ADVERTISEMENT

ಮಹಾರಾಷ್ಟ್ರದಲ್ಲಿ ಜನವರಿ 26 ರಿಂದ ‘ಜೈಲು ಪ್ರವಾಸೋದ್ಯಮ’ ಪ್ರಾರಂಭ

ಪಿಟಿಐ
Published 23 ಜನವರಿ 2021, 10:37 IST
Last Updated 23 ಜನವರಿ 2021, 10:37 IST
ಅನಿಲ್‌ ದೇಶ್‌ಮುಖ್
ಅನಿಲ್‌ ದೇಶ್‌ಮುಖ್   

ನಾಗ್ಪುರ: ಮಹಾರಾಷ್ಟ್ರ ಸರ್ಕಾರವು ಜನವರಿ 26ರಿಂದ ‘ಜೈಲು ಪ್ರವಾಸೋದ್ಯಮ’ ಆರಂಭಿಸಲಿದೆ.

‘ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಮತ್ತು ಉಪ ಮುಖ್ಯಮಂತ್ರಿ ಅಜಿತ್‌ ಪವಾರ್ ಅವರು ಗಣರಾಜ್ಯೋತ್ಸವ ದಿನದಂದು ಯೆರವಾಡ ಕೇಂದ್ರೀಯ ಕಾರಾಗೃಹದಲ್ಲಿ ಜೈಲು ಪ್ರವಾಸೋದ್ಯಮಕ್ಕೆ ಚಾಲನೆ ನೀಡಲಿದ್ದಾರೆ’ ಎಂದು ಮಹಾರಾಷ್ಟ್ರದ ಗೃಹ ಸಚಿವ ಅನಿಲ್‌ ದೇಶ್‌ಮುಖ್ ಅವರು ಸುದ್ದಿಗೋಷ್ಠಿಯಲ್ಲಿ ಶನಿವಾರ ತಿಳಿಸಿದರು.

‘ದೇಶದಲ್ಲಿ ಇದೇ ಮೊದಲ ಬಾರಿ ಈ ರೀತಿಯ ಕಾರ್ಯಕ್ರಮವನ್ನು ಕೈಗೊಳ್ಳಲಾಗಿದೆ. ಮೊದಲ ಹಂತದಲ್ಲಿ ಶಾಲೆ ಮತ್ತು ಕಾಲೇಜಿನ ವಿದ್ಯಾರ್ಥಿಗಳಿಗೆ ಐತಿಹಾಸಿಕ ಕಾರಾಗೃಹದ ಒಳಗೆ ಪ್ರವೇಶಿಸಲು ಅವಕಾಶ ನೀಡಲಾಗುವುದು’ ಎಂದು ಅವರು ಮಾಹಿತಿ ನೀಡಿದರು.

‘ಬ್ರಿಟಿಷರ ಆಡಳಿತದ ವೇಳೆ ಮಹಾತ್ಮಾ ಗಾಂಧೀಜಿ, ಲೋಕಮಾನ್ಯ ಬಾಲಗಂಗಾಧರ ತಿಲಕ್, ಮೋತಿಲಾಲ್‌ ನೆಹರು, ಪಂಡಿತ್‌ ಜವಾಹರಲಾಲ್‌ ನೆಹರು, ಸರ್ದಾರ್‌ ವಲ್ಲಭಭಾಯಿ ಪಟೇಲ್‌, ಸರೋಜಿನಿ ನಾಯ್ಡು, ಸುಭಾಷ್‌ ಚಂದ್ರ ಬೋಸ್‌ ಸೇರಿದಂತೆ ಹಲವು ಸ್ವಾತಂತ್ರ್ಯ ಹೋರಾಟಗಾರರನ್ನು ಯೆರವಾಡ ಜೈಲಿನಲ್ಲಿ ಬಂಧಿಸಿ ಇಡಲಾಗಿತ್ತು. ಇಲ್ಲಿ ಸ್ವಾತಂತ್ರ್ಯ ಹೋರಾಟಗಾರರ ನೆನಪುಗಳನ್ನು ಸಂರಕ್ಷಿಸಲಾಗಿದೆ’ ಎಂದು ಅವರು ತಿಳಿಸಿದರು.

ADVERTISEMENT

‘ಜೈಲು ಪ್ರವೇಶಕ್ಕೆ ಟಿಕೆಟ್‌ ಶುಲ್ಕ ₹5 ರಿಂದ ₹50 ಇರಲಿದೆ. ಅಲ್ಲದೆ ಪ್ರವಾಸಿಗರಿಗೆ ಮಾರ್ಗದರ್ಶಿಗಳನ್ನು ಕೂಡ ನೀಡಲಾಗುತ್ತದೆ. ಸದ್ಯ ಕೊರೊನಾ ಸೋಂಕಿನಿಂದಾಗಿ ಪ್ರತಿನಿತ್ಯ ಕೇವಲ 50 ಜನರನ್ನು ಮಾತ್ರ ಕಾರಾಗೃಹದೊಳಗೆ ಬಿಡಲಾಗುವುದು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.