಕ್ ಘೋಷ್ ಅವರನ್ನು ಬದಲಿಸಿ, ಆ ಜಾಗಕ್ಕೆ ಸಂಸದ ಸುಕಾಂತ ಮುಜಂದಾರ್‌ ಅವರನ್ನು ನೇಮಿಸಿದೆ. ದಿಲೀಪ್ ಘೋಷ್ ಅವರನ್ನು ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.