ಲಖನೌ: 'ಬೇರೆ ಬೇರೆ ಪಕ್ಷಗಳಲ್ಲಿ ನಿಷ್ಕ್ರಿಯವಾಗಿರುವ ಮತ್ತು ಉಚ್ಚಾಟನೆಯಾಗಿರುವ ನಾಯಕರನ್ನುಸಮಾಜವಾದಿ ಪಕ್ಷದವರು ಸೇರಿಸಿಕೊಳ್ಳುತ್ತಿದ್ದಾರೆ' ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರು ಎಸ್ಪಿ ಮುಖಂಡ ಅಖಿಲೇಶ್ ಯಾದವ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಳೆದ ವರ್ಷ ಬಹುಜನ ಸಮಾಜವಾದಿ ಪಕ್ಷ ಅಮಾನತುಗೊಳಿಸಿದ ಐವರು ಶಾಸಕರು ಮಂಗಳವಾರ ಸಮಾಜವಾದಿ ಪಕ್ಷದ ಮುಖಂಡರನ್ನು ಭೇಟಿಯಾಗಿದ್ದು, ಅವರೆಲ್ಲರೂ ಆ ಪಕ್ಷಕ್ಕೆ ಸೇರಬಹುದು ಎಂಬ ಊಹಾಪೋಹದ ಸುದ್ದಿಗೆ ಸಂಬಂಧಿಸಿದಂತೆ ಮಾಯಾವತಿ ಹೀಗೆ ವಾಗ್ದಾಳಿ ನಡೆಸಿದ್ದಾರೆ.
ಹಿಂದಿಯಲ್ಲಿ ಟ್ವೀಟ್ ಮಾಡಿರುವ ಮಾಯಾವತಿ, ‘ಸಮಾಜವಾದಿ ಪಕ್ಷದ ಸ್ಥಿತಿ ತುಂಬಾ ಹದಗೆಟ್ಟಿದೆ. ಆ ಪಕ್ಷದವರು ಪ್ರತಿದಿನ ಮಾಧ್ಯಮಗಳಲ್ಲಿ ಸುದ್ದಿಯಲ್ಲಿರಲು ಬಯಸುತ್ತಾರೆ. ಅದಕ್ಕಾಗಿ ಮಾಜಿ ಶಾಸಕರು ಮತ್ತು ಇತರ ಪಕ್ಷಗಳಿಂದ ಹೊರ ಹಾಕಲ್ಪಟ್ಟ ಸಣ್ಣ ಪುಟ್ಟ ಕಾರ್ಯಕರ್ತರು ಅಥವಾ ತಮ್ಮ ಪಕ್ಷದಲ್ಲೇ ನಿಷ್ಕ್ರಿಯರಾಗಿರುವ ನಾಯಕರನ್ನು ಆಗಾಗ್ಗೆ ಎಸ್ಪಿ ಮುಖ್ಯಸ್ಥರ ನೇತೃತ್ವದಲ್ಲೇ ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಸದಾ ಸುದ್ದಿಯಲ್ಲಿರಲು ಪ್ರಯತ್ನಿಸುತ್ತಾರೆ' ಎಂದು ಟೀಕಿಸಿದ್ದಾರೆ.
‘ಸಮಾಜವಾದಿ ಪಕ್ಷದ ಮುಖಂಡರಿಗೆ, ಸ್ಥಳೀಯ ನಾಯಕರ ಮೇಲೆ ನಂಬಿಕೆ ಇಲ್ಲ' ಎಂದು ಆರೋಪಿಸಿರುವ ಮಾಯಾವತಿ, ‘ನಮ್ಮ ಪಕ್ಷಕ್ಕೆ ಸರಿಯಾದ ನಾಯಕರನ್ನು ಮಾತ್ರ ಸೇರಿಸಿಕೊಳ್ಳುತ್ತೇವೆ‘ ಎಂದು ಪ್ರತಿಪಾದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.