ADVERTISEMENT

ಮೋದಿ ಭೇಟಿ ವೇಳೆ ನಮ್ಮ ಆತಂಕದ ಬಗ್ಗೆ ಗಮನಹರಿಸಿ: ಬೈಡನ್‌ಗೆ ಟಿಕಾಯತ್‌ ಮನವಿ 

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಸೆಪ್ಟೆಂಬರ್ 2021, 11:47 IST
Last Updated 24 ಸೆಪ್ಟೆಂಬರ್ 2021, 11:47 IST
ಅಮೆರಿಕ ಅಧ್ಯಕ್ಷ ಜೋ ಬೈಡನ್‌, ಭಾರತದ ಪ್ರಧಾನಿ ನರೇಂದ್ರ ಮೋದಿ, ರೈತ ನಾಯಕ ರಾಕೇಶ್ ಟಿಕಾಯತ್
ಅಮೆರಿಕ ಅಧ್ಯಕ್ಷ ಜೋ ಬೈಡನ್‌, ಭಾರತದ ಪ್ರಧಾನಿ ನರೇಂದ್ರ ಮೋದಿ, ರೈತ ನಾಯಕ ರಾಕೇಶ್ ಟಿಕಾಯತ್   

ನವದೆಹಲಿ: ಕೇಂದ್ರದ ಎನ್‌ಡಿಎಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳಿಗೆ ಸಂಬಂಧಿಸಿದಂತೆ ನಮಗಿರುವ ಆತಂಕಕಗಳ ಬಗ್ಗೆ ಮೋದಿ ಅವರ ಭೇಟಿ ವೇಳೆ ಗಮನಹರಿಸಿ ಎಂದು ರೈತ ಹೋರಾಟಗಾರ, ‌ಭಾರತೀಯ ಕಿಸಾನ್ ಯೂನಿಯನ್(ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಅವರು ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಅವರಿಗೆ ಶುಕ್ರವಾರ ಮನವಿ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಐದು ದಿನಗಳ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. ಅಮೆರಿಕ ಅಧ್ಯಕ್ಷ ಬೈಡನ್ ಮತ್ತು ಮೋದಿ ಅವರ ಭೇಟಿಯು ಶುಕ್ರವಾರ ವೈಟ್ ಹೌಸ್‌ನಲ್ಲಿ ನಿಗದಿಯಾಗಿದೆ. ಇದಕ್ಕೂ ಮೊದಲು ಅವರು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು.

ಇದೇ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿರುವ ಟಿಕಾಯತ್‌, ‘ಪ್ರೀತಿಯ ಜೋ ಬೈಡನ್‌ ಅವರೇ,ಪ್ರಧಾನಿ ಮೋದಿಯವರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳ ವಿರುದ್ಧ ನಾವು ಭಾರತೀಯ ರೈತರು ಪ್ರತಿಭಟನೆ ನಡೆಸುತ್ತಿದ್ದೇವೆ.ಕಳೆದ 11 ತಿಂಗಳಲ್ಲಿ 700 ರೈತರು ಪ್ರತಿಭಟನೆಯಲ್ಲಿ ಸಾವನ್ನಪ್ಪಿದ್ದಾರೆ.ರೈತರನ್ನು ರಕ್ಷಿಸಬೇಕಿದ್ದರೆ ಈ ಕರಾಳ ಕಾನೂನುಗಳನ್ನು ರದ್ದುಗೊಳಿಸಬೇಕು. ಪ್ರಧಾನಿ ಮೋದಿಯವರನ್ನು ಭೇಟಿ ಮಾಡುವಾಗ ದಯವಿಟ್ಟು ನಮ್ಮ ಆತಂಕಗಳ ಬಗ್ಗೆ ಗಮನಹರಿಸಿ,’ ಎಂದು ಟ್ವೀಟ್‌ ಮಾಡಿದ್ದಾರೆ.

ADVERTISEMENT

ಇದೇ ಟ್ವೀಟ್‌ನ ಜೊತೆಗೆ ಅವರು #Biden_SpeakUp4Farmers (ರೈತರ ಬಗ್ಗೆ ಮಾತನಾಡಿ ಬೈಡನ್‌) ಎಂಬ ಹ್ಯಾಷ್‌ಟ್ಯಾಗ್‌ ಅನ್ನೂ ಬಳಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.