ADVERTISEMENT

ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ: ಎಸ್‌.ನಟರಾಜ್‌ ಬೂದಾಳು ಕೃತಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2021, 12:52 IST
Last Updated 20 ಸೆಪ್ಟೆಂಬರ್ 2021, 12:52 IST
ಸಂಶೋಧಕ ಎಸ್.ನಟರಾಜ ಬೂದಾಳು
ಸಂಶೋಧಕ ಎಸ್.ನಟರಾಜ ಬೂದಾಳು   

ನವದೆಹಲಿ: ಕೇಂದ್ರ ಸಾಹಿತ್ಯ ಅಕಾಡೆಮಿಯು ಅನುವಾದಿತ ಕೃತಿಗೆ ನೀಡಲಾಗುವ 2020ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಚಿಂತಕ, ಸಂಶೋಧಕ ಎಸ್.ನಟರಾಜ ಬೂದಾಳು ಅವರ ‘ಸರಹಪಾದ’ ಕೃತಿ ಕನ್ನಡ ವಿಭಾಗದಿಂದ ಆಯ್ಕೆಯಾಗಿದೆ.

ನಿವೃತ್ತ ಪ್ರಾಧ್ಯಾಪಕರಾಗಿರುವ ನಟರಾಜ್‌ ಬೂದಾಳು ಅವರು, ಸಿದ್ಧ ಪರಂಪರೆಯ ಪ್ರಮುಖರಲ್ಲಿ ಒಬ್ಬರಾದ ಸರಹಪಾದನ ದೋಹೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಚಂದ್ರಕಾಂತ ಪೋಕಳೆ, ಲಕ್ಷ್ಮೀ ಚಂದ್ರಶೇಖರ್ ಹಾಗೂ ಓ.ಎಲ್‌. ನಾಗಭೂಷಣ ಸ್ವಾಮಿ ಅವರು ಕನ್ನಡ ವಿಭಾಗದ ತೀರ್ಪುಗಾರರಾಗಿದ್ದರು.

ADVERTISEMENT

ಕಂಬಾರ, ಪೈ ಕೃತಿಗಳಿಗೂ ಪ್ರಶಸ್ತಿ: ಅಕಾಡೆಮಿಯ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಅವರ ‘ಶಿಖರ ಸೂರ್ಯ’ ಕೃತಿಯ ಮಲಯಾಳಂ ಅನುವಾದ ‘ಶಿಖರಸೂರ್ಯನ್‌’ (ಲೇಖಕ: ಸುಧಾಕರನ್‌ ರಾಮಂಥಲಿ) ಪ್ರಶಸ್ತಿಗೆ ಆಯ್ಕಯಾಗಿದೆ.

ಇಂಗ್ಲಿಷ್‌ಗೆ ಅನುವಾದವಾಗಿರುವ ಕನ್ನಡದ ವಿವೇಕ್‌ ಶಾನಭಾಗ್‌ ಅವರ ‘ಘಾಚಾರ್‌ ಘೋಚಾರ್‌’ (ಲೇಖಕ: ಶ್ರೀನಾಥ ಪೆರೂರ್‌) ಹಾಗೂ ಕೊಂಕಣಿಗೆ ಅನುವಾದವಾಗಿರುವ ಗೋಪಾಲಕೃಷ್ಣ ಪೈ ಅವರ ‘ಸ್ವಪ್ನ ಸಾರಸ್ವತ’ (ಲೇಖಕಿ ಜಯಶ್ರೀ ಶಾನಭಾಗ್‌), ತೆಲುಗಿಗೆ ಅನುವಾದಗೊಂಡಿರುವ ಶಾಂತಿನಾಥ ದೇಸಾಯಿ ಅವರ ‘ಓಂ ಣಮೋ’ (ಲೇಖಕ: ರಂಗನಾಥ ರಾಮಚಂದ್ರರಾವ್‌) ಪುರಸ್ಕಾರಕ್ಕೆ ಆಯ್ಕೆಯಾದ ಕನ್ನಡ ಮೂಲದ ಕೃತಿಗಳಾಗಿವೆ.

ಭಾರತದ ಒಟ್ಟು 24 ಭಾಷೆಗಳ ಅನುವಾದಿತ ಕೃತಿಗಳು ಪ್ರಶಸ್ತಿಗೆ ಆಯ್ಕೆಯಾಗಿದ್ದು, ₹ 50,000 ನಗದು ಹಾಗೂ ತಾಮ್ರಪತ್ರವನ್ನು ಒಳಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.