ADVERTISEMENT

ಜಾತಿ ಸಮೀಕರಣ: ಪಂಜಾಬ್‌ಗೆ ಹಿಂದೂ ಸಿಎಂ, ಸಿಖ್‌, ದಲಿತ ಡಿಸಿಎಂ?

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 10:37 IST
Last Updated 19 ಸೆಪ್ಟೆಂಬರ್ 2021, 10:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಂಡೀಗಡ: ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಎಐಸಿಸಿಗೆ ಮುಂದಿನ ಸಿಎಂ ಆಯ್ಕೆ ವಿಚಾರ ತಲೆನೋವಾಗಿ ಪರಿಣಮಿಸಿದೆ. ಪ್ರಸ್ತುತ ಪಂಜಾಬ್‌ ಕಾಂಗ್ರೆಸ್‌ ಮುಂದಿನ ಶಾಸಕಾಂಗ ಪಕ್ಷದ ನಾಯಕರ ಆಯ್ಕೆಗೆ ಜಾತಿ ಸಮೀಕರಣದ ಪರಿಹಾರದ ದಾರಿ ಕಂಡುಕೊಡಿದೆ.

ಅಖಿಲ ಭಾರತ ಕಾಂಗ್ರೆಸ್‌ ಸಮಿತಿ(ಎಐಸಿಸಿ) ಪ್ರಧಾನ ಕಾರ್ಯದರ್ಶಿ ಮತ್ತು ಪಂಜಾಬ್‌ ಕಾಂಗ್ರೆಸ್‌ ವ್ಯವಹಾರಗಳ ಮುಖ್ಯಸ್ಥ ಹರೀಶ್‌ ರಾವತ್‌ ಮತ್ತು ಪಕ್ಷದ ಕೇಂದ್ರೀಯ ವೀಕ್ಷಕರಾದ ಅಜಯ್‌ ಮಾಕನ್‌ ಮತ್ತು ಹರೀಶ್‌ ಚೌಧರಿ ರಾಜ್ಯದಲ್ಲಿ ವಾಸ್ತವ್ಯ ಹೂಡಿದ್ದು, ಪಕ್ಷದ ಮುಖಂಡರೊಂದಿಗೆ ಚರ್ಚೆಸಿ, ಅಭಿಪ್ರಾಯಗಳನ್ನು ಸಂಗ್ರಹಿಸುತ್ತಿದ್ದಾರೆ.

ಜಾತಿ ಸಮೀಕರಣಕ್ಕಾಗಿ ಎರಡು ಉಪಮುಖ್ಯಮಂತ್ರಿ ಸ್ಥಾನಗಳನ್ನು ಸೃಷ್ಟಿಸಲು ಮುಂದಾಗಿದ್ದಾರೆ. ಹಿಂದೂ ಶಾಸಕಾಂಗ ಪಕ್ಷದ ನಾಯಕನಾದರೆ ಸಿಖ್‌ ಮತ್ತು ದಲಿತರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಲು ವರಿಷ್ಠರು ಮುಂದಾಗಿದ್ದಾರೆ. ಕೇಂದ್ರೀಯ ವೀಕ್ಷಕರು ದೆಹಲಿ ನಾಯಕರ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ಡೆಕ್ಕನ್‌ ಹೆರಾಲ್ಡ್‌ ವರದಿ ಮಾಡಿದೆ.

ADVERTISEMENT

ಪ್ರಮುಖವಾಗಿ ಪಂಜಾಬ್‌ ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥ ಸುನೀಲ್‌ ಜಾಖರ್‌, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನವಜೋತ್‌ ಸಿಂಗ್‌ ಸಿಧು ಹಾಗೂ ಸುಖ್‌ಜಿಂದರ್‌ ಸಿಂಗ್‌ ರಂಧಾವಾ ಸಿಎಂ ಸ್ಥಾನ ಆಕಾಂಕ್ಷಿಗಳಾಗಿ ಗುರುತಿಸಿಕೊಂಡಿದ್ದಾರೆ.

ಭಾನುವಾರ ನಡೆದ ಪಂಜಾಬ್‌ ಕಾಂಗ್ರೆಸ್‌ ಶಾಸಕಾಂಗ ಸಭೆಯಲ್ಲಿ ಪಕ್ಷದ ನಿರ್ಧಾರ ಸ್ವಾಗತಾರ್ಹವೆಂದು ಶಾಸಕಾಂಗ ನಾಯಕರು ತಿಳಿಸಿದ್ದಾರೆ. ಸಭೆಗೂ ಮುನ್ನ ಹಲವು ಶಾಸಕಾಂಗ ನಾಯಕರು ಜಾಖರ್‌ ಮತ್ತು ರಂಧಾವಾ ಅವರ ನಿವಾಸಕ್ಕೆ ತೆರಳಿ ಚರ್ಚಿಸಿದ್ದರು.

ಸುಖ್‌ಜಿಂದರ್‌ ರಂಧಾವಾ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ‌ಸೂಚಿಸಿದೆ ಎಂದು ಎಎನ್‌ಐ ವರದಿ ಮಾಡಿದೆ. ಈ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಂಧಾವಾ, ನಾನು ಯಾವುದೇ ಹುದ್ದೆಗಾಗಿ ಹಂಬಲಿಸುತ್ತಿಲ್ಲ. ನಾನೊಬ್ಬ ಕಾಂಗ್ರೆಸ್‌ ಮನುಷ್ಯ ಎಂದರು.

'ಪಕ್ಷ ಮತ್ತು ರಾಜ್ಯದ ಜನತೆ ತಮ್ಮ ಪರ ಇರುವ ವರೆಗೆ ಮಾತ್ರ ಮುಖ್ಯಮಂತ್ರಿ ಸ್ಥಾನದಲ್ಲಿ ಉಳಿಯಲು ಸಾಧ್ಯ' ಎಂದು ಅಮರಿಂದರ್‌ ಸಿಂಗ್‌ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಕ್ಕೆ ರಂಧಾವಾ ಪ್ರತಿಕ್ರಿಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.