ತಿರುವನಂತಪುರ: ಕೇರಳದಲ್ಲಿ ಕೊರೊನಾ ಪ್ರಸರಣವನ್ನು ತಡೆಯಲು ನಿರ್ಬಂಧಗಳನ್ನು ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ಜನರು ‘ಬಲಿ ತರ್ಪಣಂ’ ವಿಧಿಯನ್ನು ಭಾನುವಾರ ಮನೆಯಲ್ಲೇ ಆಚರಿಸಿದರು.
ಪೂರ್ವಜರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ‘ಕರ್ಕೀಡಕ ವಾವು’ ದಿನದಂದು ‘ಬಲಿ ತರ್ಪಣಂ’ ವಿಧಿಯನ್ನು ನೆರವೇರಿಸಲಾಗುತ್ತದೆ. ಈ ವಿಧಿಯನ್ನು ಸಾಮಾನ್ಯವಾಗಿ ಸಮುದ್ರ ಅಥವಾ ನದಿ ತೀರದಲ್ಲಿ ಆಚರಿಸಲಾಗುತ್ತದೆ.
ಕೇರಳದ ಎರ್ನಾಕುಲಂ ಜಿಲ್ಲೆಯ ಪೆರಿಯಾರ್ ನದಿಯ ದಂಡೆಯಲ್ಲಿರುವ ಆಲುವದಲ್ಲಿರುವ 'ಶಿವರಾತ್ರಿ ಮಣಪ್ಪುರಂ' ಮತ್ತು ತಿರುವಲ್ಲಂ ಪರಶುರಾಮ ದೇವಸ್ಥಾನ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಈ ವಿಧಿಯನ್ನು ನೆರವೇರಿಸಲಾಗುತ್ತದೆ. ಆದರೆ ಈ ಬಾರಿ ಕೋವಿಡ್ ನಿರ್ಬಂಧಗಳಿಂದಾಗಿ ದೇವಸ್ಥಾನಗಳು ನಿರ್ಜನವಾಗಿದ್ದವು.
ಈ ‘ಕರ್ಕೀಡಕ ವಾವು’ ನಿಮಿತ್ತ ಲಾಕ್ಡೌನ್ ನಿಯಮಗಳನ್ನು ಸಡಿಲಗೊಳಿಸುವಂತೆ ಬಿಜೆಪಿಯು ಕೇರಳ ಸರ್ಕಾರವನ್ನು ಒತ್ತಾಯಿಸಿತ್ತು. ಆದರೆ ಇತ್ತೀಚೆಗೆ ಆರು ದಿನಗಳ ಕಾಲ ಲಾಕ್ಡೌನ್ ನಿಯಮಗಳನ್ನು ಸಡಿಲಗೊಳಿಸಿ ಅಂಗಡಿ ಮುಗ್ಗಟ್ಟುಗಳನ್ನು ತೆರೆಯಲು ಅವಕಾಶ ನೀಡಲಾಗಿತ್ತು. ಹಾಗಾಗಿ ಭಾನುವಾರ ಲಾಕ್ಡೌನ್ ನಿಯಮಗಳನ್ನು ಮುಂದುವರಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.