ADVERTISEMENT

‘ವಶಪಡಿಸಿಕೊಂಡ ವಸ್ತುಗಳ ಮಾಹಿತಿ ಗೋಪ್ಯತೆಗೆ ಐ.ಟಿ ಇಲಾಖೆ ಬದ್ಧ’

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 15:13 IST
Last Updated 21 ಸೆಪ್ಟೆಂಬರ್ 2021, 15:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ (ಪಿಟಿಐ): ನ್ಯೂಸ್‌ ಪೋರ್ಟಲ್ ನ್ಯೂಸ್‌ಲಾಂಡ್ರಿಯ ಜಾಗಗಳಲ್ಲಿ ದಾಳಿ ನಡೆಸಿದಾಗ ವಶಪಡಿಸಿಕೊಂಡ ವಸ್ತುಗಳಲ್ಲಿನ ಮಾಹಿತಿ ಗೋಪ್ಯತೆ ಕಾಪಾಡಲು ಆದಾಯ ತೆರಿಗೆ ಇಲಾಖೆಯು ನೀಡಿರುವ ಆಶ್ವಾಸನೆಗೆ ಬದ್ಧವಾಗಿದೆ ಎಂದು ದೆಹಲಿ ಹೈಕೋರ್ಟ್ ಮಂಗಳವಾರ ಹೇಳಿದೆ.

ನ್ಯೂಸ್ ಪೋರ್ಟಲ್ ಮತ್ತು ಅದರ ಸಹ-ಸಂಸ್ಥಾಪಕ ಅಭಿನಂದನ್ ಸೆಖ್ರಿ ಅವರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಅಗತ್ಯವಿದ್ದಲ್ಲಿ, ದಾಳಿಗೆ ಸಂಬಂಧಿಸಿದ ಕುಂದುಕೊರತೆಗಳನ್ನು ಮುಂದಿನ ಹಂತದಲ್ಲಿ ಆಲಿಸಲಾಗುವುದು ಮತ್ತು ಕಾರ್ಯಾಚರಣೆಯನ್ನು ಅರ್ಜಿದಾರರು ಪ್ರಶ್ನಿಸಬಹುದು ಎಂದು ಕೋರ್ಟ್‌ ಹೇಳಿದೆ.

ಐ.ಟಿ ಅಧಿಕಾರಿಗಳು ವಶಪಡಿಸಿಕೊಂಡ ವಸ್ತುಗಳನ್ನು ಕಾನೂನಿಗೆ ಅನುಸಾರವಾಗಿ ಮಾತ್ರ ಬಳಸಲಾಗುವುದು. ಇವುಗಳನ್ನು ಇತರ ಸರ್ಕಾರಿ ಇಲಾಖೆಗಳೊಂದಿಗೆ ಹಂಚಿಕೊಳ್ಳಬಹುದು ಆದರೆ, ಮೂರನೇ ವ್ಯಕ್ತಿಗಳಿಗೆ ಸೋರಿಕೆಯಾಗುವುದಿಲ್ಲ ಎಂದು ಐ.ಟಿ ಇಲಾಖೆಯ ಪರ ವಕೀಲರುನ್ಯಾಯಮೂರ್ತಿಗಳಾದ ಮನಮೋಹನ್ ಮತ್ತು ನವೀನ್ ಚಾವ್ಲಾ ಅವರನ್ನು ಒಳಗೊಂಡ ನ್ಯಾಯಪೀಠಕ್ಕೆ ಭರವಸೆ ನೀಡಿದರು.

ADVERTISEMENT

ವಶಪಡಿಸಿಕೊಂಡ ವಸ್ತುಗಳು ಆದಾಯ ತೆರಿಗೆ ಇಲಾಖೆಯ ಸುಪರ್ದಿಯಲ್ಲಿವೆ. ವಶಪಡಿಸಿಕೊಂಡ ವಸ್ತುಗಳ ಮಾಹಿತಿಯನ್ನು ಸೋರಿಕೆ ಮಾಡಬಾರದು. ಅಂತಹ ವಸ್ತುಗಳನ್ನು ಸೋರಿಕೆ ಮಾಡುವುದು ಕಾನೂನುಬಾಹಿರ ಎಂದು ವಕೀಲ ಅಜಿತ್ ಶರ್ಮಾ ಇಲಾಖೆಯ ಪರವಾಗಿ ಹೇಳಿದರು. ‘ವಕೀಲರ ಹೇಳಿಕೆಯನ್ನು ನ್ಯಾಯಾಲಯವು ಸ್ವೀಕರಿಸಲಿದೆ. ಪ್ರತಿವಾದಿಯು ಅದಕ್ಕೆ ಬದ್ಧನಾಗಿರುತ್ತಾನೆ’ ಎಂದು ನ್ಯಾಯಾಲಯವು ದಾಖಲಿಸಿಕೊಂಡಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ ಹಿರಿಯ ವಕೀಲ ಸಿದ್ಧಾರ್ಥ ದವೆ, ವೈಯಕ್ತಿಕ ದತ್ತಾಂಶವನ್ನು (ಡೇಟಾ) ತೆಗೆದುಕೊಳ್ಳುವ ಮೊದಲು ಡಿಲೀಟ್ ಮಾಡಲು ಇಲಾಖೆಯು ಅವಕಾಶ ನೀಡಿದ್ದರೆ, ಮಾಹಿತಿ ಸೋರಿಕೆಯ ಆತಂಕ ಉದ್ಭವಿಸುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಸೆ.10 ರಂದು ಸುದ್ದಿ ಪೋರ್ಟಲ್ ಜಾಗಗಳಲ್ಲಿ ಐ.ಟಿ ದಾಳಿ ನಡೆಸಿದ್ದು, ಸಹ-ಸಂಸ್ಥಾಪಕರಿಗೆ ಸೇರಿದ ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್ ಸೇರಿ ಹಲವು ವಸ್ತುಗಳನ್ನು ಐ.ಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.