ನವದೆಹಲಿ: ಹಾಲುಣಿಸುವ ತಾಯಂದಿರು ಮತ್ತು ಗರ್ಭಿಣಿಯರಿಗೆ ಆದ್ಯತೆ ಮೇರೆಗೆ ಕೊರೊನಾ ಲಸಿಕೆ ನೀಡುವ ಸಂಬಂಧ, ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ಒಪ್ಪಿಗೆ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ ಹಾಗೂ ಬಿ.ವಿ. ನಾಗರತ್ನ ಅವರಿದ್ದ ನ್ಯಾಯಪೀಠ, ಎರಡು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಕೇಂದ್ರಕ್ಕೆ ನೋಟಿಸ್ ನೀಡಿದೆ. ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಡಿಸಿಪಿಸಿಆರ್) ಈ ಅರ್ಜಿ ಸಲ್ಲಿಸಿದೆ.
‘ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರು ಹೆಚ್ಚಿನ ಅಪಾಯಗೊಳ್ಳಗಾಗುವ ವರ್ಗವೆಂದು ಘೋಷಿಸುವ ಅವಶ್ಯಕತೆಯಿದೆ. ಇವರಿಗೆ ಲಸಿಕೆ ನೀಡಿಕೆ ಕುರಿತು ಮಾರ್ಗಸೂಚಿ ಹೊರಡಿಸಲಾಗಿದೆ. ಆದರೆ, ಲಸಿಕೆ ಪಡೆಯುವುದರಿಂದ ಗರ್ಭಿಣಿಯರ ಮೇಲೆ ಕೆಲವು ಪ್ರತಿಕೂಲ ಪರಿಣಾಮ ಉಂಟಾಗಬಹುದು ಎಂದು ಹೇಳಲಾಗುತ್ತಿದೆ. ಕೊರೊನಾ ಲಸಿಕೆ ಪರಿಣಾಮಗಳ ಕುರಿತು ನಿರಂತರ ಸಂಶೋಧನೆ ನಡೆಸುವ ಅವಶ್ಯಕತೆ ಇದೆ’ ಎಂದು ಡಿಸಿಪಿಸಿಆರ್ ಪರ ವಕೀಲರಾದ ವೃಂದಾ ಗ್ರೋವರ್ ತಿಳಿಸಿದರು.
ಗರ್ಭಿಣಿ ಹಾಗೂ ಹಾಲುಣಿಸುವ ತಾಯಂದಿರಿಗೆ ಲಸಿಕೆ ನೀಡಿಕೆ ಸಂಬಂಧ, ನೋಂದಣಿಗೆ ಒಂದು ನಿರ್ದಿಷ್ಟ ವೇದಿಕೆ ರಚಿಸುವ ಅವಶ್ಯಕತೆ ಇದೆ ಎಂದೂ ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.