ADVERTISEMENT

ತನಿಖಾ ಸಂಸ್ಥೆಗಳ ದುರ್ಬಳಕೆ: ಶಿವಸೇನೆ ಸಂಸದ ಸಂಜಯ್ ರಾವುತ್ ಕಟುಟೀಕೆ

ಪಿಟಿಐ
Published 17 ಅಕ್ಟೋಬರ್ 2021, 11:37 IST
Last Updated 17 ಅಕ್ಟೋಬರ್ 2021, 11:37 IST
ಸಂಜಯ್‌ ರಾವುತ್
ಸಂಜಯ್‌ ರಾವುತ್   

ಮುಂಬೈ (ಪಿಟಿಐ): ತನಿಖಾ ಸಂಸ್ಥೆಗಳ ದುರ್ಬಳಕೆ ಕುರಿತಂತೆ ಬಿಜೆಪಿ, ಕೇಂದ್ರ ಸರ್ಕಾರದ ವಾಗ್ದಾಳಿ ನಡೆಸಿರುವ ಶಿವಸೇನೆ ಸಂಸದ ಸಂಜಯ್‌ ರಾವುತ್, ಮಹಾರಾಷ್ಟ್ರದಲ್ಲಿ ರಾಜಕೀಯ ವಿರೋಧಿಗಳ ಹಣಿಯುವಲ್ಲಿ ‘ಗುತ್ತಿಗೆ ಕೊಲೆಗಳ’ ಸ್ಥಾನವನ್ನು ‘ಸರ್ಕಾರಿ ಕೊಲೆಗಳು’ ಆವರಿಸಿವೆ ಎಂದು ಟೀಕಿಸಿದ್ದಾರೆ.

ಮಹಾರಾಷ್ಟ್ರದ ಮೈತ್ರಿ ಸರ್ಕಾರದ ಕೆಲ ಸಚಿವರ ಮೇಲೆ ಈಗ ಜಾರಿ ನಿರ್ದೇಶನಾಲಯ (ಇ.ಡಿ), ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ. ಕೇಂದ್ರ ತನಿಖಾ ಸಂಸ್ಥೆಗಳು, ‘ಅಧಿಕಾರದಲ್ಲಿರುವ ಪಕ್ಷದ ಪರವಾಗಿ ಗುತ್ತಿಗೆ ಕೊಲೆಗಾರರಂತೆ ಕಾರ್ಯನಿರ್ವಹಿಸುತ್ತಿವೆ’ ಎಂದು ರಾವುತ್‌ ಟೀಕಿಸಿದರು.

ಮಹಾರಾಷ್ಟ್ರದಲ್ಲಿ ದಾಳಿಯನ್ನು ನಡೆಸುವುದರ ಸಂಬಂಧ ಏನಾದರೂ ಕಾನೂನು ಇದೆಯೇ? ದಾಖಲೆ ಸಂಖ್ಯೆಯಲ್ಲಿ ದಾಳಿಗಳು ನಡೆದಾಗ ಇಂಥ ಪ್ರಶ್ನೆ ಉದ್ಭವಿಸಲಿದೆ ಎಂದು ಅವರು ಕಾರ್ಯನಿರ್ವಾಹಕ ಸಂಪಾದಕರಾಗಿರುವ, ಶಿವಸೇನೆ ಮುಖವಾಣಿ‘ಸಾಮ್ನಾ’ದ ರೋಖ್‌ತೋಕ್‌ ಅಂಕಣದಲ್ಲಿ ಪ್ರಶ್ನಿಸಿದ್ದಾರೆ.

ADVERTISEMENT

ಈ ಹಿಂದೆ ದೆಹಲಿಯಲ್ಲಿ ಆಡಳಿತ ನಡೆಸುತ್ತಿರುವವರು ಸುಳ್ಳು ಹೇಳುತ್ತಿದ್ದರು. ಈಗ ದಾಳಿ ನಡೆಸುವುದು ಯಾವುದೇ ಬಂಡವಾಳ ಹೂಡಲಾಗದ ಹೊಸ ಉದ್ಯಮವಾಗಿದೆ. ಹಿಂದೆ ಭೂಗತದೊರೆಗಳು ಮಹಾರಾಷ್ಟ್ರದಲ್ಲಿ ಸಕ್ರಿಯರಾಗಿದ್ದಾಗ ಒಪ್ಪಂದದ ಕೊಲೆಗಳು ಆಗುತ್ತಿದ್ದವು. ಈಗ ಆ ಸ್ಥಾನವನ್ನು ಸರ್ಕಾರಿ ಕೊಲೆಗಳು ಆವರಿಸಿವೆ. ಕೇಂದ್ರ ತನಿಖಾ ಸಂಸ್ಥೆಗಳೇ ಗುತ್ತಿಗೆ ಕೊಲೆಗಾರರಂತೆ ಕಾರ್ಯನಿರ್ವಹಿಸುತ್ತಿವೆ ಎಂದು ಬರೆದಿದ್ದಾರೆ.

ರಾಜಕೀಯ ವಿರೋಧಿಗಳನ್ನು ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ನಿರ್ಮೂಲನೆ ಮಾಡಲು ಹೊಸ ನೀತಿಯಾಗಿದೆ ಎಂದು ಟೀಕಿಸಿದರು.

ಸಚಿವ ನವಾಬ್‌ ಮಲ್ಲಿಕ್‌ ಮತ್ತು ಅವರ ಪುತ್ರನ ಬಂಧನ ಉಲ್ಲೇಖಿಸಿದ ಅವರು, ಡ್ರಗ್ಸ್ ಹಗರಣದಲ್ಲಿ ಪಾತ್ರವಿರುವ ಆರೋಪದಡಿ ಎನ್‌ಸಿಬಿ ಇವರನ್ನು ಬಂಧಿಸಿದ್ದು, ಎಂಟು ತಿಂಗಳು ಜೈಲಿನಲ್ಲಿದ್ದರು. ಈಗ ಕೋರ್ಟ್ ಜಾಮೀನು ನೀಡಿದ್ದು, ಅವರ ಮನೆಯಲ್ಲಿ ಪತ್ತೆಯಾಗಿದ್ದು ಡ್ರಗ್ಸ್ ಅಲ್ಲ ಎಂದು ಹೇಳಿದೆ. ಈಗ ಮಲ್ಲಿಕ್‌ ಅವರೇ ಎನ್‌ಸಿಬಿ ಅಧಿಕಾರಿಗಳ ವಿರುದ್ಧ ಮೊಕದ್ದಮೆ ಹೂಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.