ADVERTISEMENT

ಬಿಹಾರ ಚುನಾವಣೆ: ಕೆಲವೊಮ್ಮೆ ಜನರು ಎರಡನೇ ಅವಕಾಶ ನೀಡುತ್ತಾರೆ; ಸೋನು ಸೂದ್

ಏಜೆನ್ಸೀಸ್
Published 12 ನವೆಂಬರ್ 2020, 8:52 IST
Last Updated 12 ನವೆಂಬರ್ 2020, 8:52 IST
ನಟ ಸೋನು ಸೂದ್
ನಟ ಸೋನು ಸೂದ್   

ನವದೆಹಲಿ: ಲಾಕ್‌ಡೌನ್ ಘೋಷಣೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ವಲಸೆ ಕಾರ್ಮಿಕರು ಮನೆಗಳಿಗೆ ಮರಳಲು ಸಹಾಯ ಮಾಡುವ ಮೂಲಕ ಶ್ಲಾಘನೆಗೆ ಒಳಗಾಗಿದ್ದ ನಟ ಸೋನು ಸೂದ್, ಬಿಹಾರದ ಜನರು ಸರ್ಕಾರ ಅವರಿಗಾಗಿ ಏನನ್ನು ಮಾಡಿದೆ ಎಂಬುದನ್ನು ಸರಿಯಾಗಿ ನೋಡಿರಬೇಕು ಎಂದು ಹೇಳಿದ್ದಾರೆ.

ಬಿಹಾರ ಚುನಾವಣೆ ಫಲಿತಾಂಶದ ಕುರಿತು ಪ್ರಶ್ನಿಸಿದ್ದಕ್ಕೆ, ಜನರು ಸರಿಯಾದುದನ್ನು ನೋಡುತ್ತಾರೆ. ಭಾರತದ ಜನರು ಸಾಕಷ್ಟು ಭರವಸೆಗಳನ್ನು ಹೊಂದಿದ್ದಾರೆ ಮತ್ತು ಅವರು ಕೆಲವೊಮ್ಮೆ ನಿಮಗೆ ಎರಡನೇ ಅವಕಾಶವನ್ನು ನೀಡುತ್ತಾರೆ. ಅಥವಾ ಮೂರನೇ ಅವಕಾಶವನ್ನು ನೀಡಬಹುದು. ಅವರ ಜೀವನವು ಉತ್ತಮವಾಗಿರಬೇಕೆಂದು ಅವರು ಬಯಸುತ್ತಾರೆ ಎಂದು ಎನ್‌ಡಿಟಿವಿಗೆ ತಿಳಿಸಿದ್ದಾರೆ.

ಮುಂಬೈ ಮತ್ತು ಮಹಾರಾಷ್ಟ್ರದ ಇತರ ಭಾಗಗಳಿಂದ ಬಸ್ಸುಗಳನ್ನು ಬಾಡಿಗೆಗೆ ಪಡೆದು ಹೆಚ್ಚಿನ ಸಂಖ್ಯೆಯ ವಲಸಿಗರಿಗೆ ಮುಖ್ಯವಾಗಿ ಬಿಹಾರ ಮತ್ತು ಉತ್ತರ ಪ್ರದೇಶಕ್ಕೆ ಮರಳಲು ಸಹಾಯ ಮಾಡಿದ್ದ ಸೂದ್, ನಾನು ಬಿಹಾರದಲ್ಲಿ ಬಹಳಷ್ಟು ಜನರೊಂದಿಗೆ ಸಂಪರ್ಕ ಹೊಂದಿದ್ದೇನೆ. ಶಿಕ್ಷಣ ಮತ್ತು ಮೂಲಸೌಕರ್ಯಗಳ ಬಗ್ಗೆ ಮಾತನಾಡಿದರೆ ಅವರು ಕೆಟ್ಟ ಪರಿಸ್ಥಿತಿಯಲ್ಲಿದ್ದಾರೆ ಎಂದಿದ್ದಾರೆ.

ADVERTISEMENT

ಈಗ ಯಾರು ಗೆದ್ದರೂ ಅದು ಮುಖ್ಯವಲ್ಲ ಎಂದು ನಾನು ಭಾವಿಸುತ್ತೇನೆ ಮತ್ತು ನಂಬುತ್ತೇನೆ. ಐದು ವರ್ಷಗಳ ನಂತರ ನಾವು ಬೇರೆ ಬಿಹಾರವನ್ನು ಹೊಂದಿರುವುದು ಮುಖ್ಯವಾಗುತ್ತದೆ. ಅವರು ನಂಬಿದ್ದನ್ನು ನೀಡಿರುವ ಸರ್ಕಾರವನ್ನು ಆಯ್ಕೆ ಮಾಡುವ ಬಗ್ಗೆ ಅವರು ಹೆಮ್ಮೆಪಡಬೇಕು ಎಂದು ತಿಳಿಸಿದ್ದಾರೆ.

ಕೊರೊನಾ ವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ಅವರ ಪ್ರಯತ್ನಗಳಿಗಾಗಿ ವ್ಯಾಪಕ ಪ್ರಶಂಸೆ ವ್ಯಕ್ತವಾಯಿತು ಮತ್ತು ಹಲವಾರು ಪ್ರಶಸ್ತಿಗಳನ್ನು ಪಡೆದ 47 ವರ್ಷದ ನಟ, ನೆರವಿನ ಅಗತ್ಯವಿರುವವರಿಗೆ ಸಹಾಯ ಮಾಡಲು ಟೋಲ್-ಫ್ರೀ ಸಹಾಯವಾಣಿ ಸಂಖ್ಯೆಯನ್ನು ಸಹ ಪ್ರಾರಂಭಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.